Mysore
27
overcast clouds

Social Media

ಭಾನುವಾರ, 13 ಸೆಪ್ಟೆಂಬರ್ 2026
Light
Dark

ಗೌರಿ-ಗಣೇಶ ಹಬ್ಬಕ್ಕೆ ಸಕಲ ಸಿದ್ಧತೆ

ಅರಮನೆ ನಗರಿಯ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರು
ಸೇವಂತಿಗೆ ಹೂವು, ಏಲಕ್ಕಿ ಬಾಳೆಹಣ್ಣು ಸೇರಿ ಇನ್ನಿತರೆ ಹಣ್ಣುಗಳ ಬೆಲೆ ಹೆಚ್ಚಳ

ಮೈಸೂರು: ಗೌರಿ-ಗಣೇಶ ಹಬ್ಬಕ್ಕೆ ಇನ್ನೊಂದೇ ದಿನ ಬಾಕಿ ಉಳಿದಿದ್ದು, ಹೂವು-ಹಣ್ಣು ಸೇರಿದಂತೆ ಅಗತ್ಯ ವಸ್ತುಗಳ ಬೆಲೆಯೇರಿಕೆಯ ನಡುವೆಯೂ ನಗರದ ಜನತೆ ಹಬ್ಬ ಆಚರಿಸಲು ಭರ್ಜರಿ ಸಿದ್ಧತೆಯಲ್ಲಿ ತೊಡಗಿದ್ದಾರೆ.

ಗೌರಿ-ಗಣೇಶ ಮೂರ್ತಿಗಳ ಮಾರಾಟ ಕಳೆದ ೧೫ ದಿನಗಳಿಂದಲೇ ನಡೆದಿದ್ದರೆ, ಹಬ್ಬದ ಆಚರ`ಣೆಗೆ ಸೀರೆ, ಹೊಸ ಬಟ್ಟೆಗಳ ಖರೀದಿಯ ಭರಾಟೆಯೂ ಜೋರಾಗಿದೆ.

ದೇವರಾಜ ಮಾರುಕಟ್ಟೆ ಸೇರಿದಂತೆ ನಗರದ ಇನ್ನಿತರೆ ಮಾರುಕಟ್ಟೆ, ಪ್ರಮುಖ ವೃತ್ತಗಳಲ್ಲಿ ಶನಿವಾರ ಮಾವಿನ ಸೊಪ್ಪು, ಬಾಳೆ ಕಂದು, ಹೂವು, ಹಣ್ಣು , ಪೂಜಾ ಸಾಮಗ್ರಿಗಳ ಖರೀದಿ ಭರಾಟೆ ಜೋರಾಗಿ ನಡೆಯಿತು. ಗೌರಿ-ಗಣೇಶನನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲು ಬೇಕಾದ ಹೂವು, ಹಣ್ಣು, ತರಕಾರಿ, ಪೂಜಾ ಸಾಮಗ್ರಿ, ಖರೀದಿಸುವಲ್ಲಿ ಮಹಿಳೆಯರು ನಿರತರಾಗಿದ್ದರು.

ಹೀಗಾಗಿ ಶನಿವಾರ ಬೆಳಗ್ಗಿನಿಂದಲೇ ಮಾರುಕಟ್ಟೆಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜನದಟ್ಟಣೆ ಕಂಡುಬಂತು. ದೇವರಾಜ ಮಾರುಕಟ್ಟೆ, ಮಂಡಿ ಮಾರುಕಟ್ಟೆ, ವಾಣಿವಿಲಾಸ ಮಾರುಕಟ್ಟೆ, ನಂಜುಮಳಿಗೆ, ಧನ್ವಂತ್ರಿ ರಸ್ತೆ ಸೇರಿದಂತೆ ನಗರದ ಪ್ರಮುಖ ವೃತ್ತಗಳಲ್ಲಿ ಹಬ್ಬದ ಖರೀದಿ ಭರಾಟೆ ಜೋರಾಗಿ ನಡೆಯಿತು.

ಯುವಕರು ವಿವಿಧ ಅಳತೆಯ ಗೌರಿ-ಗಣೇಶನ ಮೂರ್ತಿಗಳನ್ನು ಖರೀದಿಸಿದರೆ, ಗಾಂಧಿವೃತ್ತ, ಸಯ್ಯಾಜಿರಾವ್ ರಸ್ತೆ, ಡಿ. ದೇವರಾಜ ಅರಸು ರಸ್ತೆ, ಮೃಗಾಲಯ ರಸ್ತೆ, ಉಮಾ ಚಿತ್ರಮಂದಿರ ರಸ್ತೆ ಮೊದಲಾದ ಕಡೆಗಳಲ್ಲಿ ಮಹಿಳೆಯರು ಸೀರೆ, ಬಟ್ಟೆ ಖರೀದಿಸಿದರು.

ಮಹಿಳೆಯರು, ಹೆಣ್ಣು ಮಕ್ಕಳು ಕನಿಷ್ಠ ೫೦೦ ರೂ. ನಿಂದ ೧೦ ಸಾವಿರ ರೂ. ವರೆಗೆ ತಮ್ಮ ಶಕ್ತ್ಯಾನುಸಾರ ಹಣ ಕೊಟ್ಟು ತಮಗಿಷ್ಟವಾದ ಉಡುಪು ಖರೀದಿಸಿ ಖುಷಿಯಲ್ಲೇ ಮನೆಗೆ ಹೋಗುತ್ತಿದ್ದುದು ಕಂಡುಬಂತು.

 

Tags:
error: Content is protected !!