Mysore
23
broken clouds

Social Media

ಭಾನುವಾರ, 17 ಮೇ 2026
Light
Dark

ಆಸ್ತಿ ವಿವಾದ: ಸೋದರಳಿಯನ ಕೊಲೆಗೆ ಸುಪಾರಿ ಕೊಟ್ಟ ಮಾವ

ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಪಿರಿಯಾಪಟ್ಟಣ: ತಂಗಿಗೆ ಆಸ್ತಿಯನ್ನು ನೀಡಲೇಬಾರದು ಎಂದು ತೀರ್ಮಾನಿಸಿ ತನ್ನ ಸೋದರ ಅಳಿಯನನ್ನು ಕೊಲ್ಲಲು ಸುಪಾರಿ ಕೊಟ್ಟ ಮಾವ ಹಾಗೂ ಆತನ ಅಳಿಯನ ವಿರುದ್ಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಿರಿಯಾಪಟ್ಟಣ ಟೌನ್ ಬೆಟ್ಟದಪುರ ರಸ್ತೆಯಲ್ಲಿ ಟಿಂಬರ್ ಅಂಗಡಿ ಇಟ್ಟಿಕೊಂಡು ವ್ಯಾಪಾರ ನಡೆಸಿಕೊಂಡಿದ್ದ ಪ್ರವೀಣ್ ಕುಮಾರ್ (೩೩ ವರ್ಷ) ಮಾರಣಾಂತಿಕ ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದು, ಈತ ಮೈಸೂರಿನ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾರೆ. ಪ್ರವೀಣ್ ಕುಮಾರ್ ಮೂಲತಃ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಬಿದರ ಹಳ್ಳಿಹುಂಡಿ ಗ್ರಾಮದವರು.

ಇವರ ತಾಯಿ ಜಯಮಣಿ ಎಂಬವರನ್ನು ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರದಿಂದ ಶ್ರೀರಂಗಪಟ್ಟಣ ತಾಲ್ಲೂಕಿನ ಬಿದರಹಳ್ಳಿ ಹುಂಡಿ ಗ್ರಾಮದ ಬಸವಣ್ಣ ಎಂಬವರಿಗೆ ಮದುವೆ ಮಾಡಿಕೊಡಲಾಗಿತ್ತು. ಜಯಮಣಿ ಹಾಗೂ ಆಕೆಯ ಪುತ್ರ ಪ್ರವೀಣ್ ಕುಮಾರ್‌ನೊಂದಿಗೆ ಪಿರಿಯಾಪಟ್ಟಣ ಟೌನಿನಲ್ಲಿ ವಾಸವಿದ್ದು, ಪಿರಿಯಾಪಟ್ಟಣ ಟೌನ್ ಬೆಟ್ಟದಪುರ ರಸ್ತೆಯಲ್ಲಿ ಅಂಗಡಿ ಇಟ್ಟುಕೊಂಡು ಟಿಂಬರ್ ವ್ಯಾಪಾರ ನಡೆಸಿಕೊಂಡು ಬರುತ್ತಿದ್ದರು.

ಇದರ ನಡುವೆ ಜಯಮಣಿ ತನ್ನ ತಂದೆಯ ಮನೆಯಿಂದ ತನಗೆ ಬರಬೇಕಾದ ಆಸ್ತಿಗಾಗಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದು, ವ್ಯಾಜ್ಯ ನಡೆಯುತ್ತಿದೆ. ಹೀಗಿರುವಾಗ ಪ್ರವೀಣ್ ಕುಮಾರ್ ಸೋದರ ಮಾವ ಜಯಮಣಿಯ ಅಣ್ಣ ರಾಜು ಎಂಬವರ ಜತೆ ಆಸ್ತಿಗಾಗಿ ಜಗಳ ನಡೆಯುತ್ತಿತ್ತು. ಕಳೆದ ವರ್ಷ ಏಪ್ರಿಲ್ ತಿಂಗಳಲ್ಲಿ ಪ್ರವೀಣ್ ಕುಮಾರ್ ಬೈಕಿನಲ್ಲಿ ಬರುತ್ತಿರುವಾಗ ಸೋದರಮಾವ ರಾಜು ಎಂಬವರು ಕಾರಿನಲ್ಲಿ ಬಂದು ಅಪಘಾತ ಮಾಡಿ ನಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ರಾಜಿ ಸಂಧಾನ ನಡೆದು ಇಂತಿಷ್ಟು ಆಸ್ತಿಯನ್ನು ಜಯಮಣಿಯವರಿಗೆ ನೀಡುವಂತೆ ಅಂದಿನ ಹುಣಸೂರು ಡಿವೈಎಸ್ಪಿ ಸಮ್ಮುಖದಲ್ಲಿ ತೀರ್ಮಾನವಾಗಿತ್ತು.

ಹೀಗಿದ್ದರೂ ಇವರಿಗೆ ಆಸ್ತಿ ನೀಡಲೇ ಬಾರದು ಎಂದು ಜಯಮಣಿ ಅಣ್ಣ ರಾಜು ಹಾಗೂ ರಾಜುವಿನ ಅಳಿಯ ಮಹಾಲಿಂಗ ಸ್ವಾಮಿ ಎಂಬವರು ಪ್ರವೀಣ್ ಕುಮಾರ್‌ನನ್ನು ಕೊಲೆ ಮಾಡಲು ಸುಪಾರಿ ಕೊಟ್ಟ ಏಪ್ರಿಲ್ ೧೩ರ ರಾತ್ರಿ ೯.೩೦ ರ ಸುಮಾರಿಗೆ ಟಿಂಬರ್ ಅಂಗಡಿ ಬಾಗಿಲು ಹಾಕಿ ಮನೆಗೆ ಹೋಗುತ್ತಿದ್ದಾಗ ಬೈಕನ್ನು ದೂರದಲ್ಲಿ ನಿಲ್ಲಿಸಿ ಹೆಲ್ಮೆಟ್ ಧರಿಸಿ ಬಂದ ಇಬ್ಬರು ಅಪರಿಚಿತರು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೈ ಹಾಗೂ ದೇಹದ ಭಾಗಗಳಿಗೆ ಹೊಡೆದಿದ್ದು ನಂತರ ಇವರಿಂದ ತಪ್ಪಿಸಿಕೊಳ್ಳಲು ಓಡಿಬಂದಾಗ ಅಪರಿಚಿತ ವ್ಯಕ್ತಿಗಳು ಪರಾರಿಯಾಗಿದ್ದಾರೆ ಎಂದು ಹಲ್ಲೆಗೊಳಗಾದ ವ್ಯಕ್ತಿ ಪ್ರವೀಣ್ ಕುಮಾರ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

 

Tags:
error: Content is protected !!