Mysore
22
mist

Social Media

ಶನಿವಾರ, 06 ಡಿಸೆಂಬರ್ 2025
Light
Dark

ಕಾಡುಹಂದಿಗಳ ಕಾಟದಿಂದ ಬೇಸತ್ತ ರೈತರು

ಹೊಸೂರು ಸುತ್ತಮುತ್ತ ಭತ್ತದ ಪೈರುಗಳನ್ನು ತಿಂದುಹಾಕುತ್ತಿರುವ ಕಾಡುಹಂದಿಗಳು, ನವಿಲುಗಳಿಂದಲೂ ಬೆಳೆ ನಾಶ 

ಹೊಸೂರು: ವನ್ಯ ಪ್ರಾಣಿಗಳ ಹಾವಳಿಯಿಂದ ಕಾಡಂಚಿನ ರೈತರು ಪರಿತಪಿಸುವುದು ಒಂದೆಡೆಯಾದರೆ ಇತ್ತ ಕಾಡು ಹಂದಿಗಳ ಕಾಟದಿಂದ ಭತ್ತದ ನಾಡಿನ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಸಾಲಿಗ್ರಾಮ ತಾಲ್ಲೂಕಿನ ಹೊಸೂರು ಸುತ್ತಮುತ್ತ ಹಾರಂಗಿ ಅಚ್ಚುಕಟ್ಟು ರೈತರ ಜಮೀನುಗಳಿಗೆ ಕಾಡು ಹಂದಿಗಳು ಮತ್ತು ನವಿಲುಗಳು ನುಗ್ಗಿ ಬೆಳೆಗಳನ್ನು ನಾಶಪಡಿಸುತ್ತಿದ್ದು, ಸಾಲ ಮಾಡಿ ಬೆಳೆದ ಬೆಳೆ ಕೈ ಸೇರುವ ಮುನ್ನವೇ ಕಾಡು ಪ್ರಾಣಿಗಳ ದಾಳಿಯಿಂದ ಹಾಳಾಗುತ್ತಿದೆ.

ಈ ಹಿಂದೆ ಕೇವಲ ರಾಗಿ, ಜೋಳ, ಅಲಸಂದೆ, ಕಬ್ಬು ಬೆಳೆಗಳಿಗೆ ಮಾರಕವಾಗಿದ್ದ ಕಾಡುಹಂದಿಗಳು ಈ ಬಾರಿ ಭತ್ತದ ಬೆಳೆಯನ್ನು ಹಾಳು ಮಾಡುತ್ತಿದ್ದು ಭತ್ತದ ಪೈರುಗಳನ್ನು ಕತ್ತರಿಸಿ ಹಾಕುತ್ತಿವೆ. ಭತ್ತದ ಪೈರನ್ನು ಕಾಡುಹಂದಿಗಳು ಗುಂಪು ಗುಂಪಾಗಿ ದಾಳಿ ಮಾಡಿ ತಿನ್ನುವ ಪರಿಣಾಮ ರಾತ್ರಿಯಿಡೀ ರೈತರು ಭತ್ತದ ಗದ್ದೆಗಳ ಬಳಿ ಕಾವಲು ಕಾಯುವಂತಾಗಿದೆ.

ಇದನ್ನು ಓದಿ:‘ಒಕ್ಕಲಿಗರ ಸರ್ವಾಂಗೀಣ ಅಭಿವೃದ್ಧಿಗೆ ಆದ್ಯತೆ’

ನವಿಲುಗಳ ಕಾಟ : ಕಾಡು ಹಂದಿಗಳ ಹಾವಳಿಯಿಂದ ಬೆಳೆ ಕಾಪಾಡಿಕೊಂಡರೆ ಭತ್ತದ ಪೈರು ತೆನೆ ಒಡೆದ ನಂತರ ನವಿಲುಗಳ ಕಾಟ ಹೆಚ್ಚುತ್ತಿದ್ದು, ಭತ್ತವನ್ನು ತೆನೆಯಿಂದ ತಿನ್ನುತ್ತಿವೆ. ಅವರೆ, ತೊಗರಿ, ಮುಸುಕಿನ ಜೋಳ, ರಾಗಿ ಯಾವುದೇ ಬೆಳೆ ಹಾಕಿದರೂ ಅವುಗಳನ್ನು ಮೊಳಕೆಯಲ್ಲೇ ತಿನ್ನುತ್ತಿದ್ದು ಬೆಳೆಯ ರಕ್ಷಣೆಯೇ ರೈತರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಅರಣ್ಯ ಇಲಾಖೆ ಕಾಡುಹಂದಿಗಳು, ನವಿಲುಗಳ ಹಾವಳಿಗೆ ಕಡಿವಾಣ ಹಾಕಬೇಕೆಂಬ ಆಗ್ರಹ ರೈತರಿಂದ ಕೇಳಿಬಂದಿದೆ.

” ಕಾಡು ಹಂದಿಗಳು, ನವಿಲುಗಳು ಮತ್ತು ಚಿರತೆಗಳು ಇತ್ತೀಚೆಗೆ ಹೆಚ್ಚಿನ ಪ್ರಮಾಣದಲ್ಲಿ ಇದ್ದು ಅವುಗಳ ನಿಯಂತ್ರಣ ಸಾಧ್ಯವಿಲ್ಲ. ರೈತರು ಆದಷ್ಟು ಜಾಗೃತವಾಗಿ ತಮ್ಮ ಬೆಳ ಕಾಪಾಡಿಕೊಳ್ಳಲೇಬೇಕು. ಬೆಳೆ ಹಾನಿಯಾಗಿದ್ದರೆ ಇಲಾಖೆಗೆ ಅರ್ಜಿ ಸಲ್ಲಿಸಿದರೆ, ಪರಿಹಾರ ದೊರಕಿಸಿಕೊಡಲಾಗುವುದು.”

-ಹರಿಪ್ರಸಾದ್, ವಲಯ ಅರಣ್ಯ ಅಧಿಕಾರಿ, ಕೆ.ಆರ್.ನಗರ

” ಕಾಡು ಹಂದಿಗಳು ಭತ್ತದ ಪೈರನ್ನು ತಿಂದುಹಾಕುತ್ತಿವೆ.ಇದರಿಂದ ಕಷ್ಟಪಟ್ಟು ಬೆಳೆದ ಬೆಳೆ ನಾಶವಾಗುತ್ತಿದೆ. ರಾತ್ರಿಯಿಡೀ ಪಟಾಕಿ ಸಿಡಿಸಿ ಶಬ್ದ ಮಾಡಿ ಅವುಗಳನ್ನು ಓಡಿಸುವುದೇ ಸವಾಲಾಗಿದೆ.”

-ರಾಮೇಗೌಡ, ರೈತ, ಹೊಸೂರು

-ಆನಂದ್ ಹೊಸೂರು

Tags:
error: Content is protected !!