ಮೈಸೂರಿನ ಕೆಆರ್ಎಸ್ ರಸ್ತೆಯಲ್ಲಿರುವ ಶ್ರೀ ಲಕ್ಷಿ ವೆಂಕಟೇಶ್ವರ ದೇವಸ್ಥಾನದಲ್ಲಿ ಲೋಪ ದೋಷಗಳು ಹೆಚ್ಚಾಗಿದ್ದು, ಆಡಳಿತ ಮಂಡಳಿಯ ಮೇಲೆ ಭಕ್ತಾದಿಗಳಿಗೆ ಅಸಮಾಧಾನ ಉಂಟಾಗುವಂತೆ ಮಾಡಿದೆ. ಈ ದೇವಾಲಯದಲ್ಲಿ ಭಕ್ತಾದಿಗಳು ತಮ್ಮ ಪೂರ್ವಜರ ಸ್ಮರಣಾರ್ಥವಾಗಿ ಅವರ ಹೆಸರಿನಲ್ಲಿ ಪುದುವಟ್ಟನ್ನು ಇಡುವುದು ವಾಡಿಕೆ. ಅವರು ನಿಧನರಾದ ದಿನದಂದು ಅವರ ಹೆಸರಿನಲ್ಲಿ ಅವರ ಕುಟುಂಬಸ್ಥರು ಪುದವಟ್ಟನ್ನು ಇಟ್ಟು ಸಂಕಲ್ಪ ಮಾಡುತ್ತಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ದೇವಸ್ಥಾನದ ಆಡಳಿತ ಮಂಡಳಿಯವರು ಪುದವಟ್ಟು ಇಟ್ಟ ವರಿಗೆ ಅವರ ಸಂಕಲ್ಪ ದಿನವನ್ನು ಪತ್ರದ ಮುಖೇನ ನೆನಪಿಸುವ ಅಥವಾ ದೂರವಾಣಿ ಮೂಲಕ ತಿಳಿಸುವ ಪ್ರಯತ್ನ ಮಾಡುತ್ತಿಲ್ಲ. ಈ ಬಗ್ಗೆ ದೇವಸ್ಥಾನ ಆಡಳಿತ ಮಂಡಳಿಯ ಕಚೇರಿಯಲ್ಲಿ ವಿಚಾರಿಸಿದರೆ, ಅಲ್ಲಿನ ಸಿಬ್ಬಂದಿ ಏರುಧ್ವನಿಯಲ್ಲಿ ಮಾತನಾಡುತ್ತಾರೆ. ಇದೊಂದು ಐತಿಹಾಸಿಕ ದೇವಾಲಯ ವಾಗಿದ್ದು, ನಿತ್ಯ ಇಲ್ಲಿಗೆ ನೂರಾರು ಜನರು ಆಗಮಿಸುತ್ತಾರೆ. ಆದರೆ ಇಲ್ಲಿ ಟಿಕೆಟ್ ವಿತರಿಸಲು ಗಣಕ ಯಂತ್ರದ ವ್ಯವಸ್ಥೆ ಮಾಡಿಲ್ಲ. ಅಲ್ಲದೆ ಅಲ್ಲಿನ ಸಿಬ್ಬಂದಿ ಭಕ್ತಾದಿಗಳಿಂದ ಹೆಚ್ಚುವರಿ ಹಣ ವಸೂಲಿ ಮಾಡುತ್ತಿದ್ದಾರೆ. ಇನ್ನು ಪ್ರಸಾದದ ಗುಣಮಟ್ಟವೂ ಕಡಿಮೆಯಾಗಿದ್ದು, ವ್ಯವಸ್ಥಿತವಾಗಿ ವಿತರಿಸುವಲ್ಲಿಯೂ ಆಡಳಿತ ಮಂಡಳಿ ವಿಫಲವಾಗಿದೆ. ಇದರಿಂದಾಗಿ ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ತೊಂದರೆಯಾಗುತ್ತಿದ್ದು, ಆಡಳಿತ ಮಂಡಳಿಯು ಈ ಬಗ್ಗೆ ಗಮನಹರಿಸಿ, ಸಾರ್ವಜನಿಕರಿಗೆ ಅನುಕೂಲವಾಗುವಂತೆ ನಡೆದುಕೊಂಡು ದೇವಾಲಯದ ಸಿಬ್ಬಂದಿಗೆ ಭಕ್ತಾದಿಗಳೊಂದಿಗೆ ಸೌಜನ್ಯದಿಂದ ವರ್ತಿಸುವಂತೆ ಸೂಚಿಸಲಿ.
-ಭಾಸ್ಕರ್, ವಿ.ವಿ.ಮೊಹಲ್ಲ, ಮೈಸೂರು.





