Mysore
30
clear sky

Social Media

ಸೋಮವಾರ, 02 ಮಾರ್ಚ್ 2026
Light
Dark

ಬಗೆಹರಿದ ‘ವಾರಣಾಸಿ’ ಶೀರ್ಷಿಕೆ ವಿವಾದ; ಹೊಸ ಹೆಸರು ಏನು ಗೊತ್ತಾ?

ಜನಪ್ರಿಯ ನಿರ್ದೇಶಕ ಎಸ್‍.ಎಸ್‍. ರಾಜಮೌಳಿ ಎರಡು ವಾರಗಳ ಹಿಂದಷ್ಟೇ ತಮ್ಮ ಹೊಸ ಚಿತ್ರ ‘ವಾರಣಾಸಿ’ಯ ಟೈಟಲ್‍ ಟೀಸರ್ ಬಿಡುಗಡೆ ಮಾಡಿದ್ದರು. ಹೈದರಾಬಾದ್‍ನಲ್ಲಿ ನಡೆದ ಈ ಸಮಾರಂಭ, ಜಗತ್ತಿನಾದ್ಯಂತ ಸುದ್ದಿ ಮಾಡಿತ್ತು. ಯಾವಾಗ, ಶೀರ್ಷಿಕೆ ಅನಾವರಣವಾಗಿತ್ತೋ, ಆಗ ಹೊಸ ವಿವಾದವೊಂದು ಹುಟ್ಟಿಕೊಂಡಿತ್ತು. ಈಗ ಆ ವಿವಾದ ಬಗೆಹರಿದಿದೆ ಎಂಬ ಸುದ್ದಿಯೊಂದು ಕೇಳಿಬರುತ್ತಿದೆ.

ಹೌದು, ‘ವಾರಣಾಸಿ’ ಚಿತ್ರವನ್ನು ರಾಜಮಳಿಗೂ ಮೊದಲೇ ರಾಮ ಬ್ರಹ್ಮ ಹನುಮ ಕ್ರಿಯೇಷನಸ್ ಬ್ಯಾನರ್ ಅಡಿ ಸಿ.ಎಚ್‍. ಸುಬ್ಬಾರೆಡ್ಡಿ ಎನ್ನುವವರು 2023ರ ಜುಲೈ 24ರಂದು ‘ವಾರಣಾಸಿ’ ಎಂಬ ಹೆಸರನ್ನು ತೆಲುಗು ಚಲನಚಿತ್ರ ನಿರ್ಮಾಪಕರ ಕೌನ್ಸಿಲ್‍ನಲ್ಲಿ ನೋಂದಾಯಿಸಿದ್ದರು. ಆ ನಂತರ ಈ ವರ್ಷದ ಜೂನ್‍ 24ರಂದು ಅದನ್ನು ನವೀಕರಿಸಿದ್ದು, 2026ರ ಜುಲೈ 23ರವರೆಗೂ ‘ವಾರಣಾಸಿ’ ಎಂಬ ಶೀರ್ಷಿಕೆಯು ಅವರ ಬಳಿಯೇ ಇರುತ್ತದೆ. ಹೀಗಿರುವಾಗ, ತಮಗೆ ಕೊಟ್ಟ ಶೀರ್ಷಿಕೆಯನ್ನು ರಾಜಮೌಳಿ ಬಳಸಿಕೊಳ್ಳುತ್ತಿರುವುದು ಸರಿಯಲ್ಲ ಎಂದು ತಗಾದೆ ತೆಗೆದಿದ್ದರು. ಅಷ್ಟೇ ಅಲ್ಲ, ತಮ್ಮ ವಾದಕ್ಕೆ ಪೂರಕವಾದ ಮಾಹಿತಿಯನ್ನು ಸಲ್ಲಿಸಿದ್ದರು.

ಇದನ್ನು ಓದಿ: ‘ಆಜಾದ್ ಭಾರತ್’ ಚಿತ್ರದೊಂದಿಗೆ ಬಂದ ರೂಪಾ ಅಯ್ಯರ್: ಜನವರಿ.2ರಂದು ಚಿತ್ರ ಬಿಡುಗಡೆ

ಇದೀಗ, ಈ ಶೀರ್ಷಿಕೆ ವಿವಾದ ಬಗೆಹರಿದಿದೆ ಎಂದು ಹೇಳಲಾಗುತ್ತಿದೆ. ಮೂಲಗಳ ಪ್ರಕಾರ, ಸುಬ್ಬಾರೆಡ್ಡಿ ಬರೀ ತೆಲುಗು ಭಾಷೆಯಲ್ಲಿ ‘ವಾರಣಾಸಿ’ ಚಿತ್ರವನ್ನು ನಿರ್ಮಿಸುವುದಕ್ಕೆ ಉದ್ದೇಶಿಸಿದ್ದರಂತೆ. ಆದರೆ, ರಾಜಮೌಳಿ’ ಹಾಗಲ್ಲ. ತಮ್ಮ ‘ವಾರಣಾಸಿ’ ಚಿತ್ರವನ್ನು ತೆಲುಗು, ತಮಿಳು, ಕನ್ನಡ, ಹಿಂದಿ, ಮಲಯಾಳಂ ಮತ್ತು ಇಂಗ್ಲೀಷ್‍ ಸೇರಿದಂತೆ ಒಟ್ಟು ಆರು ಭಾಷೆಗಳಲ್ಲಿ ಬಿಡುಗಡೆ ಮಾಡುವುದಕ್ಕೆ ಮುಂದಾಗಿದ್ದರು. ಆರೂ ಭಾಷೆಗಳಲ್ಲಿ ಸಲ್ಲುವಂತೆ ‘ವಾರಣಾಸಿ’ ಎಂಬ ಕಾಮನ್‍ ಹೆಸರನ್ನು ಇಟ್ಟಿದ್ದರು.

ಇದೀಗ ಅವರು ತೆಲುಗು ಚಿತ್ರಗ ‘ರಾಜಮೌಳಿಸ್ ವಾರಣಾಸಿ’ ಎಂದು ಹೆಸರು ಬದಲಾಯಿಸಿದ್ದು, ಮಿಕ್ಕ ಐದು ಭಾಷೆಗಳಲ್ಲಿ ‘ವಾರಣಾಸಿ’ ಎಂಬ ಹೆಸರಿನಲ್ಲೇ ಬಿಡುಗಡೆಯಾಗಲಿದೆಯಂತೆ.

ಇದೊಂದು ಪೌರಾಣಿಕ ಹಿನ್ನೆಲೆಯ ಫ್ಯಾಂಟಸಿ ಚಿತ್ರವಾಗಿದ್ದು, ‘ವಾರಣಾಸಿ’ ಚಿತ್ರವನ್ನು ಶ್ರೀ ದುರ್ಗಾ ಆರ್ಟ್ಸ್ ಮತ್ತು ಶೋಯಿಂಗ್‍ ಬಿಝಿನೆಸ್‍ ಸಂಸ್ಥೆಗಳಡಿ ಕೆ.ಎಲ್‍. ನಾರಾಯಣ ಮತ್ತು ಎಸ್‍.ಎಸ್. ಕಾರ್ತಿಕೇಯ ಜೊತೆಯಾಗಿ ನಿರ್ಮಿಸುತ್ತಿದ್ದು, ರಾಜಮೌಳಿ ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ಮಹೇಶ್‍ ಬಾಬು, ರುದ್ರ ಎಂಬ ಪಾತ್ರದಲ್ಲಿ ಅಭಿನಯಿಸಿದರೆ, ಪ್ರಿಯಾಂಕಾ ಚೋಪ್ರಾ ಮತ್ತು ಪೃಥ್ವಿರಾಜ್‍ ಸುಕುಮಾರನ್‍, ಮಂದಾಕಿನಿ ಮತ್ತು ಕುಂಭ ಎಂಬ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ಎಂ.ಎಂ. ಕೀರವಾಣಿ ಈ ಚಿತ್ರಕ್ಕಿದೆ.

Tags:
error: Content is protected !!