ನಂಜನಗೂಡು : ಜಮೀನಿನ ಪೋಡಿ ಹಾಗೂ ದುರಸ್ತಿಪಡಿಸಲು ಲಂಚ ಪಡೆಯುತ್ತಿದ್ದ ಸರ್ವೆಯರ್ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ವರದಿಯಾಗಿದೆ.
ತಾಲ್ಲೂಕಿನ ಚಿಕ್ಕಯ್ಯನಛತ್ರ ಹೋಬಳಿ ಕೇಂದ್ರದ ಜಯಪ್ರಕಾಶ್ ಎಂಬ ಸರ್ವೆಯರ್ ರೆಡ್ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ.
ಕಡಕೊಳದ ನಾರಾಯಣ ಎಂಬವರಿಗೆ ಸೇರಿದ ೯ ಗುಂಟೆ ಜಮೀನು ಪೋಡಿ, ದುರಸ್ತಿ ಮಾಡಲು ೨ ಲಕ್ಷ ರೂ.ಗೆ ಡೀಲ್ ಆಗಿತ್ತು. ಮುಂಗಡವಾಗಿ ನಾರಾಯಣ ೮೦ ಸಾವಿರ ರೂ. ನೀಡಿದ್ದರು. ಉಳಿದ ೧.೨೦ ಲಕ್ಷ ರೂ. ಹಣಕ್ಕೆ ಜಯಪ್ರಕಾಶ್ ಡಿಮ್ಯಾಂಡ್ ಮಾಡಿದ್ದರು. ಅಧಿಕಾರಿಯ ವರ್ತನೆಗೆ ಬೇಸತ್ತಿದ್ದ ನಾರಾಯಣ್ ಲೋಕಾಯುಕ್ತ ಪೊಲೀಸರ ಮೊರೆ ಹೋದರು ಎನ್ನಲಾಗಿದೆ.
ಹಣ ನೀಡಲು ಮೈಸೂರಿನ ಮೈಲಾರಿ ಹೋಟೆಲ್ಅನ್ನು ಅಯ್ಕೆ ಮಾಡಿಕೊಂಡ ನಾರಾಯಣ, ಅಲ್ಲಿ ಹಣ ನೀಡುವ ವೇಳೆಗೆ ಲೋಕಾಯುಕ್ತರು ದಾಳಿ ನಡೆಸಿದ್ದಾರೆ. ಗುರುವಾರ ಜಯಪ್ರಕಾಶ ಲಂಚದ ಹಣ ಪಡೆಯುವಾಗಲೇ ಲೋಕಾಯುಕ್ತ ಡಿವೈಎಸ್ಪಿ ಶೈಲೇಂದ್ರ ನೇತೃತ್ವದಲ್ಲಿ ದಾಳಿ ನಡೆಸಿದ ಪೊಲೀಸರು, ಅತನನ್ನು ರೆಡ್ಹ್ಯಾಂಡಾಗಿ ವಶಕ್ಕೆ ಪಡೆದು ಇದೀಗ ನಂಜನಗೂಡು ತಾಲ್ಲೂಕು ಕಚೇರಿಯಲ್ಲಿ ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.




