ಕರ್ನಾಟಕ ವಿದ್ಯುತ್ ಮಂಡಳಿಯು ರಾಜದ್ಯಂತ ಗೃಹ ಜ್ಯೋತಿ ಅರ್ಹ ಫಲಾನುಭವಿಗಳನ್ನು ಗುರುತಿಸಲು ಮನೆ ಬಾಗಿಲಿಗೆ ಬಂದು ಸಮೀಕ್ಷೆ ಕಾರ್ಯ ಮಾಡುತ್ತಿದೆ. ಈ ಸಮೀಕ್ಷೆ ಕಾರ್ಯದ ಫಾರಂನಲ್ಲಿ ಕೆಲವು ಬೇಡದ ಅಂಶಗಳು ಸೇರಿವೆ.
ನೀವು ಯಾವ ಜತಿಗೆ ಸೇರಿದವರು? ನೀವು ಆದಾಯ ತೆರಿಗೆ ಪಾವತಿದಾರರೇ ? ನಿಮ್ಮ ವೃತ್ತಿ ಯಾವುದು? ಇಂತಹ ಪ್ರಶ್ನೆಗಳಿದ್ದು, ಫಾರಂನಲ್ಲಿ ಕಡ್ಡಾಯವಾಗಿ ಬರೆಯಲೇಬೇಕು ಎಂದು ಸಮೀಕ್ಷೆದಾರರು ಹೇಳುತ್ತಾರೆ.
ಗೃಹ ಜ್ಯೋತಿಗೂ, ಜಾತಿಗೂ ಏನು ಸಂಬಂಧ? ಎಲ್ಲಕ್ಕಿಂತ ಮುಖ್ಯವಾಗಿ ಈ ಫಾರಂ ನಲ್ಲಿ, ನಾನು ಗೃಹ ಜ್ಯೋತಿಗೆ ಸಂಬಂಽಸಿದ ಸಮೀಕ್ಷೆ ಕಾರ್ಯದಲ್ಲಿ ಭಾಗವಹಿಸಲು ಇಚ್ಛಿಸುವುದಿಲ್ಲ, ನನ್ನ ಮನೆಗೆ ನೀಡಿ ರುವ ವಿದ್ಯುತ್ ಸಂಪರ್ಕದ ಗೃಹ ಜ್ಯೋತಿ ಯೋಜನೆಯ ಲಾಭವನ್ನು ಸ್ಥಗಿತ ಗೊಳಿಸಲು ನನ್ನ ಅಭ್ಯಂತರವಿಲ್ಲ ಎಂದು ಪ್ರಿಂಟ್ ಆಗಿದೆ. ಇದರ ಕೆಳಗಡೆ ಸಹಿ ಹಾಕಲು ಸಮೀಕ್ಷೆ ಮಾಡಲು ಬಂದಿರುವವರು ಹೇಳುತ್ತಾರೆ. ಇದು ಸಾರ್ವಜನಿಕರ ಗೊಂದಲಕ್ಕೆ ಕಾರಣವಾಗಿದೆ.
ಕೆಲವರು ಹೇಳುವಂತೆ ಮುಂದಿನ ದಿನಗಳಲ್ಲಿ ಆದಾಯ ತೆರಿಗೆ ಪಾವತಿದಾರರು ಮತ್ತು ಸರ್ಕಾರಿ ನೌಕರರನ್ನು ಗೃಹ ಲಕ್ಷ್ಮಿ ಯೋಜನೆಯಿಂದ ಹೊರಗಿಡುವ ಹುನ್ನಾರ ಇರಬಹುದು ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಸರ್ಕಾರ ಸ್ಪಷ್ಟೀಕರಣ ನೀಡಬೇಕು.
– ಬೂಕನಕೆರೆ ವಿಜೇಂದ್ರ, ಮೈಸೂರು




