ರಾಜ್ಯ ಸರ್ಕಾರವು ಸಂಯೋಜನೆ ಹೆಸರಿನಡಿ ೪,೨೦೦ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚಲು ಮುಂದಾಗಿರುವುದು ಖಂಡನೀಯ.
ಸರ್ಕಾರದ ಈ ನಡೆಯನ್ನು ಖಂಡಿಸಿ AIDSO ವಿದ್ಯಾರ್ಥಿ ಸಂಘಟನೆ ಸೇರಿದಂತೆ ಹಲವು ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದರೂ ಸರ್ಕಾರ ‘ಹಬ್ ಅಂಡ್ ಸ್ಪೋಕ್’ ಯೋಜನೆಯಡಿಯಲ್ಲಿ ಕಡಿಮೆ ದಾಖಲಾತಿ ಹೊಂದಿರುವ ಸರ್ಕಾರಿ ಶಾಲೆಗಳನ್ನು ಇತರೆ ಶಾಲೆಗಳೊಂದಿಗೆ ಸಂಯೋಜಿಸುವ ನಿರ್ಧಾರವನ್ನು ಪ್ರಕಟಿಸಿದೆ. ಇದಕ್ಕಾಗಿ ಶಿಕ್ಷಣ ಸುಧಾರಣಾ ಸಮಿತಿಯೊಂದನ್ನೂ ರಚಿಸಿದೆ.
ಸದ್ಯ ರಾಜ್ಯದಲ್ಲಿ ೪ ಸಾವಿರಕ್ಕೂ ಅಧಿಕ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಪ್ರಮಾಣ ೧೦ ಮಕ್ಕಳಿಗಿಂತಲೂ ಕಡಿಮೆ ಇದೆ. ಈ ಶಾಲೆಗಳ ಭವಿಷ್ಯದ ಕುರಿತು ಪೋಷಕರು, ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಬಿಸಿಊಟ ಸಿಬ್ಬಂದಿಗಳಲ್ಲಿ ಆತಂಕವಿದೆ. ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುವ ಬಹುತೇಕ ಮಕ್ಕಳು ಬಡಕುಟುಂಬಗಳಿಂದ ಬಂದವರು. ರಾಜ್ಯದಲ್ಲಿ ೬,೦೦೦ಕ್ಕೂ ಹೆಚ್ಚು ಏಕೋಪಾಧ್ಯಯ ಶಾಲೆಗಳಿದ್ದರೂ ಕನಿಷ್ಠ ೫೦ ಸಾವಿರ ಶಿಕ್ಷಕರನ್ನೂ ನೇಮಕ ಮಾಡಿಕೊಳ್ಳಲು ಸರ್ಕಾರ ವಿಫಲವಾಗಿದೆ. ಬಹುತೇಕ ಶಾಲೆಗಳಲ್ಲಿ ಕನಿಷ್ಠ ಮೂಲಸೌಕರ್ಯಗಳೂ ಇಲ್ಲ. ಹೀಗಾಗಿ ಸಹಜವಾಗಿಯೇ ಸೌಕರ್ಯಗಳಿಲ್ಲದ ಶಾಲೆಗಳಲ್ಲಿ ದಾಖಲಾತಿಯೂ ಕಡಿಮೆ ಇರುತ್ತದೆ. ಇಂತಹ ಸಂದರ್ಭದಲ್ಲಿ ಆ ಶಾಲೆಗಳಿಗೆ ಶಿಕ್ಷಕರನ್ನು ನೇಮಿಸಿ ಮೂಲ ಸೌಕರ್ಯಗಳನ್ನು ಒದಗಿಸುವ ಮೂಲಕ ಮಕ್ಕಳನ್ನು ಆಕರ್ಷಿಸಬೇಕು. ಆದ್ದರಿಂದ ಸರ್ಕಾರ ಶಾಲೆಗಳ ಸಂಯೋಜನೆ ನೀತಿಯನ್ನು ಬಿಟ್ಟು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಮುಂದಾಗಲಿ.
-ಸಿದ್ದಲಿಂಗೇಗೌಡ, ಹೈರಿಗೆ, ಎಚ್.ಡಿ.ಕೋಟೆ ತಾ