ನವೀನ್ ಡಿಸೋಜ
ಜಿಲ್ಲೆಯಲ್ಲಿ ಶೇ.೩೦.೮೫ರಷ್ಟು ಮಂದಿಗೆ ಮಾತ್ರ ಲಸಿಕೆ; ಗರ್ಭಕಂಠ ಕ್ಯಾನ್ಸರ್ ತಡೆಯಲು ಲಸಿಕೆ ಕಡ್ಡಾಯ: ಆರೋಗ್ಯ ಇಲಾಖೆ ಮನವಿ
ಮಡಿಕೇರಿ: ಮಹಿಳೆಯರಲ್ಲಿ ಕಾಣಿಸಿಕೊಳ್ಳುತ್ತಿರುವ ಗರ್ಭಕಂಠ ಕ್ಯಾನ್ಸರ್ ತಡೆಯುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಹೆಚ್ಪಿವಿ ಲಸಿಕಾ ಅಭಿಯಾನಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮಾರ್ಚ್ನಿಂದ ಇಲ್ಲಿಯವರೆಗೆ ಶೇ.೩೦.೮೫ರಷ್ಟು ಮಾತ್ರ ಪ್ರಗತಿ ಸಾಧಿಸಲಾಗಿದ್ದು, ಕಡ್ಡಾಯವಾಗಿ ಲಸಿಕೆ ಪಡೆಯ ಬೇಕೆಂದು ಆರೋಗ್ಯ ಇಲಾಖೆ ಮನವಿ ಮಾಡಿದೆ.
ಕೊಡಗು ಜಿಲ್ಲೆಯಲ್ಲಿ ಮಾರ್ಚ್ ೯ರಿಂದ ಎಚ್ಪಿವಿ ಲಸಿಕೆಯನ್ನು ನೀಡಲು ಪ್ರಾರಂಭಿಸಲಾಗಿದ್ದು, ಒಟ್ಟು ೫,೨೭೬ ಗುರಿ ಹೊಂದಲಾಗಿತ್ತು. ಜಿಲ್ಲೆಗೆ ೩,೯೫೫ ಲಸಿಕೆಯನ್ನು ಸರಬರಾಜು ಮಾಡಲಾಗಿತ್ತು. ಹೆಚ್ಪಿವಿ ಲಸಿಕೆ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸಿದ್ದರೂ ಇಲ್ಲಿಯವರೆಗೆ ೧,೬೨೮ ಮಕ್ಕಳಿಗೆ ಮಾತ್ರ ಲಸಿಕೆ ನೀಡಲಾಗಿದೆ.
ಭವಿಷ್ಯದಲ್ಲಿ ಹೆಣ್ಣು ಮಕ್ಕಳಿಗೆ ಗರ್ಭಕಂಠ ಕ್ಯಾನ್ಸರ್ ಬರುವುದು ತಡೆಯಲು ಸರ್ಕಾರ ಉಚಿತವಾಗಿ ಲಸಿಕೆ ನೀಡುತ್ತಿದೆ. ಫಲಾನುಭವಿಗಳು ಯಾವುದೇ ವದಂತಿಗಳಿಗೆ ಕಿವಿಗೊಡದೆ ಸದುಪಯೋಗಪಡೆದುಕೊಳ್ಳಬೇಕು ಎಂದು ಆರೋಗ್ಯ ಇಲಾಖೆ ಮನವಿ ಮಾಡಿದೆ.
ಎಚ್ಪಿವಿ ಲಸಿಕೆ ಹಾಕಿಸಿಕೊಂಡರೆ ಬಂಜೆತನ ಬರುತ್ತದೆ ಎಂಬ ವದಂತಿಗಳು ಪೋಷಕರಲ್ಲಿ ಭಯ ಹುಟ್ಟಿಸುತ್ತಿವೆ. ಆದರೆ, ವೈಜ್ಞಾನಿಕ ಅಧ್ಯಯನಗಳು ಸ್ಪಷ್ಟವಾಗಿ ಹೇಳುವಂತೆ ಈ ಲಸಿಕೆ ಬಂಜೆತನಕ್ಕೆ ಕಾರಣವಾಗುವುದಿಲ್ಲ. ಲಕ್ಷಾಂತರ ಜನರ ಮೇಲೆ ನಡೆದ ಅಧ್ಯಯನಗಳಲ್ಲಿ ಲಸಿಕೆ ಮತ್ತು ಸಂತಾನೋತ್ಪತ್ತಿ ನಡುವೆ ಯಾವುದೇ ಸಂಬಂಧ ಇಲ್ಲ. ಡಬ್ಲ್ಯುಹೆಚ್ಒ ಸೇರಿದಂತೆ ಆರೋಗ್ಯ ಸಂಸ್ಥೆಗಳು ಈ ವದಂತಿಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿವೆ. ಹೀಗಿದ್ದರೂ ಪೋಷಕರು ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ.
ಎಚ್ಪಿವಿ ವೈರಸ್ ಅಂದರೆ ಹ್ಯೂಮನ್ ಪ್ಯಾಪಿಲೋಮ ವೈರಸ್ ಪ್ಯಾಪಿಲೋಮವಿರಿಡೆ ಎಂಬ ವೈರಸ್ ಜಾತಿಗೆ ಸೇರಿದ್ದು, ಇದರಲ್ಲಿ ಒಟ್ಟು ೨೦೦ಕ್ಕೂ ಹೆಚ್ಚು ಪ್ರಕಾರಗಳು ಇವೆ. ಎಚ್ಪಿವಿ ೧೬ ಮತ್ತು ಎಚ್ಪಿವಿ ೧೮ ವೈರಸ್ ಇದು ಗರ್ಭಕಂಠದ ಕ್ಯಾನ್ಸರ್ಗೆ ಮೂಲ ಕಾರಣವಾಗಿದೆ.
ಇದನ್ನು ೨೦೩೦ರ ಒಳಗೆ ನಿರ್ಮೂಲನೆ ಮಾಡಲು ಜಾಗತಿಕ ಕಾರ್ಯಕ್ರಮ ರೂಪಿಸಲಾಗಿದೆ. ಇದು ಸುಮಾರು ೩೫ ವರ್ಷಗಳಿಂದ ೪೫ ವರ್ಷದ ಒಳಗಿನವರಲ್ಲಿ ಹೆಚ್ಚು ಕಂಡು ಬರುತ್ತದೆ. ಭಾರತದಲ್ಲಿ ಮಹಿಳೆಯರಲ್ಲಿ ಸಂಭವಿಸುವ ಕ್ಯಾನ್ಸರ್ ಪ್ರಕರಣಗಳಲ್ಲಿ ಗರ್ಭಕಂಠ ಕ್ಯಾನ್ಸರ್ ಎರಡನೇ ಪ್ರಮುಖ ಕ್ಯಾನ್ಸರ್ ಆಗಿದೆ. ಇದು ಮರಣಕ್ಕೂ ಕಾರಣವಾಗುತ್ತಿದೆ.
ಪೋಷಕರು ಏನು ಮಾಡಬೇಕು?
ಈಗಾಗಲೇ ಶಿಕ್ಷಣ ಇಲಾಖೆ ಮೂಲಕ ಅರ್ಹ ಹೆಣ್ಣು ಮಕ್ಕಳ ಪಟ್ಟಿಯನ್ನು ಆರೋಗ್ಯ ಇಲಾಖೆಯೊಂದಿಗೆ ಹಂಚಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ. ಈ ಲಸಿಕೆಯನ್ನು ಆರೋಗ್ಯ ಕೇಂದ್ರಗಳಲ್ಲಿ ಮಾತ್ರ ನೀಡಲಾಗುವುದರಿಂದ ಅರ್ಹ ಫಲಾನುಭವಿಗಳನ್ನು ಶಾಲೆಯಿಂದ ಲಸಿಕೆ ನೀಡುವ ಸಮೀಪದ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಲಸಿಕೆ ಹಾಕಿಸಲು ಕ್ರಮಕೈಗೊಳ್ಳಲಾಗಿದೆ. ಲಸಿಕೆ ನೀಡಲು ವಿಶೇಷವಾಗಿ ಪೋಷಕರ ಅಥವಾ ಹೆಣ್ಣು ಮಗುವಿನ ಮೊಬೈಲ್ ನಂಬರ್ ಅತ್ಯಗತ್ಯವಾಗಿ ಬೇಕಿರುವುದಿಂದ ಅದಕ್ಕೂ ಕೂಡ ಪೋಷಕರ ಒಪ್ಪಿಗೆ ನೀಡಬೇಕಿದೆ. ಮೊಬೈಲ್ ನಂಬರ್ಗೆ ಲಸಿಕೆಯ ನಂತರ ಒಟಿಪಿ ಬರುವುದರಿಂದ ಆ ಒಟಿಪಿಯನ್ನು ಆರೋಗ್ಯ ಇಲಾಖೆ ಸಿಬ್ಬಂದಿಯವರು ಕರೆ ಮಾಡಿದಾಗ ಹಂಚಿಕೊಳ್ಳಬೇಕು. ಈ ಲಸಿಕೆಯು ಅತ್ಯಂತ ಸುರಕ್ಷಿತವಾಗಿದ್ದು, ಒಂದು ವೇಳೆ ಅಡ್ಡ ಪರಿಣಾಮಗಳು ಸಂಭವಿಸಿದಲ್ಲಿ ವೈದ್ಯರು ಸೂಚಿಸಿರುವ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು. ಶಾಲೆಯಿಂದ ಹೊರಗುಳಿದ ೧೪ರಿಂದ ೧೫ ವರ್ಷದೊಳಗಿನ ಹೆಣ್ಣು ಮಕ್ಕಳ ಮಾಹಿತಿಯನ್ನು ಆರೋಗ್ಯ ಇಲಾಖೆಯ ಆಶಾ ಕಾರ್ಯಕರ್ತೆಯರು, ಸಿಬ್ಬಂದಿಗಳ ಜೊತೆ ಹಂಚಿಕೊಳ್ಳಬೇಕು.
” ಹೆಚ್ಪಿವಿ ಲಸಿಕಾ ಅಭಿಯಾನಕ್ಕೆ ಸಂಬಂಧಿಸಿದಂತೆ ಮಾರ್ಚ್ನಿಂದ ಇಲ್ಲಿಯವರೆಗೆ ಶೇ.೩೦.೮೫ರಷ್ಟು ಪ್ರಗತಿ ಸಾಧಿಸಲಾಗಿದೆ. ಹೆಚ್ಚಿನ ಮಕ್ಕಳು ಲಸಿಕೆಯನ್ನು ಪಡೆಯಲು ಹಿಂದೇಟುಹಾಕುತ್ತಿದ್ದು, ಪ್ರಯೋಜನ ಪಡೆಯಲುಹಿಂಜರಿಯುತ್ತಿದ್ದಾರೆ. ಈ ಲಸಿಕೆಯು ಭವಿಷ್ಯದಲ್ಲಿ ಹೆಣ್ಣು ಮಕ್ಕಳಿಗೆ ಗರ್ಭಕಂಠ ಕ್ಯಾನ್ಸರ್ಬರುವುದನ್ನು ತಡೆಯಲು ಪರಿಣಾಮಕಾರಿಯಾಗಿದೆ. ಸರ್ಕಾರ ಉಚಿತ ನೀಡುತ್ತಿರುವ ಲಸಿಕೆಯ ಪ್ರಯೋಜನವನ್ನು ಪಡೆಯುವಂತಾಗಬೇಕು.”
-ಡಾ.ಸತೀಶ್ ಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ಕೊಡಗು




