ಮೇಲುಕೋಟೆ : ವೈಷ್ಣವ ಪರಂಪರೆಯ ಅತ್ಯಂತ ಪ್ರಸಿದ್ಧ ಮತ್ತು ವಿಶ್ವವಿಖ್ಯಾತ ವೈರಮುಡಿ ಬ್ರಹ್ಮೋತ್ಸವ ಶನಿವಾರ ರಾತ್ರಿಯಿಡಿ ಮೇಲುಕೋಟೆ ಶ್ರೀ ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ವಿಜೃಂಭಣೆಯಿಂದ ಜರುಗಿತು.
ಸಾವಿರಾರು ಭಕ್ತರು ಮೇಲುಕೋಟೆಗೆ ಆಗಮಿಸಿ ಚೆಲುವನಾರಾಯಣಸ್ವಾಮಿಗೆ ವೈರಮುಡಿ (ರತ್ನಕಿರೀಟ) ಧಾರಣೆ ಮಾಡುವ ಅಪೂರ್ವ ದೃಶ್ಯವನ್ನು ಕಣ್ತುಂಬಿಕೊಂಡರು.
ವೈರಮುಡಿ ಉತ್ಸವದ ವಿಶೇಷತೆ ಎಂದರೆ ದೇವರಿಗೆ ಧರಿಸುವ ಅಮೂಲ್ಯ ರತ್ನದಿಂದ ಕೂಡಿದ ವೈರಮುಡಿ ಕಿರೀಟ. ಈ ಕಿರೀಟವನ್ನು ವರ್ಷಕ್ಕೊಮ್ಮೆ ಮಾತ್ರ ದೇವರಿಗೆ ಧರಿಸಲಾಗುತ್ತದೆ.
ದೇವಾಲಯ ಆಡಳಿತ ಮತ್ತು ಪೊಲೀಸ್ ಇಲಾಖೆಯಿಂದ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿತ್ತು. ಗುರುವಾರದಿಂದಲೇ ಆರಂಭವಾದ ಬ್ರಹ್ಮೋತ್ಸವದ ಭಾಗವಾಗಿ ಈ ವೈರಮುಡಿ ಮಹೋತ್ಸವ ನಡೆಯಿತು. ಮಹಾರಥೋತ್ಸವ, ಗಜೇಂದ್ರಮೋಕ್ಷ, ಬಂಗಾರದ ಪಲ್ಲಕ್ಕಿ ಉತ್ಸವ ಸೇರಿದಂತೆ ಉತ್ಸವದ ವಿವಿಧ ಕಾರ್ಯಕ್ರಮಗಳು ಮುಂದುವರೆಯುತ್ತಿವೆ.
ಈ ಬಾರಿ ವೈರಮುಡಿ ಬ್ರಹ್ಮೋತ್ಸವದಲ್ಲಿ 2 ಲಕ್ಷಕ್ಕೂ ಅಧಿಕ ಭಕ್ತರು ದೇವರ ದರ್ಶನ ಪಡೆದರು. ಸಂಜೆ ವೇಳೆಗೆ ಪಾರ್ಕಿಂಗ್ ಸ್ಥಳಗಳೆಲ್ಲಾ ಭರ್ತಿಯಾಗಿದ್ದವು. ಇಷ್ಟು ವರ್ಷಗಳ ಪೈಕಿ ಈ ವರ್ಷ ಮೊದಲ ಬಾರಿಗೆ ದಾಖಲೆ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು ಎಂದು ಉಪವಿಭಾಗಾಧಿಕಾರಿ ಶ್ರೀನಿವಾಸ್ ಹೇಳಿದ್ದಾರೆ.




