ಬೆಂಗಳೂರು : ಬಿಡದಿ ಟೌನ್ಶಿಪ್ ಯೋಜನೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆ, ರೈತರ ಪ್ರತಿಭಟನೆ ಹಾಗೂ ಆರೋಪ-ಪ್ರತ್ಯಾರೋಪಗಳ ನಡುವೆಯೂ ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್ ಶಿಪ್(ಜಿಬಿಐಟಿ) ಡಿಪಿಆರ್ ಸಿದ್ಧಪಡಿಸಲು ಮುಂದಾಗಿದೆ.
ಯೋಜನೆಯ ಸಮಗ್ರ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲು ಸುಮಾರು 26 ಕೋಟಿ ರೂ. ವೆಚ್ಚದ ಟೆಂಡರ್ ಕರೆಯಲು ಜಿಬಿಐಟಿ ತೀರ್ಮಾನಿಸಿದೆ.
ಟೆಂಡರ್ ಪ್ರಕ್ರಿಯೆಯ ಭಾಗವಾಗಿ ಜೂನ್ 22ರಂದು ಟೆಂಡರ್ ತೆರೆಯಲಾಗುವುದು. ಅಲ್ಲಿ ಆಯ್ಕೆಯಾಗುವ ಸಂಸ್ಥೆಗೆ ಟೌನ್ಶಿಪ್ನ ಸಮಗ್ರ ರೂಪರೇಷೆ ಸಿದ್ಧಪಡಿಸುವ ಜವಾಬ್ದಾರಿ ವಹಿಸಲಾಗುತ್ತದೆ.
ಡಿಪಿಆರ್ನಲ್ಲಿ ಏನೆಲ್ಲ ಇರಲಿದೆ
ಟೆಂಡರ್ ಪಡೆಯುವ ಸಂಸ್ಥೆಯು ಟೌನ್ಶಿಪ್ನ ಸಂಪೂರ್ಣ ಬ್ಲೂಪ್ರಿಂಟ್, ಮಾಸ್ಟರ್ ಪ್ಲಾನ್ ಹಾಗೂ ರೋಡ್ಮ್ಯಾಪ್ ಸಿದ್ಧಪಡಿಸಬೇಕು. ಇದರ ಜೊತೆಗೆ, ಟೌನ್ಶಿಪ್ ಅನುಷ್ಠಾನದ ಕಾರ್ಯತಂತ್ರ,ರಸ್ತೆ, ನೀರು, ಒಳಚರಂಡಿ, ವಿದ್ಯುತ್ ಸೇರಿದಂತೆ ಮೂಲಭೂತ ಸೌಲಭ್ಯಗಳ ಯೋಜನೆ, ಸಾಮಾಜಿಕ ಹಾಗೂ ನಾಗರಿಕ ಸೌಲಭ್ಯಗಳ ವಿವರ, ಹೂಡಿಕೆ ಮಾದರಿ ಹಾಗೂ ಹಣಕಾಸಿನ ವ್ಯವಸ್ಥೆ, ಯೋಜನೆ ಜಾರಿಗೆ ಸಂಬಂಧಿಸಿದ ಹಂತವಾರು ಕಾರ್ಯಯೋಜನೆ ಇತ್ಯಾದಿ ಅಂಶಗಳನ್ನು ಒಳಗೊಂಡ ಸಮಗ್ರ ವರದಿ ಸಲ್ಲಿಸಬೇಕಿದೆ.
ಒಂದೆಡೆ ರೈತರ ಪ್ರತಿಭಟನೆ ಹಾಗೂ ರಾಜಕೀಯ ಜಟಾಪಟಿ ಮುಂದುವರಿದಿದ್ದರೂ, ಮತ್ತೊಂದೆಡೆ ಆಡಳಿತಾತ್ಮಕವಾಗಿ ಯೋಜನೆಗೆ ವೇಗ ನೀಡುವ ಉದ್ದೇಶದಿಂದ ಜಿಬಿಐಟಿ ಡಿಪಿಆರ್ ಪ್ರಕ್ರಿಯೆ ಆರಂಭಿಸಿರುವುದು ಮಹತ್ವದ ಬೆಳವಣಿಗೆಯಾಗಿದೆ.
ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಆಯ್ಕೆಯಾಗುವ ಸಲಹಾ ಸಂಸ್ಥೆ ಸಲ್ಲಿಸುವ ವರದಿಯ ಆಧಾರದ ಮೇಲೆ ಬಿಡದಿ ಟೌನ್ಶಿಪ್ನ ಅಂತಿಮ ವಿನ್ಯಾಸ ಹಾಗೂ ಅನುಷ್ಠಾನದ ದಿಕ್ಕು ಸ್ಪಷ್ಟವಾಗಲಿದೆ.




