ಬೆಂಗಳೂರು ವಿಶ್ವವಿದ್ಯಾನಿಲಯಕ್ಕೆ ಮಾಜಿ ಪ್ರಧಾನಿ ಡಾ.ಮನಮೋಹನ ಸಿಂಗ್ ಹೆಸರಿಡಲು ರಾಜ್ಯ ಸರ್ಕಾರ ಮುಂದಾಗಿದ್ದು, ೨೦೨೫-೨೬ನೇ ಸಾಲಿನ ಬಜೆಟ್ನಲ್ಲಿ ಈ ಬಗ್ಗೆ ಉಲ್ಲೇಖಿಸಲಾಗಿದೆ.
ಮಾಜಿ ಪ್ರಧಾನಿ ಡಾ.ಮನಮೋಹನ ಸಿಂಗರು ಈ ಗೌರವಕ್ಕೆ ಅರ್ಹರು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಯಾವುದೇ ರಸ್ತೆ, ವಿಶ್ವವಿದ್ಯಾನಿಲಯಗಳಿಗೆ ಹೆಸರಿಡುವ ವಿಚಾರ ಬಂದಾಗ ಕರ್ನಾಟಕ ಸರ್ಕಾರ ಸ್ಥಳೀಯ ಪ್ರತಿಭೆಗಳನ್ನು ಮತ್ತು ಸಾಧಕರನ್ನು ನಿರ್ಲಕ್ಷಿಸುತ್ತಿರುವುದು ಬೇಸರದ ಸಂಗತಿ. ಬೆಂಗಳೂರು ವಿಶ್ವವಿದ್ಯಾನಿಲಯಕ್ಕೆ ಬೆಂಗಳೂರಿನವರೇ ಆದ ಡಾ.ಎಚ್.ನರಸಿಂಹಯ್ಯ ಅಥವಾ ಮೌಲ್ಯಾಧಾರಿತ ರಾಜಕಾರಣಿ ಎಂದೇ ಜನಜನಿತವಾಗಿದ್ದ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರ ಹೆಸರನ್ನು ಇಡಬಹುದಿತ್ತು. ಆದರೆ ಸರ್ಕಾರ ಹೆಚ್ಚು ಪ್ರಚಲಿತದಲ್ಲಿರುವವರ ಹೆಸರುಗಳನ್ನು ಮಾತ್ರ ಹುಡುಕುತ್ತಿದೆಯೇ ವಿನಾ ಸ್ಥಳೀಯ ಪ್ರತಿಭೆಗಳನ್ನು ಮತ್ತು ಸಾಧಕರನ್ನು ಗುರುತಿಸುತ್ತಿಲ್ಲ. ಸರ್ಕಾರ ಈ ಬಗ್ಗೆ ಗಮನಹರಿಸಿ ಸ್ಥಳೀಯ ಸಾಧಕರ ಹೆಸರುಗಳಿಗೆ ಮೊದಲ ಆದ್ಯತೆ ನೀಡಲಿ.
-ರಮಾನಂದ ಶರ್ಮಾ, ಜೆ.ಪಿ.ನಗರ, ಬೆಂಗಳೂರು.