Mysore
23
clear sky

Social Media

ಶುಕ್ರವಾರ, 20 ಮಾರ್ಚ್ 2026
Light
Dark

ಕ್ವಿಂಟಾಲ್ಗೆ ೧ ಸಾವಿರ ರೂ.ನಷ್ಟು ಇಳಿಕೆ; ಶೀಘ್ರದಲ್ಲಿ ಭತ್ತ ಖರೀದಿ ಕೇಂದ್ರ ತೆರೆಯಲು ಆಗ್ರ

ಭತ್ತಕ್ಕೆ ಸೂಕ್ತ ಬೆಲೆ ಇಲ್ಲದೇ ಅವಳಿ ತಾಲ್ಲೂಕುಗಳ ರೈತರಲ್ಲಿ ಆತಂಕ 

ಕೆ.ಆರ್.ನಗರ: ಭತ್ತದ ನಾಡು ಕೆ.ಆರ್.ನಗರ ಮತ್ತು ಸಾಲಿಗ್ರಾಮ ಅವಳಿ ತಾಲ್ಲೂಕುಗಳಲ್ಲಿ ಈ ಬಾರಿ ಭತ್ತದ ಇಳುವರಿ ಉತ್ತಮವಾಗಿ ಬಂದಿದೆ. ಆದರೆ, ಬೆಳೆಗೆ ತಕ್ಕ ಬೆಲೆಯಿಲ್ಲದೆ ರೈತರು ಆತಂಕದಲ್ಲಿದ್ದಾರೆ.

ರೈತರಿಗೆ ಒಂದಷ್ಟು ಆಸರೆಯಾಗುತ್ತಿದ್ದ ಭತ್ತದ ಖರೀದಿ ಕೇಂದ್ರಗಳು ಇದೀಗ ನೋಂದಣಿ ಆರಂಭಿಸಿದ್ದು, ರೈತರು ಬೆಳೆದ ಬೆಳೆ ಮಧ್ಯವರ್ತಿಗಳ ಪಾಲಾಗಲು ಸರ್ಕಾರವೇ ಆಸ್ಪದ ನೀಡಿದಂತಾಗಿದೆ.

ಮತ್ತೊಂದೆಡೆ ಭತ್ತದ ಉತ್ತಮ ಇಳುವರಿಯಿಂದ ಗ್ರಾಹಕರು ಅಕ್ಕಿಯ ಬೆಲೆ ತಗ್ಗುವ ನಿರೀಕ್ಷೆಯಲ್ಲಿದ್ದಾರೆ. ಈಗಾಗಲೇ ಅಕ್ಕಿ ದರದಲ್ಲಿ ಒಂದಷ್ಟು ಇಳಿಕೆ ಶುರುವಾಗಿದ್ದು ಮತ್ತಷ್ಟು ದರ ಕುಗ್ಗಬಹುದು ಎಂಬುದು ಗ್ರಾಹಕರ ಲೆಕ್ಕಾಚಾರ. ತಾಲ್ಲೂಕಿನಲ್ಲಿ ಕೃಷಿ ಚಟುವಟಿಕೆಗಳಲ್ಲಿ ಭಾಗಶಃ ಭತ್ತವನ್ನೇ ಆಶ್ರಯಿಸಿದ್ದಾರೆ. ಅವಳಿ ತಾಲ್ಲೂಕುಗಳಲ್ಲಿ ಅಂದಾಜು ೨೪ ಸಾವಿರ ಎಕರೆಯಷ್ಟು ಭತ್ತ ಬೆಳೆಯಲಾಗುತ್ತಿದೆ. ಸಕಾಲಕ್ಕೆ ಸುರಿದ ಮಳೆ ಹಾಗೂ ಕಾವೇರಿ ನದಿಯ ಚಾಮರಾಜ ಅಣೆಕಟ್ಟೆಯಿಂದ ನೀರಿನ ಹರಿವು ಭಾಗಶಃ ಈ ಬಾರಿ ಉತ್ತಮ ಬೆಳೆ ಬಂದಿದೆ.

ಕೆಲವೆಡೆ ಮಾತ್ರ ಇಳುವರಿಯಲ್ಲಿ ಹಿನ್ನಡೆ ಕಂಡಿದೆ. ಕಳೆದ ವರ್ಷ ಮಾರುಕಟ್ಟೆಯಲ್ಲಿದ್ದ ಭತ್ತದ ಬೆಲೆಗೆ ಹೋಲಿಸಿದರೆ ಈ ವರ್ಷ ಪ್ರತಿ ಕ್ವಿಂಟಾಲ್ ಗೆ ಬರೋಬ್ಬರಿ ೧ ಸಾವಿರ ರೂ.ನಷ್ಟು ಇಳಿಕೆ ಯಾಗಿದೆ. ದರ ಇಳಿಕೆಯಿಂದ ರೈತರಿಗೆ ಕೋಟ್ಯಂತರ ರೂ. ನಷ್ಟವಾಗಿದೆ. ಕ್ವಿಂಟಾಲ್‌ಗೆ ಕಳೆದ ವರ್ಷ ೨,೮೦೦ ರೂ.ಗಳಿಂದ ೩,೨೦೦ ರೂ.ವರೆಗೆ ಇತ್ತು. ಈ ಬಾರಿ ೨,೩೦೦ ರೂ. ತನಕ ಮಾತ್ರ ದೊರೆಯುತ್ತಿದೆ.

ಆವಳಿ ತಾಲ್ಲೂಕುಗಳಲ್ಲಿ ಭತ್ತವನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗಿದೆ. ದರ ಇಳಿಕೆಯಿಂದ ರೈತರು ಕುಗ್ಗಿ ಹೋಗಿದ್ದಾರೆ. ಖರೀದಿ ಕೇಂದ್ರ ತೆರೆಯುವಂತೆ ತಹಸಿಲ್ದಾರ್ ಮೂಲಕ ಜಿಲ್ಲಾಡಳಿತಕ್ಕೆ ರೈತ ಸಂಘಟನೆಗಳು ಮನವಿ ಮಾಡಿದ್ದರೂ ಯಾವುದೇ ಪ್ರಯೋಜನ ವಾಗಿಲ್ಲ. ಅನಿವಾರ್ಯವಾಗಿ ಮಧ್ಯವರ್ತಿಗಳಿಗೆ ಭತ್ತ ಮಾರಾಟ ಮಾಡುವ ಸ್ಥಿತಿ ಬಂದೊದಗಿದ್ದು ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ.

ತಾಲ್ಲೂಕಿನ ಕೆಲವು ಕಡೆಗಳಲ್ಲಿ ಭತ್ತ ಮಾರಾಟಕ್ಕೆ ಚೀಲಗಳಲ್ಲಿ ತುಂಬುವ ಕೆಲಸದಲ್ಲಿ ಕೃಷಿ ಕಾರ್ಮಿಕರು ನಿರತರಾಗಿರುವ ದೃಶ್ಯ ಕಂಡು ಬರುತ್ತಿದೆ. ಖರೀದಿ ಕೇಂದ್ರ ತೆರೆದಿಲ್ಲ: ಜಿಲ್ಲೆಯಲ್ಲಿ ಭತ್ತದ ಬೆಳೆಯನ್ನು ಶೇ.೬೦ರಷ್ಟು ಕೊಯ್ಲಾಗಿದೆ. ಖರೀದಿಗೆ ಮಧ್ಯವರ್ತಿಗಳು ಹಳ್ಳಿಗಳಲ್ಲಿರುವ ಭತ್ತದ ಗದ್ದೆಗಳಿಗೆ ಲಗ್ಗೆ ಇಡುತ್ತಿದ್ದಾರೆ. ಕೃಷಿ ವೆಚ್ಚಕ್ಕಾಗಿ ಕೈಸಾಲ ಮಾಡಿಕೊಳ್ಳುವ ರೈತರು, ಬೆಳೆ ಬರುತ್ತಿದ್ದಂತೆಯೇ ಮಾರಾಟಕ್ಕೆ ಮುಂದಾಗಿದ್ದಾರೆ. ಮಧ್ಯವರ್ತಿ ನಿಯಂತ್ರಣ ಮಾಡುವ ಯಾವ ಕಾಳಜಿಯನ್ನೂ ಜಿಲ್ಲಾಡಳಿತ ಈವರೆಗೆ ತೆಗೆದುಕೊಂಡಿಲ್ಲ. ಡಿ.೧ರಿಂದಲೇ ಖರೀದಿ ಕೇಂದ್ರ ಆರಂಭಿಸಬೇಕು ಎಂದು ರೈತ ಸಂಘಟನೆಗಳು ಅನೇಕ ಹೋರಾಟಗಳನ್ನು ನಡೆಸಿ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುವುದು ರೈತರ ಆರೋಪ.

” ಕೇಂದ್ರ ಸರ್ಕಾರ ೨,೩೨೦ ರೂ. ಬೆಂಬಲ ಬೆಲೆ ಘೋಷಿಸಿದೆ. ಪಕ್ಕದ ತೆಲಂಗಾಣ, ಕೇರಳ ರಾಜ್ಯಗಳಲ್ಲಿ ಭತ್ತಕ್ಕೆ ೫೦೦ ರೂ. ಸಹಾಯಧನ ಘೋಷಿಸಿದ್ದಾರೆ. ರಾಜ್ಯ ಸರ್ಕಾರವೂ ಭತ್ತಕ್ಕೆ ೫೦೦ ರೂ. ಸಹಾಯಧನ ನೀಡಲಿ, ಖರೀದಿ ಕೇಂದ್ರಗಳನ್ನು ತೆರೆಯುವುದರಿಂದ ಮಧ್ಯವರ್ತಿಗಳ ಹಾವಳಿ ತಪ್ಪಲಿದೆ.”

-ಜೆ.ಎಂ.ಕುಮಾರ್, ಗೌರವಾಧ್ಯಕ್ಷರು, ಕರ್ನಾಟಕ ರಾಜ್ಯ ರೈತ ಪರ್ವ ಸಂಘ.

” ರಾಜ್ಯ ಸರ್ಕಾರದ ಆದೇಶದಂತೆಯೇ ಜ.೧ರಿಂದ ಖರೀದಿ ಕೇಂದ್ರ ಆರಂಭಿಸಲಾಗುತ್ತಿದೆ. ಬೇಗ ಖರೀದಿ ಕೇಂದ್ರ ತೆರೆಯಬೇಕು ಎಂಬ ರೈತ ಮುಖಂಡರ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಮತ್ತು ಕೃಷಿ ಇಲಾಖೆ ಹಾಗೂ ಆಹಾರ ಇಲಾಖೆಗೆ ಕಳಿಸಿದ್ದೇವೆ. ಅಲ್ಲಿಂದ ಆದೇಶ ಬರುಬೇಕು.”

-ಜೆ.ಸುರೇಂದ್ರಮೂರ್ತಿ, ತಹಸಿಲ್ದಾರ್, ಕೆ.ಆರ್.ನಗರ ತಾ.

Tags:
error: Content is protected !!