ಬಿಮ್ಸ್ ಆಸ್ಪತ್ರೆಯಲ್ಲಿ ನಾಲ್ವರು ಗರ್ಭಿಣಿಯರು ಸಾವನ್ನಪ್ಪಿದ್ದು, ಈ ಸಾವಿಗೆ ನಕಲಿ ಔಷಽಯೇ ಕಾರಣ ಎಂದು ಪಶ್ಚಿಮ ಬಂಗಾಳದ ಫಾರ್ಮಸುಟಿಕಲ್ಸ್ ಕಂಪೆನಿಯನ್ನು ಕಪ್ಪು ಪಟ್ಟಿಗೆ ಸೇರಿಸಿ, ಅದರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಸರ್ಕಾರ ತೀರ್ಮಾನಿಸಿದೆ. ಅಲ್ಲದೆ ರಾಜ್ಯದ ಔಷಧ ನಿಯಂತ್ರಕ ಉಮೇಶ್ ಅವರನ್ನು ಅಮಾನತ್ತು ಮಾಡಿದೆ ಎಂಬುದಾಗಿ ಪತ್ರಿಕೆಗಳಲ್ಲಿ ವರದಿಯಾಗಿದೆ.
ರಾಜ್ಯದ ಎಲ್ಲ ಜಿಲ್ಲಾ ಹಾಗೂ ತಾಲ್ಲೂಕು ಆಸ್ಪತ್ರೆಗಳಿಗೆ ಮತ್ತು ಆರೋಗ್ಯ ಕೇಂದ್ರಗಳಿಗೆ ಆರೋಗ್ಯ ಇಲಾಖೆಯು ಕೆಎಸ್ಎಂಸಿಎಲ್ ನಿಗಮದಿಂದ ಟೆಂಡರ್ ಮೂಲಕ ಔಷಧಗಳನ್ನು ಪೂರೈಸುತ್ತದೆ. ಯಾವಾಗ ಬಿಮ್ಸ್ ಆಸ್ಪತ್ರೆಯಲ್ಲಿ ಗರ್ಭಿಣಿಯರು ಸಾವನ್ನಪ್ಪಿದರೋ ಕೂಡಲೇ ಲೋಕಾಯುಕ್ತ ಅಧಿಕಾರಿಗಳು ಬಳ್ಳಾರಿಯ ಜಿಲ್ಲಾ ಔಷಧ ಉಗ್ರಾಣದ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಅಲ್ಲಿ ಅವಧಿ ಮೀರಿ ಎರಡು ವರ್ಷಗಳಾಗಿರುವ
ಔಷಧಗಳೂ ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಅವಧಿ ಮೀರಿದ ಔಷಧಗಳ ವಿಲೇವಾರಿಗೆ ಮೇಲಧಿಕಾರಿಗಳು ಸರಿಯಾದ ಮಾರ್ಗಸೂಚಿ ನೀಡದಿರುವುದೇ ಅವು ಉಗ್ರಾಣದಲ್ಲಿಯೇ ಉಳಿಯಲು ಕಾರಣವಾಗಿದೆ ಎಂಬುದು ಇಲ್ಲಿನ ಸಿಬ್ಬಂದಿಗಳ ಆರೋಪ. ಆದರೆ ಖಾಸಗಿ ಆಸ್ಪತ್ರೆಗಳಲ್ಲಿ ಯಾವುದೇ ಟೆಂಡರ್ ಇಲ್ಲದೆ ನೇರವಾಗಿ ಔಷಧಗಳನ್ನು ಖರೀದಿ ಮಾಡುವುದರಿಂದ ಗುಣಮಟ್ಟದ ಔಷಧಗಳ ಪೂರೈಕೆಯಾಗುತ್ತದೆ. ಆದರೆ ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲ ಭ್ರಷ್ಟ ಅಧಿಕಾರಿಗಳು ಕಮಿಷನ್ ಆಸೆಗಾಗಿ ಕಳಪೆ ಔಷಧಗಳನ್ನು ಹೆಚ್ಚು ಬೆಲೆಗೆ ಖರೀದಿ ಮಾಡುತ್ತಿದ್ದಾರೆ. ಇದರಿಂದಾಗಿ ಇಂತಹ ಅನಾಹುತಗಳು ಉಂಟಾಗುತ್ತವೆ.
ಸದ್ಯ ತಮಿಳುನಾಡು ಸರ್ಕಾರ ಮಾದರಿ ಔಷಧ ಖರೀದಿ ಪ್ರಕ್ರಿಯೆಯನ್ನು ಜಾರಿಗೆ ತರಲು ಚಿಂತಿಸುತ್ತಿರುವುದಾಗಿ ವರದಿಯಾಗಿದ್ದು, ಅದೇ ಮಾದರಿಯಲ್ಲಿ ರಾಜ್ಯ ಸರ್ಕಾರವು ಸ್ವಯತ್ತ ಆಸ್ಪತ್ರೆಗಳಿಗೆ ಪಾರದರ್ಶಕ ಔಷಧ ಖರೀದಿ ನೀತಿಯನ್ನು ಅಳವಡಿಸಿಕೊಳ್ಳುವ ಮೂಲಕ ಕಮಿಷನ್ ದಂಧೆಗೆ ಕಡಿವಾಣ ಹಾಕಬೇಕಿದೆ.
-ಮುಳ್ಳೂರು ಪ್ರಕಾಶ್, ನಿವೃತ್ತ ಹಿರಿಯ ಫಾರ್ಮಸಿ ಅಧಿಕಾರಿ, ಮೈಸೂರು.