Mysore
21
overcast clouds

Social Media

ಗುರುವಾರ, 27 ಆಗಸ್ಟ್ 2026
Light
Dark

ಮಳೆ ಕೊರತೆ; ರೈತರ ಕೈ ಸೇರದ ಬೆಳೆಗಳು

ಎಂ.ನಾರಾಯಣ

ತಿ.ನರಸೀಪುರ: ಹೂ ಕಚ್ಚದ ಕಡಲೆಕಾಯಿ, ಸೂರ್ಯಕಾಂತಿ, ಮುಸುಕಿನ ಜೋಳದ ಬೆಳೆಗಳು

ತಿ.ನರಸೀಪುರ: ತಾಲ್ಲೂಕಿನಲ್ಲಿ ಸಮರ್ಪಕ ಮಳೆ ಬಾರದಿರುವುದರಿಂದ ರೈತರು ಹಾಕಿದ್ದ ಕಡಲೆಕಾಯಿ, ಸೂರ್ಯಕಾಂತಿ, ಮುಸುಕಿನ ಜೋಳದ ಬೆಳೆಗಳು ಕೈಸೇರದಂತಾಗಿದೆ. ತಾಲ್ಲೂಕಿನ ಕಸಬಾ ಹೋಬಳಿಯ ಬನ್ನಹಳ್ಳಿ ಹುಂಡಿ, ಅಲಸೀಕಟ್ಟೆ ಹುಂಡಿ ಸೇರಿದಂತೆ ಈ ಭಾಗದಲ್ಲಿ ಸುಮಾರು ೧೪-೧೫ ಹೆಕ್ಟೇರ್ ಪ್ರದೇಶ ದಲ್ಲಿ ಕಡಲೆಕಾಯಿ ಬೆಳೆಯುತ್ತಿದ್ದರು. ಅಲ್ಪ-ಸ್ವಲ್ಪ ಮಳೆಯಾಗಿರುವುದರಿಂದ ಕಡಲೆಕಾಯಿ ಬಿತ್ತನೆ ಮಾಡಲಾಗಿದೆ. ಆದರೆ ಮಳೆ ಪ್ರಮಾಣ ಕಡಿಮೆ ಆಗಿರುವುದರಿಂದ ಬೆಳೆಗಳು ಹೂ ಬಿಡದೆ ಬಾಡುತ್ತಿವೆ.

ಸೋಸಲೆ ಹೋಬಳಿಯ ೬೦೦ ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ಮುಸುಕಿನ ಜೋಳ ಬೆಳೆಯಲಾಗುತ್ತಿತ್ತು. ಮಳೆ ಕೊರತೆಯಿಂದ ಮುಸುಕಿನ ಜೋಳ ಬೆಳೆ ಬೆಳೆಯಲಾಗಿಲ್ಲ. ಹೊರಳ ಹಳ್ಳಿ ವ್ಯಾಪ್ತಿಯಲ್ಲಿ ಸೂರ್ಯಕಾಂತಿ ಬೆಳೆಯನ್ನು ಬೆಳೆಯಲಾಗಿಲ್ಲ. ಬನ್ನೂರು ವ್ಯಾಪ್ತಿಯ ಭಾಗದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿ ಕಬ್ಬು ಬೆಳೆ ಒಣಗುತ್ತಿದೆ. ಕೆಲವು ಬೋರ್‌ವೆಲ್‌ಗಳಲ್ಲೂ ನೀರು ಬತ್ತಿ ಹೋಗುತ್ತಿದೆ. ಈಗ ಕಬಿನಿ ಜಲಾಶಯದಿಂದ ನಾಲೆಗೆ ನೀರು ಬಿಟ್ಟಿರುವುದರಿಂದ ಬೋರ್‌ವೆಲ್ ಗಳಲ್ಲಿ ನೀರು ಬತ್ತಿ ಹೋಗಿರುವುದು ಸ್ವಲ್ಪ ಸುಧಾರಣೆಯಾಗಿದೆ.

ನಮ್ಮ ತಾಲ್ಲೂಕಿನಲ್ಲಿ ೧೯ ಹೆಕ್ಟೇರ್‌ಗೂ ಹೆಚ್ಚು ಭೂ ಪ್ರದೇಶದಲ್ಲಿ ಭತ್ತ ಬೆಳೆಯುತ್ತಿದ್ದರು. ಆದರೆ ಈ ಬಾರಿ ಕಬಿನಿ ನಾಲೆಯಿಂದ ನೀರು ಬಿಡದಿದ್ದರಿಂದ ಭತ್ತದ ಬೆಳೆ ಇಲ್ಲದಂತಾಗಿದೆ. ಕಬಿನಿ ಜಲಾಶಯದ ಸಲಹಾ ಸಮಿತಿ ಸಭೆ ಈವರೆಗೂ ನಿರ್ಧಾರವಾಗಿಲ್ಲ. ಅಲ್ಪ ಪ್ರಮಾಣದ ನೀರನ್ನು ನಾಲೆಗೆ ಹರಿಸಿದರೆ ಕೆಲವು ರೈತರು ಭತ್ತ ಬೆಳೆಯುವ ಧೈರ್ಯ ಮಾಡುತ್ತಾರೆ. ಸಲಹಾ ಸಮಿತಿಯ ನಿರ್ಧಾರದ ಮೇಲೆ ಇದು ಅವಲಂಬಿತವಾಗಿದೆ.

ಒಟ್ಟಾರೆ ನಿಗದಿತ ಅವಧಿಗೆ ಮಳೆ ಪ್ರಮಾಣ ಕಡಿಮೆಯಾಗಿರುವುದರಿಂದ ತಾಲೂಕಿನಲ್ಲಿ ವಿವಿಧ ಬೆಳೆಗಳನ್ನು ರೈತರು ಬೆಳೆಯದ ಸ್ಥಿತಿ ನಿರ್ಮಾಣವಾಗಿದೆ.

” ಕಬಿನಿ ನಾಲೆಗೆ ನೀರು ಬಿಡದಿರುವುದರಿಂದ ಕೃಷಿ ಇಲಾಖೆ ವತಿಯಿಂದ ಈ ಬಾರಿ ರೈತರಿಗೆ ಬಿತ್ತನೆ ಬೀಜ ವಿತರಣೆ ಮಾಡುತ್ತಿಲ್ಲ. ಅದರ ಬದಲಾಗಿ ಉದ್ದು, ಹಸಿರು, ಹಲಸಂದೆ, ಮುಸುಕಿನ ಜೋಳ ಸೇರಿದಂತೆ ದ್ವಿದಳ ಧಾನ್ಯ ಬೆಳೆಗಳನ್ನು ಬೆಳೆಯುವಂತೆ ರೈತರಿಗೆ ಮನವಿ ಮಾಡಲಾಗಿದೆ.”

-ಎಂ.ರೂಪ, ಸಹಾಯಕ ಕೃಷಿ ನಿರ್ದೇಶಕಿ, ತಿ.ನರಸೀಪುರ

” ಈ ಬಾರಿ ವಾಡಿಕೆಗಿಂತ  ಮಳೆ ಪ್ರಮಾಣ ತೀವ್ರ ಕಡಿಮೆಯಾಗಿರುವುದರಿಂದ ಜತೆಗೆ ನಿಗದಿತ ಸಮಯಕ್ಕೆ ಬಿತ್ತನೆ ಮಾಡುವ ವೇಳೆ ಮಳೆಯಾಗದಿದ್ದರಿಂದ ಕಡಲೆಕಾಯಿ, ಸೂರ್ಯಕಾಂತಿ, ದ್ವಿದಳ ಧಾನ್ಯ ಬೆಳೆಗಳು ಹೂ ಕಚ್ಚಲಿಲ್ಲ. ಇದರಿಂದ ರೈತರಿಗೆ ನಷ್ಟವಾಗಿದೆ.”

-ಮಹೇಶ್, ರೈತ, ಕೆಂಪೇಗೌಡನಕೊಪ್ಪಲು

 

 

Tags:
error: Content is protected !!