ಎಚ್.ಡಿ.ಕೋಟೆ ತಾಲ್ಲೂಕಿನ ಕೆ.ಎಡತೊರೆ ಗ್ರಾಮದಿಂದ ಹನುಮಂತ ನಗರ ಗಿರಿಜನ ಹಾಡಿಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಕೆಸರುಮಯ ವಾಗಿದ್ದು, ಜನರು ಸಂಚಾರ ಮಾಡಲು ಪರದಾಡುವಂತಾಗಿದೆ.
ಹನುಮಂತ ನಗರ ಗಿರಿಜನ ಹಾಡಿಯಲ್ಲಿ ಸುಮಾರು 30ಕ್ಕೂ ಹೆಚ್ಚು ಆದಿವಾಸಿ ಬುಡಕಟ್ಟು ಸಮುದಾಯದ ಕುಟುಂಬಗಳು ವಾಸವಾಗಿದ್ದು, ಈ ಹಾಡಿಗೆ ಇದೊಂದೇ ಸಂಪರ್ಕ ರಸ್ತೆಯಾಗಿದೆ. ಆದರೆ ಈ ರಸ್ತೆಯೂ ಸಂಪೂರ್ಣ ಮಣ್ಣಿನ ರಸ್ತೆಯಾಗಿದ್ದು, ಮಳೆಗಾಲ ಬಂತೂ ಎಂದರೆ ಈ ರಸ್ತೆಯಲ್ಲಿ ಸಂಚರಿಸುವುದೇ ಸಾಹಸಮಯ ಕೆಲಸವಾಗಿದೆ. ಸದ್ಯ ಈಗ ಮಳೆಗಾಲವಾಗಿದ್ದು, ರಸ್ತೆ ಕೆಸರಿನ ಗದ್ದೆಯಂತಾಗಿದೆ. ಇಂತಹ ಹದಗೆಟ್ಟ ರಸ್ತೆಯಲ್ಲಿ ವಾಹನ ಸವಾರರು ಹಾಗೂ ಪಾದಚಾರಿಗಳು ಜಾರಿ ಬಿದ್ದು ಗಾಯಗೊಂಡಿರುವ ಉದಾಹರಣೆಗಳಿವೆ.
ಈ ಹಿಂದೆ ಶಾಸಕ ಅನಿಲ್ ಚಿಕ್ಕಮಾದುರವರು ಇಲ್ಲಿಗೆ ಭೇಟಿ ನೀಡಿದ್ದಾಗ ರಸ್ತೆ ಅಭಿವೃದ್ಧಿ ಮಾಡಿಸಿಕೊಡುವುದಾಗಿ ಭರವಸೆ ನೀಡಿದ್ದರು. ಅವರು ಈ ಬಾರಿಯಾದರೂ ಭರವಸೆಯಂತೆ ರಸ್ತೆ ದುರಸ್ತಿ ಮಾಡಿಕೊಡಬೇಕು ಎಂಬುದು ಇಲ್ಲಿನ ಜನರ ಬೇಡಿಕೆಯಾಗಿದೆ.
-ಕೆ.ಎಸ್.ಹರೀಶ್ ಗೌಡ, ಕೆ.ಎಡತೊರೆ, ಎಚ್.ಡಿ.ಕೋಟೆ ತಾ.