Mysore
29
light rain

Social Media

ಶುಕ್ರವಾರ, 14 ಆಗಸ್ಟ್ 2026
Light
Dark

ಓದುಗರ ಪತ್ರ: ಸಿಇಟಿ ಪರೀಕ್ಷೆಯಲ್ಲಿ ಜನಿವಾರ ಕತ್ತರಿಸಿದ್ದು ಅಕ್ಷಮ್ಯ

ಓದುಗರ ಪತ್ರ

ಇತ್ತೀಚೆಗೆ ನಡೆದ ಕರ್ನಾಟಕ ಸಿ.ಇ.ಟಿ. ಪರೀಕ್ಷೆಯಲ್ಲಿ ಬೀದರ್ ಮತ್ತು ಶಿವಮೊಗ್ಗದ ಪರೀಕ್ಷಾ ಕೇಂದ್ರಗಳಲ್ಲಿ ಜನಿವಾರ ಧರಿಸಿ ಬಂದ ಬ್ರಾಹ್ಮಣ ಸಮುದಾಯದ ವಿದ್ಯಾರ್ಥಿಗಳಿಗೆ ಜನಿವಾರ ತೆಗೆಯದ ಕಾರಣಕ್ಕಾಗಿ ಪರೀಕ್ಷೆ ಬರೆಯಲು ಅನುಮತಿಸಿಲ್ಲದ ಮತ್ತು ಜನಿವಾರವನ್ನು  ಹಾಗೂ ಕೈಗೆ ಕಟ್ಟಿಕೊಂಡಿರುವ ಕಾಶಿ ದಾರವನ್ನು ಕತ್ತರಿಸಿರುವುದು, ನಿಜಕ್ಕೂ ಹೇಯ, ಅವಮಾನಕರ ಮತ್ತು ಅಕ್ಷಮ್ಯ ಅಪರಾಧವೇ ಸರಿ.

ಬಹುಶಃ ಜನಿವಾರಕ್ಕೆ ಬ್ಲೂ ಟೂತ್ ಸಿಕ್ಕಿಸಿ ಪರೀಕ್ಷೆಗಳಲ್ಲಿ ನಕಲು ಮಾಡುತ್ತಾರೆ ಎಂದುಕೊಂಡರೆ, ಆಧುನಿಕ ತಂತ್ರಜ್ಞಾನದ ಮೂಲಕ ವಿದ್ಯಾರ್ಥಿಗಳು ಅಂತಹ ಪರೀಕ್ಷೆ ನಕಲು ಮಾಡುವ ವಿದ್ಯುನ್ಮಾನ ವಸ್ತುಗಳನ್ನು ಒಳಗೆ ತರುತ್ತಾರೆಯೇ ಎಂದು ಕಂಡುಕೊಳ್ಳಬಹುದಲ್ಲವೇ? ಅಲ್ಲದೆ ವಿದ್ಯಾರ್ಥಿಗಳನ್ನು ಒಳಬಿಡುವ ಮುನ್ನ ಲೋಹ ಪರೀಕ್ಷಕ ಯಂತ್ರದಲ್ಲಿ ಸ್ಕ್ಯಾನಿಂಗ್ ಮಾಡಿ, ವಿದ್ಯಾರ್ಥಿಗಳನ್ನು ಕೂಲಂಕಷವಾಗಿ ತಪಾಸಣೆ ಮಾಡುವ ಇವರು ಜನಿವಾರದಲ್ಲಿ ಅಂತಹ ವಸ್ತುಗಳಿದ್ದಲ್ಲಿ ತೆಗೆಸಬಹುದಿತ್ತಲ್ಲವೇ?  ಅಷ್ಟಕ್ಕೂ ಪರೀಕ್ಷಾ ಕೇಂದ್ರಗಳಲ್ಲಿ ಜಾಮರ್ ಅಳವಡಿಸುವ ಯೋಚನೆ ಕೂಡ ಮಾಡಬಹುದಿತ್ತು.  ಇಷ್ಟು ನಿರ್ವಹಿಸಿದ ಸಿಬ್ಬಂದಿ ಮುಂದಿನ ದಿನಗಳಲ್ಲಿ ಹಣೆಗೆ ತಿಲಕವೋ, ನಾಮವೋ,  ವಿಭೂತಿಯೋ, ಕುಂಕುಮವೋ ಹಚ್ಚಿಕೊಂಡು ಹೋದರೆ ಅದನ್ನು ಅಳಿಸಿರಿ  ಎನ್ನಬಹುದು. ಜುಟ್ಟು ಬಿಟ್ಟುಕೊಂಡು  ಹೋದರೆ ಅದನ್ನು  ಕತ್ತರಿಸಿ ಎಂದು ವಿಕೃತಿ ಮೆರೆಯುವುದರಲ್ಲಿ ಸಂದೇಹವೇ ಇಲ್ಲ.

ಅನ್ಯ ಸಮುದಾಯದ ವಸ್ತ್ರ ವೇಷಭೂಷಗಳನ್ನು ತೆಗೆಸಿದ್ದರೆ  ಇಷ್ಟು ಹೊತ್ತಿಗೆ ರಾದ್ಧಾಂತವಾಗುತ್ತಿತ್ತು. ಇಷ್ಟು ದಿನವೂ ಬರೀ ಟೀಕೆ, ಟಿಪ್ಪಣಿಗಳಿಗೆ ಆಹಾರವಾಗುತ್ತಿದ್ದ ವಿಪ್ರ ಸಮುದಾಯ ಇದೀಗ ವಿಕೃತ ಮನಸ್ಸಿನ ಇಂಥವರ ಕೃತ್ಯಗಳಿಗೆ ಒಳಗಾಗುತ್ತಿರುವುದು ಖೇದಕರ ಮತ್ತು ಅವಮಾನಕರ ಸಂಗತಿಯಾಗಿದೆ.

-ವಿಜಯ್ ಹೆಮ್ಮಿಗೆ, ಮೈಸೂರು

 

Tags:
error: Content is protected !!