ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು
ಹನೂರು: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಮಹದೇಶ್ವರ ಸ್ವಾಮಿಗೆ ಗುರುವಾರ ಮಹಾರುದ್ರಾಭಿಷೇಕ ಪೂಜೆಯನ್ನು ಸಾಂಪ್ರದಾಯಿಕವಾಗಿ ನೆರವೇರಿಸಲಾಯಿತು.
ಶ್ರೀ ಮಹದೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಪ್ರತಿ ಗುರುವಾರ ಸ್ವಾಮಿಗೆ ಮಹಾರುದ್ರಾಭಿಷೇಕ ನೆರವೇರಿಸಲಾಗುತ್ತದೆ. ಅದರಂತೆ ಬೇಡಗಂಪಣ ಸಮುದಾಯದ ಅರ್ಚಕರು ಭಕ್ತಿ ಶ್ರದ್ಧೆಯಿಂದ ಪೂಜೆ ನೆರವೇರಿಸಿದರು.
ಬೆಳಗ್ಗೆ 10:30 ರಿಂದ ಮಧ್ಯಾಹ್ನ 3 ಗಂಟೆವರೆಗಿನ ಕಾಲಾವಕಾಶದಲ್ಲಿ 101 ತೆಂಗಿನ ಕಾಯಿ 101 ಅಕ್ಕಿ ತಂಬಿಟ್ಟು, 101 ಎಳ್ಳಿನ ಉಂಡೆ, ನೆನೆ ಹಾಕಿದ ಹಸಿ ಕಡಲೆ ಅಕ್ಕಿಯನ್ನು ಪಡಿತರವನ್ನಾಗಿ ಬೇಡಗಂಪಣ ಅರ್ಚಕರು ಬಳಕೆ ಮಾಡಿ ಪೂಜೆ ಸಲ್ಲಿಸಿದರು.
ಶ್ರೀ ವೀರಭದ್ರೇಶ್ವರ, ಬಸವೇಶ್ವರ ಉತ್ಸವ ಮೂರ್ತಿಗಳಿಗೆ ಜಲ ಅಭಿಷೇಕ, ವಿಭೂತಿ ಧಾರಣೆ, ಬಿಲ್ವದಳ, ಪಂಚಾಮೃತ ಅಭಿಷೇಕವನ್ನು 101 ಬಾರಿ ನೆರವೇರಿಸಲಾಗುತ್ತದೆ. ಮೊದಲ ಹಾಗೂ ಕೊನೆಯ ಪೂಜೆಯನ್ನು ದೇವಾಲಯದ ಹೊರಗಿನ ಗಣಪತಿ, ಆಲಂಬಾಡಿ, ಬಸವೇಶ್ವರ, ಗಾಳಿ ಬಸವೇಶ್ವರ ಕಟ್ಟೆ ಬಸವೇಶ್ವರ, ಇಷ್ಟಾರ್ಥ ಸಿದ್ಧಿಪೀಠ ದ್ವಜಸ್ತಂಭ, ಬೇಡರ ಕಣ್ಣಪ್ಪ, ಶ್ರೀ ಕಾಳಹಸ್ತಿಶ್ವರ, ಹುಲಿವಾಹನ, ಬಸವ ವಾಹನ ರುದ್ರಾಕ್ಷಿ ಮಂಟಪಗಳಿಗೂ ಪೂಜೆ ನೆರವೇರಿಸಲಾಗುತ್ತದೆ.
ಪಂಚಾಮೃತ ಅಭಿಷೇಕದ ಮೇಲೆ ಕಿರೀಟಧಾರಣೆ ಅಲಂಕಾರ ಮಾಡಿ ಸೇವಾರ್ಥದಾರರಿಗೆ ದರ್ಶನ ನೀಡಲಾಗುತ್ತದೆ. ಅಭಿಷೇಕವನ್ನು ತೆರವುಗೊಳಿಸಿ, ವಿಶೇಷ ಹೂವಿನ ಅಲಂಕಾರ ಮಾಡಿ ದೀಪ ದೂಪದಾರತಿಯೊಂದಿಗೆ ಮಹಾ ಮಂಗಳಾರತಿ ನೆರವೇರಿಸಲಿದ್ದಾರೆ.





