ಮೈಸೂರಿನ ಜೆ.ಎಲ್.ಬಿ. ರಸ್ತೆಯಲ್ಲಿರುವ ನಾದಬ್ರಹ್ಮ ಸಂಗೀತ ಸಭಾದಲ್ಲಿ ವಾರದಲ್ಲಿ ಮೂರು-ನಾಲ್ಕು ದಿನಗಳು ಸಂಗೀತ ಕಾರ್ಯಕ್ರಮಗಳು ಮತ್ತು ಇತರೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಸಭಾಂಗಣವು ನಗರದ ಹೃದಯಭಾಗದಲ್ಲಿರುವುದರಿಂದ ಇಡೀ ಸಭಾಂಗಣವೇ ತುಂಬಿ ಹೋಗುತ್ತದೆ. ಹಿರಿಯ ನಾಗರಿಕರು ಹೆಚ್ಚಾಗಿ ಇಲ್ಲಿಗೆ ಬರುತ್ತಾರೆ.
ಆದರೆ, ಸಭಾಂಗಣದಲ್ಲಿ ಕುಳಿತು ಕೊಳ್ಳುವ ಆಸನಗಳೆಲ್ಲಾ ಮುರಿದ ಸ್ಥಿತಿಯಲ್ಲಿ ಇವೆ. ಇಲ್ಲಿರುವ ಆಸನಗಳು ಕುಳಿತುಕೊಳ್ಳಲು ಚಿಕ್ಕದಾಗಿರುವುದರಿಂದ ಇಲ್ಲಿ ನಡೆಯುವ ಕಾರ್ಯಕ್ರಮವನ್ನು ಪ್ರೇಕ್ಷಕರು ಕಷ್ಟ ಪಟ್ಟು ವೀಕ್ಷಿಸುವಂತಾಗಿದೆ. ಈ ಕಾರಣಕ್ಕಾಗಿಯೇ ಹಲವು ಹಿರಿಯ ನಾಗರಿಕರು ಕಾರ್ಯಕ್ರಮದ ಮಧ್ಯದಲ್ಲೇ ಎದ್ದು ಹೋಗುತ್ತಾರೆ. ಈ ಸಂಗೀತ ಸಭಾ ಭವನವನ್ನು ನಿರ್ಮಾಣ ಮಾಡಿ, ಹಲವು ವರ್ಷಗಳಾಗಿದ್ದು, ಸುಣ್ಣ – ಬಣ್ಣ ಕಂಡು ಬಹಳ ವರ್ಷಗಳೇ ಕಳೆದಿವೆ.
ಆಡಳಿತ ಮಂಡಳಿಯು, ಭವನವನ್ನು ನವೀಕರಣ ಮಾಡಿ ಪ್ರೇಕ್ಷಕರು ಕುಳಿತುಕೊಳ್ಳಲು ಒಳ್ಳೆಯ ಆಸನ ವ್ಯವಸ್ಥೆ ಮಾಡಿದರೆ ಹಿರಿಯ ನಾಗರಿಕರಿಗೂ ಅನುಕೂಲವಾಗುತ್ತದೆ. ಈ ಭಾಗದ ಶಾಸಕರಾದ ಟಿ.ಎಸ್. ಶ್ರೀವತ್ಸ ರವರು ತಮ್ಮ ಕ್ಷೇತ್ರಾಭಿವೃದ್ಧಿ ಅನುದಾನದಲ್ಲಿ ಈ ಭವನವನ್ನು ನವೀಕರಣ ಮಾಡಲು ಆಸಕ್ತಿವಹಿಸಬೇಕಾಗಿದೆ.
– ಬೂಕನಕೆರೆ ವಿಜೇಂದ್ರ, ಕುವೆಂಪುನಗರ, ಮೈಸೂರು





