Mysore
23
overcast clouds
Light
Dark

ಪಾಠವೇ ಆಗಿದ್ದ ಕೋಟಿಯವರ ಒಡನಾಟ : ಶ್ರೀಧರ ಆರ್.ಭಟ್ಟ

-ಶ್ರೀಧರ ಆರ್.ಭಟ್ಟ

‘ಆಂದೋಲನ’ ದಿನಪತಿಕ್ರೆೊಂಂದಿಗೆ ಅದರಲ್ಲಿಯೂ ಸಂಸ್ಥಾಪಕ ಸಂಪಾದಕರಾದ ರಾಜಶೇಖರ ಕೋಟಿ ಅವರೊಂದಿಗೆ ಅತ್ಯಂತ ಆತ್ಮೀಯ ವರದಿಗಾರರಾಗಿ, ಕುಟುಂಬದ ಸದಸ್ಯರಂತೆ ಜೊತೆಯಾಗಿ ಅಂದಾಜು ೪೦ ವರ್ಷಗಳಿಂದಲೂ ಸಾಗಿ ಬಂದವರು ನಂಜನಗೂಡಿನ ಶ್ರೀಧರ್ ಆರ್. ಭಟ್ಟ ಅವರು. ಕೋಟಿ ಅವರೊಂದಿಗೆ ನಿಕಟ ಒಡನಾಟ ಹೊಂದಿದ್ದ ಅವರ ನೆನಪಿನ ಬುತ್ತಿಯಿಂದ ಬಿಚ್ಚಿಟ್ಟ ಕೆಲವು ಪ್ರಸಂಗಗಳು ಇಲ್ಲಿವೆ.

ದಿಢೀರ್ ಅಂತಾ ಬಂದ್ರೆ ನೀರೂ ಸಿಗದು..!

ಮೇಲಿನ ಮಾತನ್ನು ರಾಜಶೇಖರ ಕೋಟಿ ಅವರು ಮತ್ತು ನನಗೆ ನೇರವಾಗಿ ಹೇಳಿದವರು ಎಚ್.ಡಿ.ಕೋಟೆ ತಾಲ್ಲೂಕು ಕಾಕನಕೋಟೆಯ ಐಬಿ (ಇನ್‌ಸ್ಪೆಕ್ಷನ್ ಬಂಗಲೆ)ಯ ಮೇಟಿ!

೧೯೮೭ರಲ್ಲಿ ಎಚ್.ಡಿ.ಕೋಟೆಗೆ ಕೋಟಿ ಅವರು ಮತ್ತು ನಾನು ಕಾರಿನಲ್ಲಿ ಪತ್ರಿಕೆಯ ಚಂದಾ ವಸೂಲಿಗೆ ಹೋಗಿದ್ದೆವು. ಕೋಟೆಯಿಂದ ಹ್ಯಾಂಡ್‌ಪೋಸ್ಟ್‌ಗೆ ತಲುಪಿದವರು, ಊಟಕ್ಕಾಗಿ ಕಾಕನಕೋಟೆಯ ಐಬಿ ಗೆ ತೆರಳಿದೆವು. ಅಲ್ಲಿಯ ಮೇಟಿ ‘‘ನೀವು ರೂಂ ಕಾದಿರಿಸದೇ ಬಂದಿರುವುದರಿಂದ, ಇಲ್ಲಿ ನಿಮಗೆ ಊಟದ ಮಾತಿರಲಿ, ಕುಡಿಯಲು ನೀರೂ ಸಿಗಲಾರದು’’ ಎಂದು ಒಂದೇ ಉಸಿರಿನಲ್ಲಿ ಹೇಳಿ ದಢಾರನೆ ಬಾಗಿಲು ಹಾಕಿಕೊಂಡಿದ್ದರು.

ವ್ಯಾಘ್ರ ದರ್ಶನ

ಕೋಟೆ ಐಬಿಯಿಂದ ಸಮೀಪದ ಕೇರಳದ ಮಾನಂದವಾಡಿಗೆ ಹೋಗಿ ಊಟ ಮಾಡಿದಾಗ ಸಂಜೆಯಾಗಿತ್ತು. ವಾಪಸ್ ಬರುವಾಗ ಮಬ್ಬು ಕತ್ತಲಾವರಿಸಿತ್ತು. ರಸ್ತೆ ಮಧ್ಯೆ ಹುಲಿ ಮಲಗಿತ್ತು! ಅದನ್ನು ನೋಡಿ ಕೋಟಿಯವರು ಕಾರು ನಿಲ್ಲಿಸಿದರು. ನನಗೆ ಒಳಗೊಳಗೇ ನಡುಕ ಶುರುವಾಗಿತ್ತು. ಆ ಸಂದರ್ಭದಲ್ಲಿ ಆಪದ್ಬಾಂಧವನಂತೆ ಲಾರಿೊಂಂದು ಅದೇ ರಸ್ತೆಯಲ್ಲಿ ಆಗಮಿಸಿತು. ಅದನ್ನು ಕಂಡು ಬೆದರಿದ ವಾಘ್ರ ರಸ್ತೆಯಿಂದ ನಿರ್ಗಮಿಸಿತು. ನಂತರ ನಮ್ಮ ಪ್ರಯಾಣ ಮುಂದುವರಿಯಿತು.

‘ಇವರೇನಾ ಆಂದೋಲನ ಸಂಪಾದಕರು?’

ಈ ಮಾತನ್ನು ರಾಜಶೇಖರ ಕೋಟಿ ಅವರ ಎದುರೇ ಮಂಡ್ಯದ ಸ್ಥಳೀಯ ಪತ್ರಿಕೆಯ ಸಂಪಾದಕರು ಪ್ರಶ್ನಿಸಿದ್ದರು. ಕೋಟಿ ಅವರು ಮತ್ತು ನಾನು ಖುದ್ದಾಗಿ ಮಂಡ್ಯದ ಬೀದಿಗಳಲ್ಲಿ ಪತ್ರಿಕೆ ಹಂಚುತ್ತಿದ್ದೆವು. ಅಲ್ಲಿಗೆ ಬಂದ ಸ್ಥಳೀಯ ಪತ್ರಿಕೆೊಂಂದರ ಸಂಪಾದಕ ಶ್ರೀಪಾದ ಅವರು, ನನ್ನನ್ನು ಕುರಿತು, ‘‘ನಿಮ್ಮ ಸಂಪಾದಕರನ್ನು ನೋಡಿಯೇ ಇಲ್ಲ. ಅವರು ಯಾವಾಗ ಬರುತ್ತಾರೆ? ಅವರನ್ನು ನೋಡಬೇಕು’’ ಎಂದರು.

ಅದೇ ಬೀದಿಯಲ್ಲಿ ಅಂಗಡಿಗಳಿಗೆ ಪತ್ರಿಕೆ ಹಾಕುತ್ತಿದ್ದ ಕೋಟಿಯವರನ್ನು ತೋರಿಸಿದ ನಾನು, ‘‘ಅವರೇ ನಮ್ಮ ಸಂಪಾದಕರು’’ ಎಂದೆ. ಆಶ್ಚರ್ಯಚಿಕಿತರಾದ ಶ್ರೀಪಾದ, ‘‘ಇವರಾ ಸಂಪಾದಕರು..? ಪತ್ರಿಕೆ ಹಂಚುವವರನ್ನು ತೋರಿಸಿ ಸುಳ್ಳು ಹೇಳಬೇಡಿ. ನಾನು ಹಾಗೇಲ್ಲ ಬೇಸ್ತು ಬೀಳಲಾರೆ’’ ಎಂದಿದ್ದರು.

ಅನ್ನಕ್ಕಾಗಿ ರಾತ್ರಿಯೆಲ್ಲ ಹುಡುಕಾಟ

ಕೋಟಿ ಅವರ ಜೊತೆ ಒಮ್ಮೆ ಕ್ಯಾಲಿಕಟ್‌ಗೆ ಹೋಗಿದ್ದೆ. ಮಧ್ಯಾಹ್ನ ಅಲ್ಲಿನ ಕುಸುಬಲಕ್ಕಿ ಅನ್ನ ತಿಂದಿದ್ದೆವು. ಆದರೆ, ರಾತ್ರಿಯೂ ಅದನ್ನೇ ಊಟ ಮಾಡಲು ಮನಸ್ಸು ಒಪ್ಪಲಿಲ್ಲ. ಹಾಗಾಗಿ ಬಿಳಿ ಅನ್ನಕ್ಕಾಗಿ ರಾತ್ರಿೆುಂಲ್ಲ ಹುಡುಕಾಡಿದರೂ ಸಿಗಲಿಲ್ಲ. ಕೊನೆಗೆ ಊಟವಿಲ್ಲದೆ ಮಲಗುವಂತಾಗಿತ್ತು.

ಐಬಿಯಲ್ಲಿ ತಿಗಣೆ ಕಾಟ; ರಸ್ತೆಯಲ್ಲಿ ಆನೆ ಆಟ

ಪತ್ರಿಕೆಯ ಮಡಿಕೇರಿ ಆವೃತ್ತಿಯ ಆರಂಭದ ದಿನಗಳಲ್ಲಿ ಕೋಟಿಯವರು, ನಾನು ಕಾರ್ಯನಿಮಿತ್ತ ಸೋಮವಾರ ಪೇಟೆ, ಶನಿವಾರ ಸಂತೆಯತ್ತ ಹೋಗಿದ್ದೆವು. ರಾತ್ರಿಯಾಗಿದ್ದರಿಂದ ಸೋಮವಾರ ಪೇಟೆ ಐಬಿಯ ರೂಂನಲ್ಲಿ ವಾಸ್ತವ್ಯ ಮಾಡಿದೆವು. ಮಲಗಿ ಅರ್ಧಗಂಟೆಯಾಗಿಲ್ಲ .ಮೈತುಂಬಾ ಹುಳುಗಳ ಹರಿದಾಟ ಶುರುವಾಗಿತ್ತು. ಏನೆಂದು ಎದ್ದು ನೋಡಿದರೆ, ಎಲ್ಲೆಡೆ ತಿಗಣೆಗಳು, ತಕ್ಷಣ ನಾವು ಬಟ್ಟೆಯನ್ನೆಲ್ಲ ಕೊಡವಿ ಎದ್ದು ಕಾರಿನಲ್ಲಿ ಮಡಿಕೇರಿಯತ್ತ ಧಾವಿಸಿದೆವು. ಸ್ವಲ್ಪ ದೂರ ಹೋಗುತ್ತಿದ್ದಂತೆ ಆನೆಗಳ ಹಿಂಡು ದರ್ಶನವಾಯಿತು. ಹಿಂದಕ್ಕೂ ಹೋಗಲಾಗದೆ, ಮುಂದಕ್ಕೂ ಸಾಗಲಾರದೆ, ಬೆಳಗಾಗುವವರೆಗೂ ಕಾರಿನಲ್ಲೇ ಕಳೆದೆವು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ