ಮುಂಗಾರು ಮಳೆ ಆರಂಭವಾಗಿದೆ. ಪ್ರವಾಹ ಉಂಟಾಗುವ ಭೀತಿ ಸಹಜವಾಗಿದೆ. ಹಾಗಾಗಿ ನದಿಪಾತ್ರದ ನಿವಾಸಿಗಳ ರಕ್ಷಣೆಗೆ ಆದ್ಯತೆ ನೀಡಬೇಕು. ಇದಲ್ಲದೆ, ಮಳೆಯ ಆಗಮನ/ ನಿರ್ಗಮನವನ್ನು ಸುಲಭವಾಗಿ ಅರಿಯುವುದು ಸಾಧ್ಯವಿಲ್ಲ. ಇಂತಹ ಸನ್ನಿವೇಶದಲ್ಲಿ ಶಾಲೆಗಳಿಗೆ ತೆರಳುವ ಮಕ್ಕಳ ಸುರಕ್ಷತೆ ಬಗೆಗೆ ಹೆತ್ತವರು, ಸಂಬಂಧಪಟ್ಟ ಶಾಲೆಗಳು ಜಾಗ್ರತೆ ವಹಿಸಬೇಕು.
ಅನಾಹುತ ನಡೆದ ಮೇಲೆ ದುಃಖಪಡುವ ಬದಲು ಮೊದಲೇ ಮುನ್ನೆಚ್ಚರಿಕೆ ವಹಿಸುವುದು ಸೂಕ್ತ. ಮಳೆ ಆರ್ಭಟಕ್ಕೆ ರಾಜ್ಯಾದ್ಯಂತ ಸಾವು- ನೋವು, ಬೆಳೆ, ಆಸ್ತಿ ನಷ್ಟವಾಗಿವೆ. ಇನ್ನು ಮುಂಗಾರು ಬಿರುಸುಗೊಂಡರೆ ಯಾವ ಪರಿಸ್ಥಿತಿ ಉದ್ಭವಿಸಬಹುದು? ಇದನ್ನು ಸಂಬಂಧಪಟ್ಟ ಅಧಿಕಾರಿಗಳು ಮನಗಾಣಬೇಕು. ಅಲ್ಲದೆ, ಮೈಸೂರು ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು.
-ಎಲ್.ಮಹದೇವಯ್ಯ, ರಾಮಕೃಷ್ಣನಗರ, ಮೈಸೂರು.





