Mysore
21
broken clouds

Social Media

ಬುಧವಾರ, 09 ಸೆಪ್ಟೆಂಬರ್ 2026
Light
Dark

ಅರೇಪುರ ಗ್ರಾಮಕ್ಕಿಲ್ಲ ಸರ್ಕಾರಿ ಬಸ್ ಸೌಲಭ್ಯ  

ಮಹೇಂದ್ರ ಹಸಗೂಲಿ

ಗ್ರಾಮಸ್ಥರಿಗೆ ನಿತ್ಯ ಎರಡು ಕಿ.ಮೀ. ಬಸ್‌ಗಾಗಿ ನಡೆದುಕೊಂಡು ಹೋಗಬೇಕಾದ ದುಸ್ಥಿತಿ

ಗುಂಡ್ಲುಪೇಟೆ: ತಾಲ್ಲೂಕಿನ ಮೈಸೂರು-ಊಟಿ ಹೆದ್ದಾರಿಯ ಮಾರ್ಗದಲ್ಲಿರುವ ಅರೇಪುರ ಗ್ರಾಮ ಹೆದ್ದಾರಿಯಿಂದ ಒಂದೂವರೆಯಿಂದ ಎರಡು ಕಿ.ಮೀ . ದೂರದಲ್ಲಿದೆ. ಆದರೆ, ಈ ಗ್ರಾಮಕ್ಕೆ ಸ್ವಾತಂತ್ರ್ಯ ಪೂರ್ವದಿಂದ ಇಲ್ಲಿಯವರೆಗೂ ಸರ್ಕಾರಿ ಬಸ್ ಸೌಕರ್ಯವಿಲ್ಲ.

ಇಲ್ಲಿನ ಜನರು ನೋಡಿರುವುದು ಕೇವಲ ಚುನಾವಣೆ ಸಂದರ್ಭದಲ್ಲಿ ಮತಗಟ್ಟೆಗೆ ಬರುವ ಅಧಿಕಾರಿಗಳನ್ನು ಕರೆತರುವ ಬಸ್ ಮಾತ್ರ. ಸಾವಿರಕ್ಕಿಂತಲೂ ಹೆಚ್ಚು ಜನರು ವಾಸಿಸುವ ಈ ಗ್ರಾಮಕ್ಕೆ ಸರ್ಕಾರಿ ಬಸ್ ಸೌಕರ್ಯ ಒದಗಿಸದಿರುವುದು ವಿಪರ್ಯಾಸ. ಕಾಂಗ್ರೆಸ್ ಸರ್ಕಾರದ ಶಕ್ತಿ ಯೋಜನೆಯನ್ನು ಇದುವರೆಗೆ ಈ ಗ್ರಾಮದ ಯಾವುದೇ ಮಹಿಳೆಯು ಅರೇಪುರದಿಂದ ಸಂಚರಿಸುವಾಗ ಪಡೆದಿಲ್ಲ. ದೂರದ ಊರಿಗೆ ಹಾಗೂ ಹತ್ತಿರದ ಬೇಗೂರು ಕಾಲೇಜಿಗೂ ಇವರು ಆಶ್ರಯಿಸಿ ರುವುದು ಕೇವಲ ಸ್ವಂತ ವಾಹನವನ್ನೇ. ಸ್ವಂತ ವಾಹನ ಇಲ್ಲದಿರುವವರಿಗೆ ಕಾಲ್ನಡಿಗೆಯೇ ಗತಿ. ಇದರಿಂದ ರೋಗಿಗಳು, ವೃದ್ಧರು ದಿನನಿತ್ಯ ವೇದನೆ ಪಡುವಂತಾಗಿದೆ.

ಈ ಗ್ರಾಮಕ್ಕೆ ಸರ್ಕಾರಿ ಬಸ್ ಸೌಲಭ್ಯ ಕಲ್ಪಿಸಬೇಕೆಂದು ಜನರು ಹಲವಾರು ಬಾರಿ ಶಾಸಕರಿಗೆ ಅರ್ಜಿಯನ್ನು ನೀಡಿದ್ದಾರೆ. ಆದರೆ ಯಾವುದೇ ಪ್ರತಿಫಲ ದೊರಕಿಲ್ಲ. ಇನ್ನಾದರೂ ಗುಂಡ್ಲುಪೇಟೆಯ ಸಾರಿಗೆ ಸಂಚಾರ ವ್ಯವಸ್ಥಾಪಕರು ಹಾಗೂ ಶಾಸಕರು ಗಮನಹರಿಸಿ ಅರೇಪುರ ಜನತೆಗೆ ಬಸ್ ಸೌಲಭ್ಯ ಕಲ್ಪಿಸಲು ಮುಂದಾಗಬೇಕು ಎಂಬುದು ಅರೇಪುರ ಗ್ರಾಮಸ್ಥರ ಆಶಯವಾಗಿದೆ.

” ನಾನು ಇತ್ತೀಚೆಗೆ ಇಲ್ಲಿಗೆ ಬಂದಿದ್ದು, ಗ್ರಾಮಕ್ಕೆ ಬಸ್ ಸೌಲಭ್ಯ ಕಲ್ಪಿಸುವ ಕುರಿತು ಯಾರೂ ಮನವಿ ನೀಡಿಲ್ಲ. ಗ್ರಾಮಸ್ಥರು, ವಿದ್ಯಾರ್ಥಿಗಳು ಮನವಿ ನೀಡಿದರೆ ನಮ್ಮ ಟಿಸಿಯನ್ನು ಕಳಿಸಿ ರೂಟ್ ಪರಿಶೀಲನೆ ಮಾಡಲಾಗುವುದು. ಬಳಿಕ ಅರೇಪುರಕ್ಕೆ ಬಸ್ ಸೌಲಭ್ಯ ಕಲ್ಪಿಸಲು ಕ್ರಮ ಜರುಗಿಸಲಾಗುವುದು.”

ಕುಮಾರ್ ನಾಯಕ್, ಘಟಕ ವ್ಯವಸ್ಥಾಪಕ

” ಕೆ.ಎಸ್.ಆರ್.ಟಿ.ಸಿ. ಬಸ್ ಸೌಲಭ್ಯವಿಲ್ಲದೆ ಬಹಳ ತೊಂದರೆ ಆಗುತ್ತಿದ್ದು, ಸ್ವಂತ ವಾಹನ ಇರುವವರು ಸುಲಭವಾಗಿ ಓಡಾಡುತ್ತಾರೆ. ವಾಹನ ಇಲ್ಲದ ನಾವು ಬಸ್‌ಗಾಗಿ ೨ ಕಿ.ಮೀ. ನಡೆದುಕೊಂಡು ಹೋಗುವ ಪರಿಸ್ಥಿತಿ ಇದೆ.”

ಬೆಳ್ಳಮ್ಮ, ವೃದ್ಧೆ, ಅರೇಪುರ ಗ್ರಾಮ

” ನಮ್ಮ ಊರಿನ ಜನರು ಅರೇಪುರದಿಂದ ಸರ್ಕಾರಿ ಬಸ್‌ನಲ್ಲಿ ಇದುವರೆಗೆ ಪ್ರಯಾಣ ಮಾಡಿಲ್ಲ. ಈ ಸಂಬಂಧ ಬಸ್‌ಗಾಗಿ ಹಲವು ಬಾರಿ ಶಾಸಕರ ಬಳಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಹೊರೆಯಾಲ, ರಂಗೂಪುರ ಮಾರ್ಗದ ಬಸ್ ಅರೇಪುರ ಮಾರ್ಗವಾಗಿ ಹೋಗಬಹುದು. ಅದು ಬರುತ್ತಿಲ್ಲ.”

ನಾಗೇಂದ್ರ, ವಕೀಲ, ಅರೇಪುರ

 

 

Tags:
error: Content is protected !!