ಮೈಸೂರು ತಾಲ್ಲೂಕಿನ ಸಿಂಧುವಳ್ಳಿ ಗ್ರಾಮದಲ್ಲಿ ಸೋಮವಾರ ಮಧ್ಯರಾತ್ರಿ ಅಂಬೇಡ್ಕರ್ ನಾಮಫಲಕವನ್ನು ಕಿಡಿಗೇಡಿಗಳು ವಿರೂಪಗೊಳಿಸಿರುವುದು ಖಂಡನೀಯ. ಶೋಷಿತ ಸಮುದಾಯಗಳ ಪರವಾಗಿ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ದೊರಕಿಸಿಕೊಡಬೇಕು ಎಂದು ದುಡಿದವರು ಡಾ.ಬಿ.ಆರ್.ಅಂಬೇಡ್ಕರ್. ಇಂದು ಅವರು ರಚಿಸಿದ ಸಂವಿಧಾನದ ಅಡಿಯಲ್ಲಿಯೇ ದೇಶದ ಕಾನೂನು ವ್ಯವಸ್ಥೆ ನಿಂತಿದೆ. ಸಂವಿಧಾನದ ಅಡಿಯಲ್ಲಿಯೇ ಪ್ರತಿಯೊಬ್ಬರೂ ಸಮಾನವಾಗಿ ಬದುಕುವ ಅವಕಾಶವನ್ನು ಪಡೆದುಕೊಂಡಿದ್ದಾರೆ.
ಸಂವಿಧಾನ ಜಾರಿಯಾಗಿ ೭೬ ವರ್ಷಗಳನ್ನು ಪೂರೈಸಿದೆ. ದೇಶ ಬ್ರಿಟಿಷರ ಆಡಳಿತದಿಂದ ಮುಕ್ತಿಪಡೆದು ಮುಕ್ಕಾಲು ಶತಮಾನವೇ ಕಳೆದಿದೆ. ಇಷ್ಟಿದ್ದರೂ ತಳ ಸಮುದಾಯಗಳ ಮೇಲೆ ನಿರಂತರ ಶೋಷಣೆಗಳು, ದಲಿತ ಸಮುದಾಯದ ಮೇಲಿನ ದಬ್ಬಾಳಿಕೆ ನಿರಂತರವಾಗಿ ಮುಂದುವರಿದಿದ್ದು, ಇಂತಹ ಬೆಳವಣಿಗೆಯನ್ನು ಗಮನಿಸಿದರೆ ನಿಜಕ್ಕೂ ದಲಿತ ಸಮುದಾಯಕ್ಕೆ ಸ್ವಾತಂತ್ರ್ಯ ಸಿಕ್ಕಿದೆಯೇ ಎಂಬ ಅನುಮಾನ ಕಾಡುತ್ತದೆ. ವಿಶ್ವವೇ ಕೊಂಡಾಡುವ ಅಂಬೇಡ್ಕರ್ರವರನ್ನು ಭಾರತದಲ್ಲಿಯೇ ಕೆಲ ಕೆಟ್ಟಮನಸ್ಸುಗಳು ವಿರೋಧಿಸುವುದು ವಿಪರ್ಯಾಸವೇ ಸರಿ. ಅಂಬೇಡ್ಕರ್ ಪ್ರತಿಮೆಗಳು ಹಾಗೂ ನಾಮಫಲಕಗಳನ್ನು ಹಾಳುಮಾಡುತ್ತಿದ್ದು, ಇಂತಹ ಪ್ರಕರಣಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕಿದೆ.
-ಪ್ರಕಾಶ್ ಬುದ್ಧ, ಅಧ್ಯಕ್ಷರು, ಕರ್ನಾಟಕ ಭೀಮ್ ಸೇನೆ, ಎಚ್.ಡಿ.ಕೋಟೆ ತಾ.