ಮೈಸೂರಿನ ಲಿಂಗದೇವರ ಕೊಪ್ಪಲಿನ ಬಳಿ ಇರುವ ಒಂದು ಖಾಸಗಿ ಹೋಟೆಲ್ ರಸ್ತೆಯನ್ನು ಅತಿಕ್ರಮಣ ಮಾಡಿಕೊಂಡಿದ್ದು, ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.
ಹೋಟೆಲಿಗೆ ಬರುವ ಗ್ರಾಹಕರು ರಸ್ತೆಗೆ ಅಂಟಿಕೊಂಡಂತೆ ವಾಹನಗಳನ್ನು ನಿಲ್ಲಿಸುತ್ತಿದ್ದಾರೆ. ಇದರಿಂದ ಮುಖ್ಯ ರಸ್ತೆಯಲ್ಲಿ ಓಡಾಡುವ ವಾಹನಗಳಿಗೆ ಹಾಗೂ ರಸ್ತೆ ಬದಿಯಲ್ಲಿ ತಿರುಗಾಡುವ ಸಾರ್ವಜನಿಕರಿಗೆ ತುಂಬಾ ತೊಂದರೆ ಉಂಟಾಗುತ್ತಿದೆ.
ಈ ರಸ್ತೆಯಲ್ಲೇ ಶಾಪಿಂಗ್ ಮಾಲ್ ಇರುವುದರಿಂದ ಅಲ್ಲಿಗೆ ಬರುವ ಗ್ರಾಹಕರು, ಅಲ್ಲೇ ಅಕ್ಕಪಕ್ಕದಲ್ಲಿರುವ ಕಾರ್ಖಾನೆಗಳಿಗೆ ಬರುವ ಉದ್ಯೋಗಿಗಳೂ ತೊಂದರೆಗೆ ಒಳಗಾಗಿದ್ದಾರೆ. ಮೈಸೂರು, ಮಡಿಕೇರಿ, ಹಾಸನ, ಚಿಕ್ಕಮಗಳೂರು ಕಡೆಗೆ ಹೋಗುವ ವಾಹನಗಳು ಇದೇ ಮಾರ್ಗವಾಗಿ ಸಂಚರಿಸುವುದರಿಂದ ಬೆಳಗಿನ ಸಮಯ ಹಾಗೂ ಸಂಜೆಯ ಸಮಯದಲ್ಲಿ ವಾಹನಗಳ ದಟ್ಟಣೆ ಆ ರಸ್ತೆಯಲ್ಲಿ ಅತಿ ಹೆಚ್ಚಾಗಿರುತ್ತದೆ.
ಜನ ಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ರಸ್ತೆಯ ಅತಿಕ್ರಮಣ ತೆರವುಗೊಳಿಸುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕಾಗಿದೆ.
-ಗೋವಿಂದೇಗೌಡ, ಅರೇನಹಳ್ಳಿ, ಪಿರಿಯಾಪಟ್ಟಣ ತಾ.





