ನವೀನ್ ಕುಮಾರ್
ಕೆಲವು ದಿನಗಳಿಂದ ಸುರಿಯುತ್ತಿರುವ ಉತ್ತಮ ಮಳೆಯಿಂದಾಗಿ ರೈತರಲ್ಲಿ ಮಂದಹಾಸ
ಪಿರಿಯಾಪಟ್ಟಣ: ತಾಲ್ಲೂಕಿನಾದ್ಯಂತ ಉತ್ತಮ ಮಳೆಯಾಗಿದ್ದು ಪ್ರಮುಖ ಬೆಳೆಯಾದ ತಂಬಾಕು ನಾಟಿ ಕಾರ್ಯ ಆರಂಭವಾಗಿದೆ.
ರಾಜ್ಯದಲ್ಲೇ ಅತಿ ಹೆಚ್ಚು ತಂಬಾಕು ಬೆಳೆಯುವ ಪ್ರದೇಶವಾದ ಪಿರಿಯಾ ಪಟ್ಟಣದಲ್ಲಿ ಈ ಬಾರಿ ಮುಂಗಾರು ತಡವಾಗಿ ಆರಂಭವಾಗಿದ್ದು, ಮೇ ೧೬ರ ವೇಳೆಗೆ ೮೪.೧೫ ಮಿ.ಮೀ. ಮಳೆ ಬಿದ್ದಿದೆ. ವಾಡಿಕೆಯಂತೆ ಮೇ ಅಂತ್ಯದ ವೇಳೆಗೆ ೨೦೯.೫ ಮಿ.ಮೀ. ಮಳೆಯಾಗಬೇಕಿತ್ತು. ತಾಲ್ಲೂಕಿನ ಹೋಬಳಿ ಕೇಂದ್ರಗಳಾದ ಕಸಬಾದಲ್ಲಿ ೧೨೦ ಮಿ.ಮೀ., ರಾವಂದೂರಿನಲ್ಲಿ ೧೧೨ ಮಿ.ಮೀ., ಹಾರನಹಳ್ಳಿಯಲ್ಲಿ ೮೦ ಮಿ.ಮೀ., ಬೆಟ್ಟದಪುರದಲ್ಲಿ ೭೦ ಮಿ. ಮೀ. ಮಳೆಯಾಗಿದೆ. ಈ ಬಾರಿ ಮುಂಗಾರು ತಡವಾಗಿ ಆರಂಭವಾದರೂ ನಿರಂತರವಾಗಿ ಬಂದ ಮಳೆಯಿಂದಾಗಿ ರೈತರು ತಮ್ಮ ಜಮೀನುಗಳನ್ನು ಹದ ಮಾಡಿಕೊಂಡು ನಾಟಿ ಕಾರ್ಯದಲ್ಲಿ ತೊಡಗಿ ಸಿಕೊಂಡಿದ್ದಾರೆ.
೫೬ ಮಿಲಿಯನ್ ಕೆಜಿ ನಿಗದಿ: ರಾಜ್ಯ ತಂಬಾಕು ಮಂಡಳಿ ವತಿಯಿಂದ ಈ ಬಾರಿ ೫೬ ಮಿಲಿಯನ್ ಕೆಜಿ ತಂಬಾಕು ಮಾತ್ರ ಬೆಳೆಯುವಂತೆ ನಿಗದಿ ಮಾಡಿದ್ದು, ಇದು ರೈತರನ್ನು ಸಂಕಷ್ಟಕ್ಕೆ ದೂಡಿದೆ. ಕಳೆದ ಬಾರಿ ೧೦೦ ಮಿಲಿಯನ್ ಕೆಜಿ ತಂಬಾಕು ಬೆಳೆ ನಿಗದಿಪಡಿಸಲಾಗಿತ್ತು. ಆದರೆ, ಸೂಕ್ತ ಬೆಲೆ ದೊರಕದೆ ರೈತರು ಸಂಕಷ್ಟಕ್ಕೆ ಒಳಗಾಗಿ, ಪ್ರತಿಭಟನೆ ಗಲಾಟೆಗಳು ನಡೆದಿದ್ದವು. ಈ ಬಾರಿ ಮಂಡಳಿಯು ೫೬ ಮಿಲಿಯನ್ ಕೆಜಿ ತಂಬಾಕು ಬೆಳೆ ನಿಗದಿಪಡಿಸಿದೆ. ಇದರಿಂದ ರೈತರು ಪ್ರತಿ ಬಾರಿ ಬೆಳೆಯುತ್ತಿದ್ದ ತಂಬಾಕನ್ನು ಕಡಿಮೆ ಪ್ರಮಾಣದಲ್ಲಿ ಬೆಳೆಯಲು ಮುಂದಾಗಿದ್ದಾರೆ.
ಕಾರ್ಡ್ದಾರರು ಅತಂತ್ರ: ತಂಬಾಕು ಮಂಡಳಿ ಪರವಾನಗಿ ಹೊಂದಿದವರಿಗೆ ಒಂದು ಬ್ಯಾರನ್ಗೆ ೧,೦೧೬ ಕೆಜಿ ತಂಬಾಕು ಬೆಳೆಯಲು ನಿಗದಿಪಡಿಸಿದ್ದು, ಕಾರ್ಡ್ದಾರರಿಗೆ ಯಾವುದೇ ಮಾಹಿತಿಯನ್ನು ಸ್ಪಷ್ಟವಾಗಿ ನೀಡಿಲ್ಲ. ಸುಮಾರು ೧೫,೦೦೦ ರೈತರು ಕಾರ್ಡ್ದಾರರಿದ್ದು ಅವರು ಈಗಾಗಲೇ ತಂಬಾಕು ಬೆಳೆಯನ್ನು ನಾಟಿ ಮಾಡಿದ್ದಾರೆ. ಇವರಿಗೆ ಯಾವುದೇ ಸೂಕ್ತ ನಿರ್ದೇಶನ ನೀಡದೆ ತಂಬಾಕು ಮಂಡಳಿ ನಿರ್ಲಕ್ಷ ವಹಿಸಿದೆ.
ಗೊಬ್ಬರ ವಿತರಣೆಯಾಗಿಲ್ಲ: ತಾಲ್ಲೂಕಿನಾದ್ಯಂತ ಉತ್ತಮ ಮಳೆಯಾಗಿದ್ದು, ಈಗಾಗಲೇ ಹಲವಾರು ರೈತರು ನಾಟಿ ಕಾರ್ಯ ಮುಗಿಸಿದ್ದಾರೆ. ಈ ಬಾರಿ ತಂಬಾಕು ಮಂಡಳಿ ರಸಗೊಬ್ಬರ ನೀಡುವಲ್ಲಿ ನಿರ್ಲಕ್ಷ್ಯ ವಹಿಸಿದೆ. ಇದರಿಂದ ರೈತರಿಗೆ ಸಕಾಲದಲ್ಲಿ ಗೊಬ್ಬರ ದೊರಕದೆ ಪರದಾಡುವಂತಾಗಿದೆ. ತಂಬಾಕು ಮಂಡಳಿಯ ಗೋಡೌನ್ಗಳು
ತಂಬಾಕು ಬೇಲ್ಗಳಿಂದ ತುಂಬಿವೆ. ಆದ್ದರಿಂದ ರಸಗೊಬ್ಬರ ಸಮರ್ಪಕವಾಗಿ ವಿತರಣೆಯಾಗುತ್ತಿಲ್ಲ ಎಂದು ಹಿರಿಯ ಅಧಿಕಾರಿಗಳು ತಿಳಿಸುತ್ತಿದ್ದಾರೆ. ವೇರ್ ಹೌಸ್ಗಳು, ಅನೇಕ ಗೋಡೌನ್ಗಳಿದ್ದು, ಇವುಗಳನ್ನು ಬಳಕೆ ಮಾಡಿ ರಸಗೊಬ್ಬರ ನೀಡಬಹುದಿತ್ತು ಎನ್ನುತ್ತಾರೆ ರೈತರು. ಬಿತ್ತನೆ ಬೀಜ ನೀಡಿದ ನಂತರ ೫೬ ಮಿಲಿಯನ್ ಕೆಜಿ ನಿಗದಿ ಮಾಡಿದ್ದು ಈಗಾಗಲೇ ರೈತರು ಸಸಿ ಮಡಿಗಳನ್ನು ನಿರ್ಮಿಸಿ ನಾಟಿ ಕಾರ್ಯದಲ್ಲಿ ಮುಂದಾಗಿದ್ದಾರೆ. ಹೀಗಾಗಿ ತಂಬಾಕು ಬೆಳೆಯನ್ನು ಕಡಿತಗೊಳಿಸಲು ರೈತರಿಗೆ ತೊಂದರೆ ಉಂಟಾಗಿದೆ. ಮಂಡಳಿ ಮಾತ್ರ ಈ ಬಗ್ಗೆ ಯಾವುದೇ ಕ್ರಮ ವಹಿಸದೆ ರೈತರಿಗೆ ಗೊಂದಲ ಉಂಟು ಮಾಡುತ್ತಿದೆ ಎಂಬ ಆರೋಪ ಕೇಳಿಬಂದಿದೆ.
” ಪ್ರತಿ ವರ್ಷ ಆರು ಎಕರೆಯಲ್ಲಿ ತಂಬಾಕು ಬೆಳೆಯುತ್ತಿದ್ದು ಈ ಬಾರಿ ಮೂರು ಎಕರೆಯಲ್ಲಿ ಮಾತ್ರ ತಂಬಾಕು ನಾಟಿ ಮಾಡುತ್ತಿದ್ದೇವೆ. ಸೂಕ್ತ ಬೆಲೆ ಸಿಗದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳುತ್ತಿದ್ದೇವೆ.”
-ಜಯಣ್ಣ, ರೈತ, ಪಿರಿಯಾಪಟ್ಟಣ
” ರಸಗೊಬ್ಬರ ಹರಾಜು ನಡೆಯುತ್ತಿರುವುದರಿಂದ ವಿತರಣೆ ವಿಳಂಬವಾಗಿದೆ. ರಸಗೊಬ್ಬರ ದಾಸ್ತಾನು ಆರಂಭವಾಗಿದ್ದು ಶೇ.೩೫ರಸ್ಟು ರಸಗೊಬ್ಬರ ಬಂದರೆ ಸೋಮವಾರದಿಂದ ವಿತರಣೆ ಮಾಡಲು ಕ್ರಮವಹಿಸಲಾಗುವುದು.”
-ಮಾರಣ್ಣ, ಆರ್ಎಂಒ, ತಂಬಾಕು ಮಂಡಳಿ




