Mysore
22
overcast clouds

Social Media

ಬುಧವಾರ, 10 ಜೂನ್ 2026
Light
Dark

ಹೆಸರಿಗಷ್ಟೆ ವಿದ್ಯಾರ್ಥಿಗಳಿಗೆ ಉಚಿತ ಬಸ್ ಸೌಲಭ್ಯ!

ಮಹೇಂದ್ರ ಹಸಗೂಲಿ

ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣ ಎಂದು ಸಿಎಂ ಘೋಷಣೆ ಮಾಡಿದರೂ ಹಣ ಪಡೆದು ಪಾಸ್ ವಿತರಣೆಗೆ ಆಕ್ರೋಶ 

ಗುಂಡ್ಲುಪೇಟೆ: ರಾಜ್ಯ ಸರ್ಕಾರ ಮೊದಲು ಹೆಣ್ಣು ಮಕ್ಕಳಿಗೆ ಉಚಿತ ಪ್ರಯಾಣದ ಸೌಲಭ್ಯ ಕಲ್ಪಿಸಿತ್ತು. ಈಗ ಡಿ.ಕೆ.ಶಿವಕುಮಾರ್ ಮುಖ್ಯ ಮಂತ್ರಿಯಾದ ನಂತರ ಗಂಡು ಮಕ್ಕಳಿಗೂ (ವಿದ್ಯಾರ್ಥಿಗಳಿಗೆ) ಬಸ್ ಪ್ರಯಾಣ ಉಚಿತ ಎಂದು ಘೋಷಣೆ ಮಾಡಿದ್ದರೂ ಹಣ ಪಾವತಿಸಿಕೊಂಡು ಬಸ್ ಪಾಸ್ ವಿತರಿಸುತ್ತಿರು ವುದು ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಸರ್ಕಾರ ಘೋಷಣೆ ಹೊರಡಿಸಿದ ನಂತರವಾದರೂ ಇದರ ಬಗ್ಗೆ ಶಿಕ್ಷಕರು ಹಾಗೂ ಕೆಎಸ್‌ಆರ್‌ಟಿಸಿ ಅಧಿಕಾರಿಗಳು, ವಿದ್ಯಾರ್ಥಿಗಳಿಗೆ, ಪೋಷಕರಿಗೆ ಮಾಹಿತಿ ನೀಡಬೇಕು. ಇಲ್ಲದಿದ್ದರೆ ಬಡ ವಿದ್ಯಾರ್ಥಿಗಳಿಗೆ ಉಚಿತ ಯೋಜನೆಯ ಅವಕಾಶ ಸಿಗುವುದಿಲ್ಲ ಎಂಬುದು ಪೋಷಕರ ಅನಿಸಿಕೆಯಾಗಿದೆ.

ಸೈಬರ್ ಸೆಂಟರ್‌ಗೆ ತೆರಳಿ ಬಸ್ ಪಾಸ್‌ಗೆ ಅರ್ಜಿ ಸಲ್ಲಿಸಿದರೆ ಅದು ಕೆಎಸ್‌ಆರ್‌ಟಿಸಿ ಮೂಲಕ ಪಾಸ್ ಅನ್ನು ಶಾಲೆಗೆ, ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ. ಶಾಲಾ ವಿದ್ಯಾರ್ಥಿಗಳಿಂದ ಬಸ್ ಪಾಸ್‌ಗೆ ವಾರ್ಷಿಕ ೭೫೦ ರೂ. ಹಾಗೂ ಪದವಿಪೂರ್ವ ಹಾಗೂ ಪದವಿ ವಿದ್ಯಾರ್ಥಿಗಳಿಂದ ೧,೫೦೦ ರೂ. ಪಡೆದುಕೊಂಡು ಬಸ್ ಪಾಸ್ ವಿತರಿಸಲಾಗುತ್ತಿದೆ.

ಸರ್ಕಾರದಿಂದ ಆದೇಶ ಬಾರದಿದ್ದರೆ ಉಚಿತ ಬಸ್ ಪ್ರಯಾಣ ಘೋಷಣೆ ಮಾಡಿರುವುದು ವ್ಯರ್ಥ. ಅಲ್ಲಿಯವರೆಗೆ ಎಲ್ಲರೂ ಬಸ್ ಪಾಸ್ ಮಾಡಿಸಿರುತ್ತಾರೆ. ಸರ್ಕಾರ ಹಾಗೂ ಕೆಎಸ್ ಆರ್‌ಟಿಸಿ ನಿಗಮದ ವಿಳಂಬ ನೀತಿ ಸರಿಯಲ್ಲ ಎಂದು ಪೋಷಕರು ಕಿಡಿಕಾರಿದ್ದಾರೆ.

” ಸರ್ಕಾರದಿಂದ ಈಗಾಗಲೇ ಘೋಷಣೆ ಮಾಡಿರುವಂತೆ ಉಚಿತ ಬಸ್ ಪಾಸ್ ಆದೇಶವನ್ನು ಶನಿವಾರ ಹೊರಡಿಸಲಾಗಿದೆ. ವಿದ್ಯಾರ್ಥಿಗಳು ಬಸ್ ಪಾಸ್ ಮಾಡಿಸದೆ ಆದೇಶದ ಪ್ರತಿ ಬರುವವರೆಗೆ ಕಾಯಬೇಕು.”

-ಎಚ್.ಎಂ.ಗಣೇಶ್ ಪ್ರಸಾದ್, ಶಾಸಕ

” ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣ ಸೌಲಭ್ಯದ ಬಗ್ಗೆ ನಮಗೆ ಸರ್ಕಾರದಿಂದ ಯಾವುದೇ ಆದೇಶ ಬಂದಿಲ್ಲ. ಆದೇಶ ಬಂದರಷ್ಟೇ ನಾವು ಪಾಸ್ ವಿತರಿಸದೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಬಹುದು. ಇಲ್ಲದಿದ್ದರೆ ಹಣ ನೀಡಿ ಪಾಸ್ ಮಾಡಿಸಿಕೊಳ್ಳಬೇಕಾದ ಅನಿವಾರ್ಯತೆ ಇರುತ್ತದೆ.”

ಕುಮಾರ್ ನಾಯಕ್, ಸಾರಿಗೆ ಘಟಕದ ವ್ಯವಸ್ಥಾಪಕ 

 

 

Tags:
error: Content is protected !!