Mysore
21
overcast clouds

Social Media

ಬುಧವಾರ, 19 ಆಗಸ್ಟ್ 2026
Light
Dark

ಉತ್ಪಾದನಾ ವೆಚ್ಚ ಹೆಚ್ಚಾದರೂ ಶುಂಠಿ ಕೃಷಿಗೆ ರೈತರ ಉತ್ಸಾಹ

ಹನಗೋಡು ಭಾಗದಲ್ಲಿ ಶುಂಠಿ ಬಿತ್ತನೆ ಕಾರ್ಯ ಚುರುಕು ; ಲಾಣದ ನಿರೀಕ್ಷೆಯಲ್ಲಿ ರೈತರು

ದಾ.ರಾ ಮಹೇಶ್‌

ವೀರನಹೊಸಹಳ್ಳಿ: ಹಸಿ ಶುಂಠಿಗೆ ಉತ್ತಮ ಬೆಲೆ ಸಿಗದಿದ್ದರೂ ಶುಂಠಿ ಬಿತ್ತನೆ ಕಾರ್ಯವು ಹನಗೋಡು ಭಾಗದಲ್ಲಿ ಭರದಿಂದ ಸಾಗಿದ್ದು, ರೈತರು ಉತ್ಸಾಹದಿಂದ ಶುಂಠಿ ಬಿತ್ತನೆ ಕಾರ್ಯ ಚುರುಕುಗೊಳಿಸಿದ್ದಾರೆ.

ಕಳೆದ ವರ್ಷ ಹಸಿ ಶುಂಠಿಗೆ ಉತ್ತಮ ಬೆಲೆ ಸಿಗಲಿಲ್ಲ. ಒಂದೂವರೆ ಸಾವಿರ ರೂ. ಗಳಿಗೆ ಮಾರಾಟವಾಯಿತು. ಹಾಕಿದ ಬಂಡವಾಳವೂ ಸಿಗಲಿಲ್ಲ. ಲಕ್ಷಾಂತರ ರೂ. ಕಳೆದುಕೊಂಡರೂ ರೈತರ ಉತ್ಸಾಹ ಕಡಿಮೆ ಆಗಿಲ್ಲ. ಹುಣಸೂರು ತಾಲ್ಲೂಕಿನ ಹನಗೋಡು ಹೋಬಳಿ ವ್ಯಾಪ್ತಿಯಲ್ಲಿ ಈ ವರ್ಷ ಶುಂಠಿ ಕೃಷಿಯು ಚುರುಕುಗೊಂಡಿದೆ.

ಈ ಭಾಗದಲ್ಲಿ ಹೊಗೆಸೊಪ್ಪು ಪ್ರಮುಖ ವಾಣಿಜ್ಯ ಬೆಳೆ ಎನಿಸಿಕೊಂಡಿದ್ದರೂ ಶುಂಠಿ ಬೆಳೆ ಯುವ ಕೃಷಿ ಭೂಮಿಯೂ ವಿಸ್ತಾರಗೊಳ್ಳುತ್ತಿದೆ. ಉತ್ತಮ ಇಳುವರಿಯ ದೃಷ್ಟಿಯಿಂದ ಫೆಬ್ರುವರಿ ಕೊನೆ ಅಥವಾ ಮಾರ್ಚ್ ಮೊದಲ ವಾರದಲ್ಲಿ ಶುಂಠಿ ಬಿತ್ತನೆ ಮಾಡುವುದು ಸಾಮಾನ್ಯ. ಈಗಾಗಲೇ ಶುಂಠಿ ನಾಟಿ ಕಾರ್ಯ ಕೊನೆಗೊಳ್ಳುತ್ತಿದೆ.

ಉತ್ತಮ ಲಾಭ ಗಳಿಸುವ ನಿರೀಕ್ಷೆಯಲ್ಲಿ ಉತ್ಸಾಹದಿಂದಲೇ ಚಟುವಟಿಕೆ ಆರಂಭಿಸಿರುವ ಬೆಳೆಗಾರರಿಗೆ ಪಿವಿಸಿ ಪೈಪ್‌ಗಳ ಬೆಲೆ, ಕೋಳಿ ಗೊಬ್ಬರ, ಬಿತ್ತನೆ ಬೀಜದ ಬೆಲೆ ಮತ್ತು ಕೂಲಿಯಲ್ಲಿನ ಹೆಚ್ಚಳವು ನುಂಗಲಾರದ ತುತ್ತಾಗಿ ಪರಿಣಮಿಸಿದೆ.

೨೦೨೪ರ ಜನವರಿಯಲ್ಲಿ ಹಸಿಶುಂಠಿ ಬೆಲೆಯು ಪ್ರತಿ ೬೦ ಕೆ. ಜಿ. ಯ ಚೀಲಕ್ಕೆ ೨ ಸಾವಿರ ರೂ. ಗಳಿಂದ ೨,೨೦೦ ರೂ. ಗಳಿಗೆ ಮಾರಾಟವಾಗಿತ್ತು. ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ಈ ಬೆಲೆ ೧,೨೦೦ ಸಾವಿರ ರೂ. ಗೆ ಕುಸಿತವಾಗಿತ್ತು.

ಕೋಳಿ ಗೊಬ್ಬರ ದುಬಾರಿ: ಶುಂಠಿ ಬೆಳೆಯಲ್ಲಿ ಉತ್ತಮ ಇಳುವರಿ ಪಡೆಯುವಲ್ಲಿ ಕೋಳಿ ಗೊಬ್ಬರಕ್ಕೆ ರೈತರು ಮಹತ್ವ ನೀಡುತ್ತಿರುವುದರಿಂದ ಈ ಬಾರಿ ಕೋಳಿ ಗೊಬ್ಬರದ ಬೆಲೆಯೂ ದುಬಾರಿಯಾಗಿದೆ. ಟನ್‌ಗೆ ೨,೫೦೦ ರೂ. ನಿಂದ ೩,೦೦೦ ಸಾವಿರ ರೂ. ಗೆ ಸಿಗುತ್ತಿದ್ದ ಕೋಳಿ ಗೊಬ್ಬರ ಈ ವರ್ಷ ೩,೦೦೦ ರೂ. ಗಳಿಂದ ೩,೫೦೦ ರೂ. ಗೆ ಏರಿಕೆಯಾಗಿದೆ.

ತಮಿಳುನಾಡಿನಿಂದ ಪ್ರತಿದಿನ ಹನಗೋಡಿಗೆ ೧೦ ರಿಂದ ೧೫ ಲಾರಿಗಳು ಕೋಳಿಗೊಬ್ಬರ ಹೊತ್ತು ತರುತ್ತಿದ್ದರೂ ಬೇಡಿಕೆ ತಗ್ಗಿಲ್ಲ.

ಒಟ್ಟಾರೆ ಉತ್ಪಾದನಾ ವೆಚ್ಚ ಕಳೆದ ಬಾರಿಗಿಂತ ಹೆಚ್ಚಾಗಿದ್ದರೂ ರೈತರು ಶುಂಠಿ ಕೃಷಿಯಲ್ಲಿ ತೊಡಗಿಸಿಕೊಂಡು ಲಾಭದತ್ತ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಹನಗೋಡು ಭಾಗದಲ್ಲಿ ಶುಂಠಿ ಬಿತ್ತನೆ ಕಾರ್ಯ ಚುರುಕು; ಲಾಭದ ನಿರೀಕ್ಷೆಯಲ್ಲಿ ರೈತರು ಒಂದು ಎಕರೆ ಪ್ರದೇಶದಲ್ಲಿ ಶುಂಠಿ ಬೆಳೆಯಲು ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ೨ ಲಕ್ಷ ರೂ. ಗಳಿಗಿಂತ ಹೆಚ್ಚು ಖರ್ಚಾಗುತ್ತಿದೆ. ದರ ಉತ್ತಮವಾಗಿ ದೊರೆತಲ್ಲಿ ಲಾಭವಾಗುತ್ತದೆ. -ರಾಜೇಗೌಡ, ಶುಂಠಿ ಬೆಳೆಗಾರ

ಹುಣಸೂರು ತಾಲ್ಲೂಕಿನಲ್ಲಿ ಕಳೆದ ವರ್ಷ ೧,೩೦೦ ಹೆಕ್ಟೇರ್ ಪ್ರದೇಶದಲ್ಲಿ ಶುಂಠಿ ಬೆಳೆದಿದ್ದು ಈ ವರ್ಷ ೧,೫೦೦ ಹೆಕ್ಟೇರ್ ದಾಟುವ ಸಾಧ್ಯತೆಯಿದೆ. –ನಾಗರಾಜ್, ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ

 

Tags:
error: Content is protected !!