ತಮಿಳುನಾಡಿಗೆ ಮುಂದಿನ ಹದಿನೈದು ದಿನಗಳ ಕಾಲ ನಿತ್ಯ ಒಂಬತ್ತು ಸಾವಿರ ಕ್ಯುಸೆಕ್ಸ್ ಕಾವೇರಿ ನದಿ ನೀರು ಹರಿಸಬೇಕಾಗಿರುವುದು ಅಘಾತಕಾರಿ ಸಂಗತಿಯಾಗಿದೆ. ಕರ್ನಾಟಕ ಮತ್ತು ತಮಿಳುನಾಡು ನಡುವಿನ ಕಾವೇರಿ ನೀರು ವಿವಾದಕ್ಕೆ ನ್ಯಾಯಾಲಯದ ಹೋರಾಟದ ಬದಲು ಉಭಯ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ತಜ್ಞರು ಮುಖಾಮುಖಿಯಾಗಿ ಸೌಹಾರ್ದಯುತ ಮಾತುಕತೆ ನಡೆಸುವುದು ಅತ್ಯಂತ ಅವಶ್ಯವಾಗಿದೆ. ಕುಡಿಯುವ ನೀರು ಹಾಗೂ ಕಾವೇರಿ ನೀರಿನ ದೀರ್ಘಕಾಲಿಕ ನಿರ್ವಹಣೆಗೆ ಮೇಕೆದಾಟುವಿನಂತಹ ಹೊಸ ಯೋಜನೆಯ ರೂಪುರೇಷೆಗಳನ್ನು, ಅದರಿಂದಾಗುವ ಅನುಕೂಲಗಳ ಬಗ್ಗೆ ಉಭಯ ರಾಜ್ಯಗಳ ಜನರಿಗೆ ಮನವರಿಕೆ ಮಾಡಿಸಿ ಮೇಕೆದಾಟು ಯೋಜನೆಗೆ ಶೀಘ್ರ ಚಾಲನೆ ನೀಡಬೇಕಿದೆ.
ನದಿಗಳು ಎಂದಿಗೂ ಭಾಷೆ ಅಥವಾ ರಾಜಕೀಯ ಗಡಿಗಳನ್ನು ಮೀರಿ ಮಾನವೀಯತೆಯನ್ನು ಬೆಸೆಯಬೇಕಿದೆ. ಈ ನಿಟ್ಟಿನಲ್ಲಿ ಉಭಯ ರಾಜ್ಯಗಳ ರಾಜಕೀಯ ನಾಯಕರು ಹಾಗೂ ನೀರಾವರಿ ತಜ್ಞರು ಸೌಹಾರ್ದಯುತವಾಗಿ ಸಭೆ ಸೇರಿ, ಸಮಾಲೋಚಿಸಿ ಯಾವುದೇ ಸಂಘರ್ಷಕ್ಕೆ ಎಡೆ ಮಾಡಿಕೊಡದೆ ಕಾವೇರಿ ನೀರಿನ ಸಮಸ್ಯೆಗೆ ಮಾತುಕತೆಯ ಮೂಲಕವೇ ಸೂಕ್ತ ಪರಿಹಾರವನ್ನು ಕಂಡುಕೊಳ್ಳುವುದು ಅವಶ್ಯವಾಗಿದೆ.
– ಹರಳಹಳ್ಳಿ ಪುಟ್ಟರಾಜು, ಪಾಂಡವಪುರ


