Mysore
31
few clouds

Social Media

ಶುಕ್ರವಾರ, 28 ಮಾರ್ಚ್ 2025
Light
Dark

ಆರ್ಥಿಕ ಸಬಲತೆಯತ್ತ ಲಿಂಗತ್ವ ಅಲ್ಪಸಂಖ್ಯಾತರ ದಿಟ್ಟ ಹೆಜ್ಜೆ

ಸ್ವ ಸಹಾಯ ಸಂಘ ಸ್ಥಾಪನೆ: ೧೫ ಮಂದಿ ಸದಸ್ಯರು

ಚಿರಂಜೀವಿ ಸಿ.ಹುಲ್ಲಹಳ್ಳಿ

ಮೈಸೂರು: ಸಾಮಾನ್ಯವಾಗಿ ಸಿಗ್ನಲ್‌ನಲ್ಲಿ ಕೆಂಪು ದೀಪ ಬೆಳಗಿದ ತಕ್ಷಣ ವಾಹನವನ್ನು ನಿಲುಗಡೆ ಮಾಡಿದವರ ಬಳಿಗೆ ಧಾವಿಸಿ, ಭಿಕ್ಷಾಟನೆ ಮಾಡುತ್ತಾ, ಆ ಹಣದಿಂದಲೇ ಬಹಳಷ್ಟು ಲಿಂಗತ್ವ ಅಲ್ಪಸಂಖ್ಯಾತರು ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಹಲವರು ಅವರನ್ನು ಅಪಹಾಸ್ಯ, ವ್ಯಂಗ್ಯದಿಂದ ನೋಡುತ್ತಾರೆ. ಇಂತಹ ಅವಮಾನದ ವಿರುದ್ಧ ಸಿಡಿದ ಹಲವು ಲಿಂಗತ್ವ ಅಲ್ಪಸಂಖ್ಯಾತರು ಸ್ವ ಸಹಾಯ ಸಂಘವನ್ನು ಸ್ಥಾಪಿಸುವ ಮೂಲಕ ಗೌರವಯುತವಾದ ಸ್ವಾವಲಂಬನೆ ಬದುಕಿನತ್ತ ದೃಢ ಹೆಜ್ಜೆ ಇಟ್ಟಿದ್ದಾರೆ.

ಸರ್ಕಾರ ನೀಡುವ ಲಿಂಗತ್ವ ಅಲ್ಪಸಂಖ್ಯಾತರ ಗುರುತಿನ ಚೀಟಿಯನ್ನು ಕೇವಲ ೯೦ ಮಂದಿ ಪಡೆದಿದ್ದು, ಅವರು ಮಾತ್ರ ಸರ್ಕಾರದ ಮೈತ್ರಿ ಮತ್ತು ಗೃಹಲಕ್ಷ್ಮಿ ಯೋಜನೆಯಡಿ ಮಾಸಾಶನ ಪಡೆಯುತ್ತಿದ್ದಾರೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಮಹಿಳಾ ಅಭಿವೃದ್ಧಿ ನಿಗಮದಿಂದ ಇವರಿಗೆ ನಿರೀಕ್ಷಿತ ಪ್ರಮಾಣದಲ್ಲಿ ಸಾಲ ಸೌಲಭ್ಯ ಕೂಡ ಸಿಕ್ಕಿಲ್ಲ.

ಈ ಹಿನ್ನೆಲೆಯಲ್ಲಿ ಸ್ವಾವಲಂಬಿ ಜೀವನ ನಡೆಸಲು ಸಂಘಟಿತರಾದ ೧೫ ಲಿಂಗತ್ವ ಅಲ್ಪಸಂಖ್ಯಾತರು ಆದರ್ಶ ಹೆಸರಿನಲ್ಲಿ ಸ್ವ ಸಹಾಯ ಸಂಘ ಸ್ಥಾಪಿಸಿಕೊಂಡು ಆರ್ಥಿಕವಾಗಿ ಸದೃಢರಾಗುತ್ತಿದ್ದಾರೆ.

ಜಿಲ್ಲೆಯಲ್ಲಿ ೧,೮೦೦ ಲಿಂಗತ್ವ ಅಲ್ಪ ಸಂಖ್ಯಾತರಿದ್ದು, ನಗರದಲ್ಲಿಯೇ ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿದ್ದಾರೆ. ಸಾಕಷ್ಟು ಮಂದಿ ಭಿಕ್ಷಾಟನೆಯಲ್ಲಿ ತೊಡಗಿದ್ದಾರೆ. ಆದರೆ, ಬಹುಪಾಲು ಮಂದಿ ಒಲ್ಲದ ಮನಸ್ಸಿನಿಂದ ಭಿಕ್ಷಾಟನೆ ಮಾಡುತ್ತಿದ್ದು, ಸ್ವ ಉದ್ಯೋಗ ಮತ್ತು ಸ್ವ ವ್ಯವಹಾರದಿಂದ ಸ್ವಾವಲಂಬಿ ಬದುಕು ನಡೆಸಬೇಕು ಎಂದು ಕನಸು ಕಾಣುತ್ತಿದ್ದಾರೆ. ಇಂತಹವರಿಗೆ ಆರ್ಥಿಕ ಬೆಂಬಲ ನೀಡುವುದು ‘ಆದರ್ಶ’ ಸ್ವ ಸಹಾಯ ಸಂಘದ ಉದ್ದೇಶವಾಗಿದೆ.

ಲಿಂಗತ್ವ ಅಲ್ಪಸಂಖ್ಯಾತರನ್ನು ಸಮಾಜ ನೋಡುವ ದೃಷ್ಟಿಯೇ ಬೇರೆ. ಜೊತೆಗೆ ದೊಡ್ಡ ಮನಸ್ಸಿನಿಂದ ಕೆಲಸ ಕೊಡುವುದು ವಿರಳ.

ಭಿಕ್ಷಾಟನೆ ಅನಿವಾರ್ಯವಾಗಿದೆ. ಇವರಿಗೆಲ್ಲ ಆರ್ಥಿಕ ನೆರವು ದೊರೆತರೆ ಭಿಕ್ಷಾಟನೆಯಿಂದ ದೂರ ಸರಿಯಬಹುದು. ಹೀಗಾಗಿ ಲಿಂಗತ್ವ ಅಲ್ಪ ಸಂಖ್ಯಾತರಾದ ಪ್ರಣತಿ ಪ್ರಕಾಶ್ ಮತ್ತು ಶಿವರಾಜು ಅವರು ೨೦೨೩ರ ಜುಲೈನಲ್ಲಿ ‘ಆದರ್ಶ ಲಿಂಗತ್ವ ಅಲ್ಪ ಸಂಖ್ಯಾತರ ಸ್ವ ಸಹಾಯ ಸಂಘ’ ರಚಿಸಿ, ೧೫ ಮಂದಿಯನ್ನು ಸಂಘದ ಸದಸ್ಯರನ್ನಾಗಿ ಮಾಡಿದರು.

೧೫ ಸದಸ್ಯರಲ್ಲಿ ಈಗಾಗಲೇ ೧೨ ಸದಸ್ಯರಿಗೆ ತಲಾ ೧೦ ಸಾವಿರದಂತೆ ೧.೨ ಲಕ್ಷ ರೂ. ಸಾಲ ನೀಡಲಾಗಿದ್ದು, ಈ ಹಣದಲ್ಲಿ ಆರು ಮಂದಿ ಕುರಿ, ಮೇಕೆಗಳನ್ನು ಖರೀದಿಸಿ ಸ್ವಾವಲಂಬಿ ಜೀವನ ನಡೆಸಲು ಮುಂದಾಗಿರುವುದು ಇತರರಿಗೆ ಮಾದರಿಯಾಗಿದೆ.

೨.೫ ಲಕ್ಷ ರೂ. ಸಂಗ್ರಹ:  ಪ್ರತಿ ತಿಂಗಳು ಎಲ್ಲರೂ ಸಂಘದ ಹೆಸರಿನಲ್ಲಿ ಒಂದು ಸಾವಿರ ರೂ. ಉಳಿತಾಯ ಮಾಡುತ್ತಿದ್ದಾರೆ. ೨.೫ ಲಕ್ಷ ರೂ. ಗಳವರೆಗೆ ಹಣವನ್ನು ಕಳೆದ ೧೬ ತಿಂಗಳಲ್ಲಿ ಸಂಗ್ರಹಿಸಲಾಗಿದೆ. ಸದಸ್ಯರೇ ಸಾಲವನ್ನು ಪಡೆದು ಸಕಾಲಕ್ಕೆ ಮರು ಪಾವತಿಸುವ ಮೂಲಕ ಸಂಘದ ಬೆಳವಣಿಗೆಗೆ ಸಹಕಾರ ನೀಡುತ್ತಿದ್ದಾರೆ ಎಂದು ಸಂಘದ ಸಂಸ್ಥಾಪಕರಲ್ಲಿ ಒಬ್ಬರಾದ ಶಿವರಾಜು ಹೇಳಿದರು.

” ನಮ್ಮ ಸಮುದಾಯವು ಸಮಾಜದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಇವರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸಿ ಸ್ವಾವಲಂಬಿಗಳಾಗಿಸಬೇಕು ಎಂಬ ಸದುದ್ದೇಶದಿಂದ ಲಿಂಗತ್ವ ಅಲ್ಪಸಂಖ್ಯಾತರ ಸ್ವ ಸಹಾಯ ಸಂಘವನ್ನು ಸ್ಥಾಪಿಸಲಾಗಿದೆ. ಮುಂದಿನ ದಿನಗಳಲ್ಲಿ ಸಹಕಾರ ಸಂಘವನ್ನು ಸ್ಥಾಪಿಸುವ ಗುರಿ ಇದೆ.”

-ಶಿವರಾಜು, ಲಿಂಗತ್ವ ಅಲ್ಪಸಂಖ್ಯಾತರು,

Tags: