ಬೆಂಗಳೂರಿನ ನಾಗರಿಕರಿಗೆ ಸುರಕ್ಷಿತವಾಗಿ ಪಾದಚಾರಿ ಮಾರ್ಗದಲ್ಲಿ ನಡೆಯುವ ಹಕ್ಕಿದೆ.ಪಾದಚಾರಿ ಮಾರ್ಗಗಳ ಒತ್ತುವರಿ ಎಂದರೆ ನಾಗರಿಕರ ಸುರಕ್ಷತೆ ಕಸಿದುಕೊಂಡಂತೆ. ಇದು ಕೇವಲ ಸರಕಾರದ ಕಾರ್ಯಾಚರಣೆಯಲ್ಲ. ಪಾದಚಾರಿ ಮಾರ್ಗ ಒತ್ತುವರಿ ತೆರವುಗೊಳಿಸಲು ಸುಪ್ರೀಂಕೋರ್ಟ್ ಆದೇಶವೂ ಇದೆ. ಇದು ಪ್ರತಿಯೊಬ್ಬ ನಾಗರಿಕನೂ ಪಾಲ್ಗೊಳ್ಳಬೇಕಾದ ಜನಾಂದೋಲನ ಆಗಬೇಕು. ನಗರದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಟ್ರಾಫಿಕ್ ದಟ್ಟಣೆ ಮತ್ತು ಪಾದಚಾರಿ ಮಾರ್ಗಗಳ ಒತ್ತುವರಿಯು, ಪಾದಚಾರಿಗಳ ಜೀವಕ್ಕೆ ಅಪಾಯಕಾರಿಯಾಗಿ ಪರಿಣಮಿಸಿರುವುದರಿಂದ ಒತ್ತುವರಿ ತೆರವು ಮಾಡುವುದು ಅನಿವಾರ್ಯವಾಗಿದೆ ಎಂದು ಹೇಳಿ ಒತ್ತುವರಿ ತೆರವು ಮಾಡಿಸುತ್ತಿರುವುದು ಶ್ಲಾಘನೀಯ.
ಕಂದಾಯ ಸಚಿವರಾಗಿzಗ ಇಲಾಖೆಯನ್ನು ಒಂದು ತಹಬಂದಿಗೆ ತಂದು ಜನಮನ್ನಣೆ ಪಡೆದ ಕೃಷ್ಣ ಬೈರೇಗೌಡರು ಈಗ ಜಿಬಿಎ ಸಚಿವರಾಗಿ ಪಾದಚಾರಿ ಮಾರ್ಗ ಒತ್ತುವರಿ ತೆರವಿಗೆ ಕಂಕಣ ತೊಟ್ಟಿರುವುದು ಸ್ವಾಗತಾರ್ಹ.
ಸಾರ್ವಜನಿಕರಿಂದ ಬರುವ ದೂರುಗಳಿಗೆ ತ್ವರಿತವಾಗಿ ಸ್ಪಂದಿಸಿ ಬೆಂಗಳೂರು ನಗರದ ಎಲ್ಲ ಭಾಗಗಳಲ್ಲಿಯೂ ಪಾದಚಾರಿ ಮಾರ್ಗ ಅತಿಕ್ರಮಣವನ್ನು ಮುಕ್ತಗೊಳಿಸುವ ಗುರಿಯನ್ನು ಜಿಬಿಎ ಹೊಂದಿದೆ, ಎಂದು ಮುಖ್ಯ ಆಯುಕ್ತರಾದ ಮಹೇಶ್ವರ ರಾವ್ ಹೇಳಿರುವುದು ಒಳ್ಳೆಯ ಬೆಳವಣಿಗೆ. ರಾಜ್ಯದ ಎಲ್ಲ ನಗರಗಳಲ್ಲೂ ಪಾದಚಾರಿ ಮಾರ್ಗ ಒತ್ತುವರಿ ತೆರವು ಮಾಡುವುದು ಸೂಕ್ತ.
-ಬೆಸಗರಹಳ್ಳಿ ರವಿ ಪ್ರಸಾದ್, ಮೈಸೂರು




