Mysore
29
overcast clouds

Social Media

ಶುಕ್ರವಾರ, 08 ಮೇ 2026
Light
Dark

ಕೊಡಗು ಜಿಲ್ಲೆಯಲ್ಲೇ ಎರಡನೇ ಸ್ಥಾನ ಪಡೆದ ರೈತ ಪುತ್ರಿ ನಂದಿತಾ  

ಮಡಿಕೇರಿ: ಓದುವ ಛಲ, ಆತ್ಮವಿಶ್ವಾಸ, ಪ್ರೋತ್ಸಾಹ, ಮಾರ್ಗದರ್ಶನವಿದ್ದರೆ ಮಕ್ಕಳು ಸರ್ಕಾರಿ ಕಾಲೇಜಿನಲ್ಲಿ  ಓದಿದರೂ ಉತ್ತಮ ಅಂಕ ಗಳಿಸಲು ಸಾಧ್ಯವಿದೆ. ಇದಕ್ಕೆ ಕುಶಾಲನಗರ ತಾಲ್ಲೂಕಿನ ಕೂಡಿಗೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿನಿ ಟಿ.ಜಿ.ನಂದಿತಾ ನಿದರ್ಶನ. ನಂದಿತಾ, ಕುಶಾಲನಗರ ತಾಲ್ಲೂಕಿನ ತೊರೆನೂರು ಸಮೀಪದ ಅರೆಗಲು ನಿವಾಸಿ ಟಿ.ಜಿ. ಗಿರೀಶ್ ಹಾಗೂ ಪವಿತ್ರ ದಂಪತಿಯ ಪುತ್ರಿ. ತಂದೆ ಬಡತನದಲ್ಲಿ ಹಲವು ಸವಾಲುಗಳ ನಡುವೆ ಬದುಕು ಸವೆಸುತ್ತಿದ್ದರೂ ನಂದಿತಾಗೆ ಕಲಿಯಲು ಅವು ಅಡ್ಡಿಯಾಗಲಿಲ್ಲ. ೨೦೨೫- ೨೬ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಆಕೆ ೬೦೦ಕ್ಕೆ ೫೮೫ ಅಂಕಗಳಿಸುವ ಮೂಲಕ ಇಡೀ ಜಿಲ್ಲೆಯ ಗಮನ ಸೆಳೆದಿದ್ದಾರೆ.

ಗಿರೀಶ್ ಅವರು ಇರುವ ತಮ್ಮ ೧.೧೩ ಎಕರೆ ಜಾಗದಲ್ಲಿಯೇ ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಹಿರಿಯ ಪುತ್ರ ಟಿ.ಜಿ.ರಕ್ಷಿತ್ ಮೈಸೂರಿನಲ್ಲಿ ಬಿಬಿಎಂ ಓದುತ್ತಿದ್ದು, ತಾಯಿ ಸುಂದರಮ್ಮ, ಪತ್ನಿ ಪವಿತ್ರಾ, ಪುತ್ರಿ ನಂದಿತಾಳೊಂದಿಗೆ ವಾಸವಾಗಿದ್ದಾರೆ. ಕೃಷಿಯಲ್ಲಿ ಬಂದ ಲಾಭದಲ್ಲಿಯೇ ಜೀವನ ಸಾಗಬೇಕಾದ ಅನಿವಾರ್ಯತೆಯಿದೆ. ಹೀಗಾಗಿಯೇ ಅನಿವಾರ್ಯವಾಗಿ ಪುತ್ರಿ ನಂದಿತಾಳನ್ನು ಸರ್ಕಾರಿ ಕಾಲೇಜಿಗೆ ಸೇರಿಸಬೇಕಾಯಿತು.

ಮನೆಯಿಂದ ಕಾಲೇಜಿಗೆ ಸುಮಾರು ೮ ಕಿ.ಮೀ. ಅಂತರವಿದ್ದು, ಊರಿನಿಂದ ೨ ಕಿ.ಮೀ. ದೂರದಲ್ಲಿರುವ ಬಸ್ ನಿಲ್ದಾಣಕ್ಕೆ ಗಿರೀಶ್ ತಮ್ಮ ದ್ವಿಚಕ್ರ ವಾಹನದಲ್ಲಿ ಪುತ್ರಿಯನ್ನು ಕರೆದುಕೊಂಡು ಹೋಗಿ ಬಿಡುವುದು, ಮತ್ತೆ ಸಂಜೆ ಬಸ್ ನಿಲ್ದಾಣಕ್ಕೆ ಬಂದು ವಾಪಸ್ ಮನೆಗೆ ಕರೆದೊಯ್ಯುತ್ತಿದ್ದರು. ಒಮ್ಮೊಮ್ಮೆ ಕಾರಣಾಂತರಗಳಿಂದ ಅವರು ಬಸ್ ನಿಲ್ಧಾಣಕ್ಕೆ ಬರುವುದು ಸಾಧ್ಯವಾಗದಿದ್ದರೆ, ನಂದಿತಾ ನಡೆದುಕೊಂಡೇ ಮನೆಗೆ ಹೋಗಬೇಕಿತ್ತು. ಬಡತನದ ಕಾರಣಕ್ಕಾಗಿ ಮಗಳನ್ನು ಸರ್ಕಾರಿ ಶಾಲೆ, ಕಾಲೇಜಿಗೆ ಸೇರಿಸಬೇಕಾಗಿತ್ತು. ಇದೀಗ ಮಗಳು ಜಿಲ್ಲೆಗೆ ೨ನೇ ಸ್ಥಾನ ಗಳಿಸಿರುವುದು ಖುಷಿ ತಂದಿದೆ ಎಂದು ಗಿರೀಶ್ ತಮ್ಮ ಪುತ್ರಿಯ ಸಾಧನೆ ಕುರಿತು ಹರ್ಷ ವ್ಯಕ್ತಪಡಿಸಿದ್ದಾರೆ.

” ಸರ್ಕಾರಿ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ೬೦೦ಕ್ಕೆ ೫೮೫ ಅಂಕ ಗಳಿಸಿ ಜಿಲ್ಲೆಗೆ ದ್ವಿತೀಯ ಸ್ಥಾನ ಗಳಿಸಿರುವುದಕ್ಕೆ ಖುಷಿಯಾಗಿದೆ. ಪೋಷಕರ ಬೆಂಬಲ, ಉಪನ್ಯಾಸಕರ ಸಹಕಾರ, ಮಾರ್ಗದರ್ಶನದಿಂದ ಇಷ್ಟು ಅಂಕ ಗಳಿಸಲು ಸಾಧ್ಯವಾಗಿದೆ. ಎಲ್ಲರಿಗೂ ಧನ್ಯವಾದ ಸಲ್ಲಿಸಲು ಇಚ್ಛಿಸುತ್ತೇನೆ.”

ಟಿ.ಜಿ.ನಂದಿತಾ, ಕಲಾ ವಿಭಾಗ, ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿನಿ

 

 

Tags:
error: Content is protected !!