ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿ ಆವರಣದೊಳಗಿರುವ ಅಂಚೆ ಕಚೇರಿ ಮತ್ತು ಗಣಕಯಂತ್ರ ವಿಭಾಗದ ಸಮೀಪ ಇರುವ ರಸ್ತೆ ಮಧ್ಯೆ ಪೊಲೀಸ್ ಇಲಾಖೆಗೆ ಸೇರಿದ ಬ್ಯಾರಿಕೇಡ್ಗಳನ್ನು ಇಡಲಾಗಿದೆ. ಮಾನಸಗಂಗೋತ್ರಿ ಆವರಣದಲ್ಲಿರುವ ಕೆಲವು ವಿದ್ಯಾರ್ಥಿಗಳು, ಮುಂಜಾನೆ ಮತ್ತು ಮುಸ್ಸಂಜೆಯ ವೇಳೆಯಲ್ಲಿ ಗಂಗೋತ್ರಿಯಲ್ಲಿ ವಾಯುವಿಹಾರಕ್ಕೆ ಬರುವವರು ಬಿಸ್ಕೆಟ್ ಮೊದಲಾದ ತಿನಿಸುಗಳನ್ನು ತಿಂದು ಪ್ಲಾಸ್ಟಿಕ್ ಕವರ್ಗಳನ್ನು ಬ್ಯಾರಿಕೇಡ್ಗಳ ಮೇಲೆ ಇಡುತ್ತಿರುವುದರಿಂದ ಕಸ ಸಂಗ್ರಹವಾಗಿ ಅಸಹ್ಯವಾಗಿ ಕಾಣುತ್ತಿವೆ.
ದಸರಾ ಮಹೋತ್ಸವದ ನಿಮಿತ್ತ ಮಾನಸಗಂಗೋತ್ರಿಯಲ್ಲಿ ನಡೆದ ಯುವ ದಸರಾ ಕಾರ್ಯಕ್ರಮದಲ್ಲಿ ಜನರನ್ನು ನಿಯಂತ್ರಿಸಲು ಈ ಬ್ಯಾರಿಕೇಡ್ಗಳನ್ನು ತರಲಾಗಿದ್ದು, ಕಾರ್ಯಕ್ರಮ ಮುಗಿದ ನಂತರ ಪೊಲೀಸ್ ಇಲಾಖೆಯವರು ತೆಗೆದುಕೊಂಡು ಹೋಗದೇ ಎಲ್ಲೆಂದರಲ್ಲಿ ಬಿಟ್ಟಿರುವುದರಿಂದ ದುರ್ಬಳಕೆಯಾಗುತ್ತಿವೆ. ಪೊಲೀಸ್ ಇಲಾಖೆಯವರು ಕೂಡಲೇ ಮಾನಸಗಂಗೋತ್ರಿಯಲ್ಲಿರುವ ಬ್ಯಾರಿಕೇಡ್ಗಳನ್ನು ತೆಗೆದುಕೊಂಡು ಹೋಗಿ ಅಗತ್ಯವಿರುವ ಕಡೆ ಬಳಸಲು ಕ್ರಮ ಕೈಗೊಳ್ಳಬೇಕಾಗಿದೆ.
-ನಾಗೇಶ್, ಮಾನಸಗಂಗೋತ್ರಿ, ಮೈಸೂರು





