Mysore
25
overcast clouds
Light
Dark

ಪತ್ರಿಕೋದ್ಯಮ ವೃತ್ತಿಯಾಗಿರದೆ ಬದುಕಾಗಿಸಿಕೊಂಡಿದ್ದ ಕೋಟಿ : ಬಿಎಸ್‌ವೈ

ಮೈಸೂರು: ಪತ್ರಿಕೋದ್ಯಮ ರಾಜಶೇಖರ ಕೋಟಿ ಅವರಿಗೆ ವೃತ್ತಿಯಾಗಿರಲಿಲ್ಲ. ಅದು ಅವರಿಗೆ ಬದುಕಾಗಿತ್ತು. ಸಮಾಜದಲ್ಲಿ ನಡೆಯುವ ಅನ್ಯಾಯಗಳ ವಿರುದ್ಧ ಗಟ್ಟಿಯಾದ ಧ್ವನಿ ಎತ್ತುವ ಜತೆಗೆ ಹೋರಾಟಗಳ ಬೆನ್ನಿಗೆ ನಿಂತಿದ್ದ ಕೋಟಿ ಅವರು ಸಮಾಜಕ್ಕೆ ಮಾದರಿಯಾದವರು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಣ್ಣಿಸಿದ್ದಾರೆ.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಘಟಿಕೋತ್ಸವ ಭವನದಲ್ಲಿ ಬುಧವಾರ ಆಯೋಜಿಸಿದ್ದ ‘ಆಂದೋಲನ ೫೦ ಸಾರ್ಥಕ ಪಯಣ’ ಕಾರ್ಯಕ್ರಮಕ್ಕೆ ವಿಡಿಯೋ ಸಂದೇಶ ಕಳುಹಿಸಿ, ಶುಭನುಡಿಗಳನ್ನಾಡಿದರು.

ಒಂದು ಪ್ರಾದೇಶಿಕ ಪತ್ರಿಕೆಯಾಗಿ ‘ಆಂದೋ ಲನ’ಕ್ಕೆ ೫೦ ವರ್ಷಗಳು ತುಂಬಿರುವುದು ಬಹಳ ಸಂತೋಷದ ಸಂಗತಿಯಾಗಿದೆ. ಈ ಮಹತ್ವಪೂರ್ಣವಾದ ೫೦ನೇ ವರ್ಷದ ಸಾರ್ಥಕ ಸಂಭ್ರಮದ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗುವ ಮನಸ್ಸು ಇತ್ತು. ಆದರೆ, ಕಾರಣಾಂತರಗಳಿಂದ ಬರಲು ಸಾಧ್ಯವಾಗಿಲ್ಲ. ಮೈಸೂರಿನ ‘ಆಂದೋಲನ’ ದಿನಪತ್ರಿಕೆಗೆ ತನ್ನದೇ ಆದ ಹೆಸರು, ಪರಂಪರೆ ಇದೆ. ರಾಜಶೇಖರ ಕೋಟಿ ಅವರಿಗೆ ಪತ್ರಿಕೋದ್ಯಮ ಕೇವಲ ವೃತ್ತಿಯಾಗಿರಲಿಲ್ಲ. ಅವರಿಗೆ ಅದು ಬದುಕಾಗಿತ್ತು. ‘ಆಂದೋಲನ’ದ ರೂವಾರಿ ರಾಜಶೇಖರ ಕೋಟಿ ಅವರು ದೂರದ ಹಾವೇರಿ ಜಿಲ್ಲೆಯಿಂದ ಮೈಸೂರಿಗೆ ಬಂದು ಸಮಾಜದ ಹೋರಾಟಗಳನ್ನು ಬದುಕಿನ ಹೋರಾಟವಾಗಿಸಿಕೊಂಡು ಶೋಷಣೆ, ಅನ್ಯಾಯದ ವಿರುದ್ಧ ‘ಆಂದೋಲನ’ವನ್ನು ಕಟ್ಟಿ ಬೆಳೆಸಿದವರು. ಮೈಸೂರು, ಮಂಡ್ಯ, ಚಾಮರಾಜ ನಗರ, ಕೊಡಗು, ಹಾಸನ ಜಿಲ್ಲೆಗಳಲ್ಲಿ ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಪರಂಪರೆ ಬೆಳೆಸುವಲ್ಲಿ ‘ಆಂದೋಲನ’ ಪತ್ರಿಕೆಯ ಪಾತ್ರ ಬಹಳ ದೊಡ್ಡದು ಇದೆ. ಕಳೆದ ೫೦ ವರ್ಷಗಳಲ್ಲಿ ೫೦೦ಕ್ಕೂ ಹೆಚ್ಚು ಪತ್ರಕರ್ತರನ್ನು ರೂಪಿಸಿರುವ ‘ಆಂದೋಲನ’ ಇನ್ನಷ್ಟು ಸಂಭ್ರಮದಿಂದ ಶತಮಾನೋತ್ಸವ ಆಚರಿಸಲೆಂದು ಹಾರೈಸುತ್ತೇನೆ.

ರಾಜಶೇಖರ ಕೋಟಿ ಅವರು ಪತ್ರಿಕೋದ್ಯಮವನ್ನು ಅಪಾರವಾಗಿ ಪ್ರೀತಿಸಿದವರು. ನೇರ, ನಿಷ್ಠುರ ಹಾಗೂ ವಾಸ್ತವತೆಯನ್ನು ಜನರ ಮುಂದಿಡಲು ಯಾವುದೇ ಕಾರಣಕ್ಕೂ ರಾಜಿಯಾದವರಲ್ಲ. ಜನರಿಗೆ ನ್ಯಾಯ ಕೊಡಿಸುವ ವಿಚಾರದಲ್ಲಿ ಅವರ ಬರವಣಿಗೆ ಅಷ್ಟೇ ಮೊನಚಾಗಿತ್ತು. ಈಗ ಅವರು ಹುಟ್ಟು ಹಾಕಿದ  ಪತ್ರಿಕೆಗೆ ೫೦ ವರ್ಷಗಳು ಕಳೆದಿರುವುದು ಸಂತಸವಾಗಿದೆ. ಮುಂದಿನ ದಿನಗಳಲ್ಲಿ ಅವರು ಹಾಕಿಕೊಟ್ಟ ಮಾರ್ಗದರ್ಶನ ದಲ್ಲಿ ಮಕ್ಕಳಾದ ರವಿ ಕೋಟಿ, ರಶ್ಮಿ ಕೋಟಿ ಅವರು ಪತ್ರಿಕೆಯನ್ನು ಮುನ್ನಡೆಸಿಕೊಂಡು ಸಾಗುವ ವಿಶ್ವಾಸ, ನಂಬಿಕೆ ಇದೆ ಎಂದು ತಿಳಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕಾಗಿತ್ತಾದರೂ ಸಾಧ್ಯವಾಗಲಿಲ್ಲ. ಜನಮುಖಿಯಾಗಿರುವ ಪತ್ರಿಕೆ ಮುಂದೆ ನೂರು ವರ್ಷಗಳನ್ನು ದಾಟಲೆಂದು ಹಾರೈಸುತ್ತೇನೆ. ಕಾರ್ಯಕ್ರಮದಲ್ಲಿ ಭಾಗಿಯಾದ ಪತ್ರಿಕೆಯ ಓದುಗರು, ಹಿತೈಷಿಗಳು, ತಮ್ಮೆಲ್ಲರಿಗೂ ಶುಭ ಕೋರುವ ಜತೆಗೆ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ.

ಲಂಡನ್‌ನಿಂದಲೇ ಶುಭಾಶಯ: ಕುಟುಂಬ ಸಮೇತ ಲಂಡನ್ ಪ್ರವಾಸ ಕೈಗೊಂಡಿರುವ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ‘ಆಂದೋಲನ’ ಸಂಭ್ರಮಕ್ಕೆ ಶುಭಾಶಯ ಹೇಳಿದರು.

ಬಿ.ಎಸ್.ಯಡಿಯೂರಪ್ಪ ಅವರು ಪತ್ರಿಕೆ ನಡೆದುಬಂದ ದಾರಿ, ರಾಜಶೇಖರ ಕೋಟಿ ಅವರ ಹೋರಾಟ, ಪತ್ರಿಕೆಯೊಂದಿಗಿನ ನಂಟು, ಬದ್ಧತೆ, ಸಾಮಾಜಿಕ ಹೋರಾಟಗಳ ಬಗ್ಗೆ ಮಾತನಾಡುವ ಮೂಲಕ ಕೆಲವು ವಿಚಾರಗಳನ್ನು ಸ್ಮರಿಸಿಕೊಂಡರು. ಮೈಸೂರು ಪ್ರವಾಸ ಇದ್ದಾಗಲೆಲ್ಲಾ ‘ಆಂದೋಲನ’ ಪತ್ರಿಕೆಯನ್ನು ತಿರುವಿ ಹಾಕುತ್ತಿದ್ದೆ. ಗ್ರಾಮೀಣ ಜನರ ಆಶೋತ್ತರಗಳಿಗೆ ಸ್ಪಂದಿಸುವಂತಹ ಕೆಲಸ ಮಾಡಿದ ರಾಜಶೇಖರ ಕೋಟಿಅವರು ನಮ್ಮ ನಡುವೆ ಇಲ್ಲದಿದ್ದರೂ ಅವರ ಆದರ್ಶದಂತೆ ಪತ್ರಿಕೆ ಮುನ್ನಡೆಯುತ್ತಿರುವುದು ಶ್ಲಾಘನೀಯವಾಗಿದೆ ಎಂದು ವರ್ಣಿಸಿದರು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ