ಮಡಿಕೇರಿ: ಕೊಡಗಿನಲ್ಲಿ ವನ್ಯಜೀವಿ–ಮಾನವ ಸಂಘರ್ಷ ಮತ್ತೆ ಮುಂದುವರಿದಿದೆ. ಈ ಬಾರಿ ಕಾಡಾನೆಗಳ ಬುದ್ಧಿವಂತಿಕೆ ಹಾಗೂ ಉಪಾಯದಿಂದ ನಡೆದ ಘಟನೆ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ಮಡಿಕೇರಿ ತಾಲ್ಲೂಕಿನ ಎಂ. ಚೆಂಬು ಗ್ರಾಮದಲ್ಲಿ ಕಾಡಾನೆ ವಿದ್ಯುತ್ ತಂತಿಯ ಮೇಲೆ ಬೈನೆ ಮರವನ್ನು ಬೀಳಿಸಿ ಅನಾಹುತ ಸೃಷ್ಟಿಸಿದೆ. ಕಲ್ಲುಗುಂಡಿ ಸಮೀಪದ ಎಂ. ಚೆಂಬು ಗ್ರಾಮದ ರಾಧಾಕೃಷ್ಣ ಅವರ ಮನೆ ಸಮೀಪ ಈ ಘಟನೆ ನಡೆದಿದೆ.
ಕಾಡಾನೆ ವಿದ್ಯುತ್ ತಂತಿಯ ಮೇಲೆ ಬೈನೆ ಮರವನ್ನು ಬೀಳಿಸಿದ್ದರಿಂದ ಎರಡು ವಿದ್ಯುತ್ ಕಂಬಗಳು ಧರಾಶಾಹಿಯಾಗಿವೆ. ಬಿದ್ದ ಕಂಬಗಳು ಸಮೀಪದ ದನದ ಕೊಟ್ಟಿಗೆಯ ಮೇಲೂ ಬಿದ್ದು ಹಾನಿಯಾಗಿದೆ.
ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಕಾಡಾನೆಗಳ ಈ ಉಪಾಯದಿಂದ ಗ್ರಾಮಸ್ಥರು ಬೆಚ್ಚಿಬಿದ್ದಿದ್ದು, ನಿರಂತರ ವನ್ಯಜೀವಿ ಹಾವಳಿಯಿಂದ ಆತಂಕದಲ್ಲಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಹಾನಿಯ ಮಾಹಿತಿ ಸಂಗ್ರಹಿಸಿದ್ದಾರೆ. ಕಾಡಾನೆಗಳ ಉಪಟಳಕ್ಕೆ ಶಾಶ್ವತ ಪರಿಹಾರ ಕಲ್ಪಿಸಿ, ಗ್ರಾಮಸ್ಥರ ಜೀವ ಹಾಗೂ ಆಸ್ತಿಪಾಸ್ತಿಗೆ ರಕ್ಷಣೆ ಒದಗಿಸಬೇಕೆಂದು ಸ್ಥಳೀಯರು ಸರ್ಕಾರ ಹಾಗೂ ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.




