Mysore
24
overcast clouds

Social Media

ಸೋಮವಾರ, 27 ಜುಲೈ 2026
Light
Dark

ಚುಂಚನಕಟ್ಟೆ ಹೋಬಳಿಯ ರೈತರಿಗೆ ಭತ್ತದ ಇಳುವರಿ ಕುಂಠಿತ ಭೀತಿ

ದುಬಾರಿಯಾದ ಕಟಾವು ವೆಚ್ಚ, ಕೂಲಿ ಕಾರ್ಮಿಕರ ಕೊರತೆಯಿಂದ ಜಮೀನಿನಲ್ಲೇ ಬೆಳೆ ಉದುರುವ ಆತಂಕ

ಆನಂದ್ ಹೊಸೂರು

ಹೊಸೂರು: ದೊರೆಯದ ಕೂಲಿ ಕಾರ್ಮಿಕರು. . . ದುಬಾರಿಯಾದ ಕಟಾವು ವೆಚ್ಚ. . . ಅವಧಿ ಮೀರಿ ಹಾಳಾಗುತ್ತಿರುವ ಬೆಳೆ. . . ಇದು ಸಾಲಿಗ್ರಾಮ ತಾಲ್ಲೂಕಿನ ಚುಂಚನಕಟ್ಟೆ ಹೋಬಳಿಯ ಹಲವಾರು ರೈತರ ಜಮೀನುಗಳಲ್ಲಿ ಕಂಡುಬರುತ್ತಿರುವ ದೃಶ್ಯ.

ಭತ್ತದ ಫಸಲು ಕಟಾವಿಗೆ ಬಂದಿದ್ದು ಕೂಲಿ ಕಾರ್ಮಿಕರ ಕೊರತೆಯಿಂದ ಕಟಾವಾ ಗಬೇಕಿರುವ ಬೆಳೆ ಜಮೀನುಗಳಲ್ಲೇ ಉದುರುವಂತೆ ಆಗಿದ್ದು ಇಳುವರಿ ಕುಂಠಿತ ವಾಗುವ ಭೀತಿ ರೈತರಿಗೆ ಎದುರಾಗಿದೆ.

ಹಿಂದೆ ಭತ್ತದ ಬೆಳೆ ಲಾಭದಾಯಕ ಬೆಳೆಯಾಗಿತ್ತು. ಆದರೆ ಯಂತ್ರೋಪಕರಣ ಗಳು ದಾಂಗುಡಿ ಇಟ್ಟು ಬಿತ್ತನೆ ಬೀಜ, ಉಳುಮೆ, ಗದ್ದೆ ಹದ ಮಾಡಲು ಟ್ರಾಕ್ಟರ್ ಗಳನ್ನೇ ಅವಲಂಬಿಸಿದ ಕಾರಣ ಭತ್ತ ನಾಟಿ ಮಾಡುವ ವೇಳೆಗೆ ಕಡಿಮೆ ಎಂದರೂ ೨೫ ಸಾವಿರದಿಂದ ೨೮ ಸಾವಿರ ರೂ. ವರೆಗೆ ವೆಚ್ಚ ತಗುಲುತ್ತಿರುವುದು ಭತ್ತದ ಕೃಷಿಕರಿಗೆ ಹೊರೆಯಾಗಿ ಪರಿಣಮಿಸಿದೆ.

ಅಲ್ಲದೆ ಇದೀಗ ಕಟಾವು ಮಾಡಲು ಕೂಲಿ ದರ ಈ ಹಿಂದೆ ೩ರಿಂದ ೪ ಸಾವಿರ ರೂ. ಗಳಿದ್ದುದು ಈಗ ೧೦ ಸಾವಿರ ರೂ. ಗಳನ್ನು ತಲುಪಿದೆ. ಕಟಾವಾದ ಹುಲ್ಲಿನಿಂದ ಭತ್ತ ಬೇರ್ಪಡಿಸಲು ಯಂತ್ರದ ಮಾಲೀಕರಿಗೆ ಎಕರೆಗೆ ೪ರಿಂದ ೫ ಚೀಲ ಭತ್ತ ನೀಡಲಾಗುತ್ತಿದ್ದು, ನಂತರ ಒಣಹುಲ್ಲು ಕಟ್ಟಲು ಒಂದು ಕಂತೆಗೆ ೧೦ ರೂ. ಗಳಂತೆ ಹಣ ನೀಡಬೇಕಿದ್ದು ಕಟಾವಿಗೆ ೨೦,೦೦೦ ರೂ. , ನಾಟಿ ಕಾರ್ಯಕ್ಕೆ ೨೫,೦೦೦ ರೂ. ಸೇರಿ ಒಟ್ಟು ೪೫,೦೦೦ ರೂ. ಗಳಷ್ಟು ಖರ್ಚು ಮಾಡಿ ರೈತರಿಗೆ ಉಳಿಯುವುದಾದರೂ ಏನು ಎಂಬುದು ರೈತರ ಪ್ರಶ್ನೆಯಾಗಿದೆ.

ಒಂದು ಎಕರೆ ಭತ್ತ ಬೆಳೆಯಲು ೫೦ ಸಾವಿರ ರೂ. ಖರ್ಚಾಗುತ್ತಿದ್ದು ಅಷ್ಟೇ ಪ್ರಮಾಣದ ಹಣ ಮಾರಾಟದಿಂದ ಬರುತ್ತಿದೆ. ಸರ್ಕಾರ ಭತ್ತಕ್ಕೆ ಕನಿಷ್ಠ ೪ ಸಾವಿರ ರೂ. ಬೆಂಬಲ ಬೆಲೆ ನೀಡಿದರೆ ಉತ್ತಮ. –ಡಿ. ಸಿ. ರಾಮೇಗೌಡ, ಕೃಷಿಕ ಸಮಾಜದ ನಿರ್ದೇಶಕ, ದೊಡ್ಡ ಕೊಪ್ಪಲು

 

Tags:
error: Content is protected !!