ನವೀನ್ಕುಮಾರ್
ತಂಬಾಕು ಹದಗೊಳಿಸುವ ಕಾರ್ಯ ಚುರುಕು; ಉತ್ತಮ ಬೆಲೆ ನಿರೀಕ್ಷೆಯಲ್ಲಿ ರೈತರು
ಪಿರಿಯಾಪಟ್ಟಣ: ತಾಲ್ಲೂಕಿನಾದ್ಯಂತ ತಂಬಾಕು ಕೃಷಿ ಚಟುವಟಿಕೆಗಳು ಗರಿಗೆದರಿವೆ. ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚು ತಂಬಾಕು ಬೆಳೆಯಲಾಗುತ್ತದೆ. ಇತ್ತೀಚೆಗೆ ಉತ್ತಮ ಮಳೆಯಾಗಿ ತಂಬಾಕು ಚಟುವಟಿಕೆ ಚುರುಕುಗೊಂಡಿದೆ.
ಎಲ್ಲೆಡೆ ತಂಬಾಕು ಹದಗೊಳಿಸುವ ಕಾರ್ಯ ನಡೆಯುತ್ತಿದ್ದು, ಹೊಲಗಳಲ್ಲಿ ರೈತರು ಕಾರ್ಯನಿರತರಾಗಿದ್ದಾರೆ. ತಂಬಾಕು ಕಾರ್ಮಿಕರಿಗೆ ಎಲ್ಲಿಲ್ಲದ ಬೇಡಿಕೆ ಸೃಷ್ಟಿಯಾಗಿದೆ. ಕಳೆದ ೨ ತಿಂಗಳಿಂದ ಮಳೆ ಕೈಕೊಟ್ಟರೂ ಜುಲೈ ಅಂತ್ಯದ ವೇಳೆಗೆ ಉತ್ತಮ ಮಳೆಯಾಗುತ್ತಿದೆ. ಕಳೆದ ವರ್ಷ ಜುಲೈ ಅಂತ್ಯಕ್ಕೆ ೧೦೨.೬ ಮಿ.ಮೀ. ಮಳೆಯಾಗಿತ್ತು. ಆದರೆ ಈ ಬಾರಿ ೫೩.೨ ಮಿ. ಮೀ. ಮಾತ್ರ ಆಗಿದೆ. ಜುಲೈ ಅಂತ್ಯಕ್ಕೆ ೮೫.೧ ಮಿ.ಮೀ. ಮಳೆಯಾಗಬೇಕಿತ್ತು. ಆದರೆ ಈ ಬಾರಿ ಮಳೆ ಕಡಿಮೆಯಾಗಿದ್ದು, ೫೩.೨ ಮಿ.ಮೀ.ಗೆ ನಿಂತಿದೆ. ವಾಡಿಕೆಯಂತೆ ಜುಲೈ ಅಂತ್ಯದ ವೇಳೆಗೆ ೩೯೯.೫ ಮಿ.ಮೀ. ಮಳೆಯಾಗಬೇಕು. ಆದರೆ ಇದುವರೆಗೆ ೨೨೯.೩ ಮಿ.ಮೀ. ಮಳೆ ಮಾತ್ರ ಆಗಿದೆ. ಅಂದರೆ ೧೭೦.೨ ಮಿ.ಮೀ. ಮಳೆ ಕಡಿಮೆಯಾಗಿದೆ.
ಹಿಂದೆ ತಂಬಾಕು ಬೆಳೆ ರೈತರ ಕೈಸುಟ್ಟರೂ ಈ ಬಾರಿ ಅನಿವಾರ್ಯವಾಗಿ ಮತ್ತೆ ತಂಬಾಕು ಬೆಳೆಯನ್ನೇ ನೆಚ್ಚಿಕೊಂಡಿದ್ದಾರೆ. ಕಳೆದ ವರ್ಷ ೩೩,೫೭೨ ಹೆಕ್ಟೇರ್ ಪ್ರದೇಶದಲ್ಲಿ ತಂಬಾಕು ಬೆಳೆದಿದ್ದ ರೈತರು ಒಟ್ಟು ೯೯.೩೮ ಮಿಲಿಯನ್ ಕೆಜಿ ತಂಬಾಕು ಮಾರಾಟ ಮಾಡಿದ್ದರು. ಸರಾಸರಿ ೨೪೧ ರೂ. ಮಾತ್ರ ದೊರಕಿದ್ದರಿಂದ ರೈತರು ತೀವ್ರ ತೊಂದರೆಗೆ ಒಳಗಾಗಿ ದ್ದರು. ಆದರೂ ಈ ಬಾರಿ ರೈತರು ತಂಬಾಕು ಬೆಳೆಯನ್ನು ಹೆಚ್ಚಿನ ಮಟ್ಟದಲ್ಲಿಯೇ ಬೆಳೆದಿದ್ದಾರೆ.
೫೬ ಮಿಲಿಯನ್ ಕೆಜಿ ನಿಗದಿ: ಈ ಬಾರಿ ಕರ್ನಾಟಕ ರಾಜ್ಯಕ್ಕೆ ಭಾರತೀಯ ತಂಬಾಕು ಮಂಡಳಿ ೫೬ ಮಿಲಿಯನ್ ಕೆಜಿ ಮಾತ್ರ ಬೆಳೆ ಬೆಳೆಯಲು ನಿಗದಿ ಮಾಡಿದೆ. ಆದರೆ ಈ ಬಾರಿ ರೈತರು ನಿಗದಿ ಮಾಡುವ ಮುನ್ನವೇ ೩೦,೩೩೭ ಹೆಕ್ಟೇರ್ ಪ್ರದೇಶದಲ್ಲಿ ತಂಬಾಕು ನಾಟಿ ಮಾಡಿದ್ದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಕೇವಲ ೩,೫೭೨ ಹೆಕ್ಟೇರ್ ಕಡಿಮೆಯಾಗಿದೆ. ಈ ಬಾರಿಯೂ ೯೦ ಮಿಲಿಯನ್ಗೂ ಅಧಿಕ ತಂಬಾಕು ಉತ್ಪಾದನೆಯಾಗುವ ನಿರೀಕ್ಷೆ ಇದೆ. ಈ ಬಾರಿ ಉರುವಲು, ರಸಗೊಬ್ಬರದ ಜೊತೆಗೆ ತಂಬಾಕು ಕಾರ್ಮಿಕರ ಕೂಲಿಯೂ, ತಂಬಾಕು ಉತ್ಪಾದನೆಯ ವೆಚ್ಚವೂ ಹೆಚ್ಚಳವಾಗಿದ್ದು, ಇದು ರೈತರಿಗೂ ಹೊರೆಯಾಗಿ ಪರಿಣಮಿಸಿದೆ.
ಕರ್ನಾಟಕ ರಾಜ್ಯದಲ್ಲಿ ಒಟ್ಟು ೫೫,೦೭೫ ಬ್ಯಾರನ್ಗಳು ಇದ್ದು, ಈ ಬಾರಿ ತಂಬಾಕು ಮಂಡಳಿ ಸಿಂಗಲ್ ಬ್ಯಾರನ್ ಹೊಂದಿರುವ ರೈತರಿಗೆ ೧,೦೧೭ ಕೆಜಿ ತಂಬಾಕು ಮತ್ತು ಡಬಲ್ ಬ್ಯಾರನ್ ಹೊಂದಿರುವವರಿಗೆ ೨,೦೩೪ ಕೆ.ಜಿ. ತಂಬಾಕು ಮಾತ್ರ ಮಾರಾಟ ಮಾಡಲು ಅನುಮತಿ ನೀಡಿದ್ದು ಈ ಬಾರಿ ಹೆಚ್ಚು ಬೆಳೆ ಬೆಳೆದ ರೈತರು ಇದರಿಂದ ಆತಂಕಕ್ಕೆ ಒಳಗಾಗಿದ್ಧಾರೆ.
ಆಂಧ್ರಪ್ರದೇಶದ ಮಾರುಕಟ್ಟೆಯಲ್ಲಿ ತಂಬಾಕು ಮಾರಾಟ ಆರಂಭವಾಗಿದ್ದು, ಅಲ್ಲಿ ತಂಬಾಕು ಬೆಳೆಗೆ ಬೆಲೆ ಕಡಿಮೆಯಾಗಿದ್ದು, ಉತ್ತಮ ತಂಬಾಕು ೨೬೬ ರೂ.ಗಳಿಗೆ ಮಾರಾಟವಾದರೆ ಕಡಿಮೆ ದರ್ಜೆಯ ತಂಬಾಕು ೧೬೦ ರೂ.ಗಳಿಗೆ ಮಾರಾಟವಾಗಿದೆ. ೪೦.೧೯ ಮಿಲಿಯನ್ ಕೆಜಿ ತಂಬಾಕು ಈಗಾಗಲೆ ಮಾರಾಟವಾಗಿರುವ ವರದಿಯಾಗಿದೆ. ಇದು ಕೂಡ ಕರ್ನಾಟಕದ ಮಾರುಕಟ್ಟೆಯ ಮೇಲೆ ಪರಿಣಾಮ ಬೀರಲಿದೆ.
” ೫೬ ಮಿಲಿಯನ್ ಕೆಜಿ ನಿಗದಿ ಮಾಡಿದ್ದು, ೯೦ ಮಿಲಿಯನ್ ತಂಬಾಕು ಉತ್ಪಾದನೆಯಾಗುತ್ತಿದೆ. ಬ್ರೆಜಿಲ್ ಮತ್ತು ಜಿಂಬಾಂಬ್ವೆ ದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತಂಬಾಕು ಬೆಳೆ ಬೆಳೆಯುತ್ತಿರುವುದು ನಮ್ಮ ರಾಜ್ಯದ ಮಾರುಕಟ್ಟೆಯ ಮೇಲೂ ಪರಿಣಾಮ ಬೀರುತ್ತಿದೆ. ಹೆಚ್ಚಿಗೆ ತಂಬಾಕು ಬೆಳೆದ ರೈತರು ಕೇಂದ್ರ ಸರ್ಕಾರದ ನಿರ್ಧಾರಗಳನ್ನು ಕಾಯಬೇಕಿದೆ.”
-ಮಾರಣ್ಣ, ವಲಯ ವ್ಯವಸ್ಥಾಪಕ, ತಂಬಾಕು ಮಂಡಳಿ




