Mysore
20
mist

Social Media

ಶನಿವಾರ, 24 ಜನವರಿ 2026
Light
Dark

ಓದುಗರ ಪತ್ರ: ಸಾವಯವ ಕೃಷಿ ಪ್ರೋತ್ಸಾಹ ಧನ ಹೆಚ್ಚಿಸಿ

ಓದುಗರ ಪತ್ರ

ಕೇಂದ್ರ ರಾಷ್ಟ್ರೀಯ ನೈಸರ್ಗಿಕ ಕೃಷಿ ಮಿಷನ್ ರೈತರಿಗೆ ಎಕರೆಗೆ ೪,೦೦೦ರೂ. ಆರ್ಥಿಕ ನೆರವು ನೀಡುತ್ತಿರುವುದು ಶ್ಲಾಘನೀಯ. ಆದರೆ ಸಾವಯವ ಕೃಷಿಯ ನೈಜ ವೆಚ್ಚಗಳನ್ನು ಪರಿಗಣಿಸಿದಾಗ ಇದು ತುಂಬಾ ಕಡಿಮೆ. ಜೈವಿಕ ಗೊಬ್ಬರ, ಜೀವಾಮೃತ ತಯಾರಿ, ಮಿಶ್ರ ಬೆಳೆ ಪದ್ಧತಿ, ಕಾಳಜಿ ಕಾರ್ಯಗಳು ಮತ್ತು ಪ್ರಾರಂಭಿಕ ವರ್ಷಗಳಲ್ಲಿ ಕಂಡುಬರುವ ಉತ್ಪಾದನಾ ಕುಸಿತವನ್ನು ನೋಡಿದರೆ, ಒಂದು ಎಕರೆ ಸಾವಯವ ಕೃಷಿಗೆ ಸರಾಸರಿ ಹತ್ತು ಸಾವಿರ ರೂ. ವೆಚ್ಚವಾಗುತ್ತದೆ.

ಆದ್ದರಿಂದ ನೆರವನ್ನು ಕನಿಷ್ಠ ೭,೦೦೦ ರೂ.ಗೆ ಹೆಚ್ಚಿಸುವುದು ರೈತರ ಹಿತಕ್ಕಾಗಿ ಅತ್ಯವಶ್ಯಕ. ಇದೇ ಸಂದರ್ಭದಲ್ಲಿ ರಾಜ್ಯ ಸರ್ಕಾರವೂ ಪ್ರತ್ಯೇಕವಾಗಿ ಪ್ರೋತ್ಸಾಹಧನ ನೀಡುವುದು ಅತ್ಯಗತ್ಯ. ಕರ್ನಾಟಕದಲ್ಲಿ ಸಾವಯವ ಉತ್ಪನ್ನಗಳ ಬೇಡಿಕೆ ವರ್ಷಕ್ಕೆ ಶೇ.೧೨-೧೫ ಹೆಚ್ಚುತ್ತಿರುವಾಗ, ರೈತರಿಗೆ ಸರಿಯಾದ ಮಾರುಕಟ್ಟೆ, ಸಂಗ್ರಹಣೆ ಮತ್ತು ಪ್ರಮಾಣ ಸೌಲಭ್ಯಗಳು ಇನ್ನೂ ಪರ್ಯಾಯ ಮಟ್ಟಕ್ಕೆ ತಲುಪಿಲ್ಲ.

ಪ್ರೋತ್ಸಾಹ ಧನದ ಕೊರತೆಯಿಂದ ಹಲವಾರು ರೈತರು ಸಾವಯವ ಕೃಷಿಯನ್ನು ಕಡೆಗಣಿಸುತ್ತಿರುವುದು ಆತಂಕಕಾರಿ. ರಾಜ್ಯ ಸರ್ಕಾರ ನೆರವು ನೀಡುವುದರಿಂದ ರೈತರಿಗೆ ನಷ್ಟದ ಭಯ ಕಡಿಮೆಯಾಗುತ್ತದೆ, ಸಾವಯವ ಉತ್ಪಾದನೆ ಪ್ರಮಾಣ ಹೆಚ್ಚುತ್ತದೆ ಮತ್ತು ಮಣ್ಣಿನ ಆರೋಗ್ಯ, ಪರಿಸರ ರಕ್ಷಣೆಗೆ ದೊಡ್ಡ ಮಟ್ಟದಲ್ಲಿ ಸಹಕಾರಿಯಾಗುತ್ತದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಎರಡೂ ಸಂಯುಕ್ತವಾಗಿ ನೆರವನ್ನು ಹೆಚ್ಚಿಸಿ, ತಾಂತ್ರಿಕ ಮಾರ್ಗದರ್ಶನ, ಮಾರುಕಟ್ಟೆ ಸಂಪರ್ಕ ಮತ್ತು ಪ್ರಮಾಣ ಸೌಲಭ್ಯಗಳನ್ನು ಬಲಪಡಿಸಿದಾಗ ಮಾತ್ರ ಸಾವಯವ ಕೃಷಿ ರಾಜ್ಯದ ಕೃಷಿ ಕ್ಷೇತ್ರದಲ್ಲಿ ಶಾಶ್ವತ ಪರಿವರ್ತನೆ ತರಲು ಸಾಧ್ಯ.

-ಡಾ. ಎಚ್.ಕೆ.ವಿಜಯಕುಮಾರ್, ಬೆಂಗಳೂರು

Tags:
error: Content is protected !!