ಬೆಳ್ಳಿ ಖಡ್ಗ, ದೇವಿಗೆ ರೇಷ್ಮೆ ಸೀರೆ ಅರ್ಪಿಸಿ ವಿಶೇಷ ಪೂಜೆ, ಪ್ರಾರ್ಥನೆ
ಉಡುಪಿ : ತಮಿಳುನಾಡು ಮುಖ್ಯಮಂತ್ರಿ ಸಿ.ಜೋಸೆಫ್ ವಿಜಯ್ ಅವರು ಶುಕ್ರವಾರ ಉಡುಪಿ ಜಿಲ್ಲೆಯ ಪ್ರಸಿದ್ಧ ಕಿಲ್ಲೂರು ಮೂಕಾಂಬಿಕೆ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು.
ಶುಕ್ರವಾರ ಮಧ್ಯಾಹ್ನ ವಿಶೇಷ ವಿಮಾನದ ಮೂಲಕ ದಿಲ್ಲಿಯಿಂದ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ವಿಜಯ್ ಅವರು, ಅಲ್ಲಿಂದ ಕಾರಿನಲ್ಲಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿದರು.
ತಮಿಳುನಾಡು ಸಿಎಂ ವಿಜಯ್ ಅವರಿಗೆ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು, ಹೂಗುಚ್ಛ ನೀಡಿ ಸ್ವಾಗತ ಕೋರಿದರು. ಬಳಿಕ ಮಂತ್ರಘೋಷದೊಂದಿಗೆ ಪೂರ್ಣಕುಮಭ ಗೌರವದೊಂದಿಗೆ ಕ್ಷೇತ್ರದೊಳಗೆ ಅರ್ಚಕ ವೃಂದ ಬರಮಾಡಿಕೊಂಡಿತು.
ವಿಜಯ್ ಅವರು ಸಹ ದೇವಸ್ಥಾನದ ಸಂಪ್ರದಾಯದಂತೆ ಶರ್ಟ್ ಬಿಚ್ಚಿ, ಶಲ್ಯ ಧರಿಸಿ ದೇವಸ್ಥಾನ ಪ್ರವೇಶಿಸುವ ಮೂಲಕ ಶಿಷ್ಟಾಚಾರ ಪಾಲನೆ ಮಾಡಿದರು. ಪ್ರಧಾನ ಅರ್ಚಕ ರಾಮಚಂದ್ರ ಅಡಿಗ ಅವರ ನೇತೃತ್ವದಲ್ಲಿ ಸಂಕಲ್ಪ ಪೂಜೆ ನೆರವೇರಿಸಲಾಯಿತು. ಸಿಎಂ ವಿಜಯ್ ಸಂಕಲ್ಪ ಪೂಜೆ ಮಾಡಿದರು.
ಇದೇ ಸಂದರ್ಭದಲ್ಲಿ ಶಕ್ತಿ ದೇವಿಗೆ ೧ ಕೆಜಿ ೬೦೦ ಗ್ರಾಂ ತೂಕದ ಬೆಳ್ಳಿ ಖಡ್ಗ, ರೇಷ್ಮೆ ಸೀರೆ, ಫಲ-ತಾಂಬೂಲ ಅರ್ಪಿಸಿ ವಿಜಯ್ ಪ್ರಾರ್ಥನೆ ಸಲ್ಲಿಸಿದರು. ಸಂಕಲ್ಪ ಪೂಜೆ ಬಳಿಕ ದೀಪಾರಾಧನೆ ಮಾಡಲಾಯಿತು. ಈ ವೇಳೆ ಸಿಎಂಗೆ ಅರ್ಚಕರು ರಕ್ಷಾ ದಾರ ಕಟ್ಟಿದರು. ಪೂಜೆ ಬಳಿಕ ವಿಜಯ್ ದೇವಸ್ಥಾನದಿಂದ ಹೊರಟರು. ವಿಜಯ್ ಅವರನ್ನು ನೋಡಲು ವಿಮಾನ ನಿಲ್ದಾಣದ ಬಳಿ ಹಾಗೂ ದೇವಾಲಯದ ಬಳಿ ಅಭಿಮಾನಿಗಳ ದಂಡೇ ನೆರೆದಿತು.




