Mysore
16
few clouds

Social Media

ಸೋಮವಾರ, 08 ಡಿಸೆಂಬರ್ 2025
Light
Dark

ಹೋರಾಟಕ್ಕೆ ಸಂವಿಧಾನವೇ ಆಧಾರ : ಸಂಗೀತ ನಿರ್ದೇಶಕ ಹಂಸಲೇಖ

ಮೈಸೂರು : ಸಂಶೋಧಕರ ಸಂಘ ಬಣಗಳ ತೇರಾಗದೇ, ಎಲ್ಲ ಬಣಗಳ ಬಂಡಿಯಾಗಿ ಒಗ್ಗಟ್ಟಿನಲ್ಲಿ ಮುನ್ನಡೆಸಬೇಕು. ಸಂಶೋಧಕರು ಪ್ರತಿಯೊಬ್ಬರೂ ಒಂದೊಂದು ದ್ವೀಪವಿದ್ದಂತೆ. ಈ ಅನೇಕ ದ್ವೀಪಗಳೂ ಸೇರಿ ಒಂದು ನೆಲೆಗಟ್ಟಾಗಬೇಕು ಎಂದು ನಿರ್ದೇಶಕ ಡಾ.ಹಂಸಲೇಖ ಸಲಹೆ ನೀಡಿದರು.

ಮಾನಸಗಂಗೋತ್ರಿಯ ಮಾನವಿಕ ಸಭಾಂಗಣದಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಸಂಶೋಧಕರ ಸಂಘದ ವತಿಯಿಂದ ಏರ್ಪಡಿಸಿದ್ದ ೨೦೨೫-೨೬ನೇ ಸಾಲಿನ ಸಂಶೋಧಕರ ಸಂಘದ ಉದ್ಘಾಟನಾ ಸಮಾರಂಭ ಹಾಗೂ ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಂಘ-ಸಂಸ್ಥೆ ಸ್ಥಾಪನೆಯಾಗಿ ಬೆಳೆದು ಬಂದಂತೆ ಛಿದ್ರವಾಗುವುದು ಸಾಮಾನ್ಯ. ಹಿಂದೆ ಹೋರಾಟಕ್ಕಿದ್ದ ಬಿರುಸು ಈಗಿಲ್ಲ. ನಮ್ಮ ಹೋರಾಟಕ್ಕೆ ಸಂವಿಧಾನವೊಂದೇ ಆಧಾರ. ಅದರ ಮೂಲಕವೇ ಹೋರಾಟವಾಗಬೇಕು ಎಂದು ಪ್ರತಿಪಾದಿಸಿದರು.

ಹಿಂದಿನ ಕಾಲಘಟ್ಟ ಇವತ್ತಿಗೆ ಸಮಂಜಸ ಹಾಗೂ ಪ್ರಸ್ತುತವಲ್ಲ. ಕುವೆಂಪು ನಡೆದ ಕಾಲಘಟ್ಟ ಇವತ್ತಿಗೆ ನೆನಪಿಸಿಕೊಳ್ಳುವುದು ಬಹಳ ಕಷ್ಟಕರವಾದದ್ದು. ಅದರ ಬದಲಾಗಿ ಇವತ್ತಿಗೆ ಆ ಪೀಳಿಗೆಯ ದಾರಿಯಲ್ಲಿ ಮುನ್ನಡೆಯುವ ಕಾರ್ಯ ಅತ್ಯಂತ ಮಹತ್ವವಾದದ್ದು. ಕುವೆಂಪು ಅವರ ಮಟ್ಟಕ್ಕೆ ಏರಲು ರೂಢಿಗತರಾಗ ಬೇಕು ಎಂದು ತಿಳಿಸಿದರು.

ಕನಸು ಹೊತ್ತ ಸಂಶೋಧಕರು ತಮ್ಮ ವಿಷಯದಲ್ಲಿ ನಿಖರತೆ ಫಲಿಸುವವರೆಗೂ ಧ್ಯಾನಸ್ಥರಾಗಿ. ಆ ನಿಖರತೆ, ನಿಷ್ಠೆ ಬಂದರೆ ಮಾತ್ರ ಸಂಶೋಧನೆ ಸ್ಪಷ್ಟತೆಯಿಂದ ಕೂಡಿರಲು ಸಾಧ್ಯವಾಗಲಿದೆ. ಅದರಿಂದ ಪ್ರತಿಫಲವೂ ದೊರೆಯಲಿದೆ. ಅಲ್ಲಿಂದ ಹೊಸ ಹಾದಿ, ಗುರಿ ಸಿಗಲಿದೆ. ಯಾವಾಗಲೂ ಸತ್ಯದ ಹಾದಿಯಲ್ಲಿ ನಡೆಯುವುದನ್ನು ಮರೆಯಬಾರದು ಎಂದು ಸಲಹೆ ನೀಡಿದರು.

‘ಆಂದೋಲನ’ ದಿನಪತ್ರಿಕೆ ವ್ಯವಸ್ಥಾಪಕ ಸಂಪಾದಕರಾದ ರಶ್ಮಿ ಕೋಟಿ ಮಾತನಾಡಿ, ಹೋರಾಟಗಳು ದೇಶದಲ್ಲಿ ಹೊಸ ಆಶಾಕಿರಣ ಮೂಡಿಸಬಲ್ಲವು. ವಿದ್ಯಾರ್ಥಿಗಳೇ ದೇಶದ ಭವಿಷ್ಯ. ಸಮಾಜದಲ್ಲಿ ಆಗುತ್ತಿರುವ ತಪ್ಪುಗಳನ್ನು ಸರಿಪಡಿಸಬೇಕಾದರೆ ವಿದ್ಯಾರ್ಥಿಗಳು ಜಾಗರೂಕರಾಗಬೇಕು. ಆಗ ಮಾತ್ರ ದೇಶವು ಜಾಗೃತವಾಗಲು ಸಾಧ್ಯ ಎಂದರು.

ಇದನ್ನೂ ಓದಿ:-ಶಬರಿ ಮಲೆಯಲ್ಲಿ ಮಹಿಳೆ ಸಾವು ; ನೂಕು ನುಗ್ಗಲಿನಲ್ಲಿ ಉಸಿರುಕಟ್ಟಿ ಕೊನೆಯುಸಿರು

ವಿದ್ಯಾರ್ಥಿ ಸಂಘಗಳು ದೇಶದಲ್ಲಿ ಬಹಳ ಮುಖ್ಯ. ಇದರ ಮೂಲಕವೇ ಪ್ರಶ್ನಿಸುವ, ಚರ್ಚಿಸುವ, ದೇಶದ ಭವಿಷ್ಯವನ್ನು ರೂಪಿಸುವ ಹಾದಿಯನ್ನು ಮಾಡಿಕೊಡುತ್ತವೆ. ವಿವಿಗಳಲ್ಲಿ ಸಂಘಗಳು ನಿರ್ಮಾಣವಾಗದಿ ದ್ದರೆ, ದೇಶದಲ್ಲಿ ಧ್ವನಿಯಿಲ್ಲದಂತಾಗುತ್ತದೆ. ವಿ.ವಿಯ ಸಮಸ್ಯೆಗಳ ಕುರಿತು ವಿದ್ಯಾರ್ಥಿಗಳ ಪರವಾಗಿ ‘ಆಂದೋಲನ’ ದಿನಪತ್ರಿಕೆ ಬೆನ್ನಿಗೆ ನಿಂತು ನಿರಂತರ ವರದಿ ಮಾಡುತ್ತಿದ್ದು, ಮುಂದೆಯೂ ಬೆಂಬಲ ಸಿಗಲಿದೆ ಎಂದರು.

ಶೈಕ್ಷಣಿಕ ಗುಣಮಟ್ಟ ಹೆಚ್ಚಾಗಬೇಕಿದ್ದು, ಅತಂತ್ರ ಸ್ಥಿತಿಯನ್ನು ನಿರ್ಮೂಲನೆ ಮಾಡುವ ಕಡೆಗೆ ವಿದ್ಯಾರ್ಥಿ ಗಳು ಹಾಗೂ ಆಡಳಿತ ವ್ಯವಸ್ಥೆ ಕೆಲಸ ಮಾಡಬೇಕು. ದೊಡ್ಡ ಸಮಸ್ಯೆ ನಿವಾರಣೆಯ ಹೋರಾಟ ನಡೆಸುವ ಮೊದಲು ಮೂಲ ಸಮಸ್ಯೆಗಳು ನಿವಾರಣೆಯಾಗಬೇಕು ಎಂದು ಕಿವಿಮಾತು ಹೇಳಿದರು.

ಮೈಸೂರು ವಿಶ್ವವಿದ್ಯಾನಿಲಯ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್, ಕುಲಸಚಿವರಾದ ಎಂ.ಕೆ.ಸವಿತಾ, ಮಾಜಿ ಮಹಾಪೌರ ಪುರುಷೋತ್ತಮ್, ಸಮಾಜ ಸೇವಕ ಅಹಿಂದ ಜವರಪ್ಪ, ಪ್ರಗತಿಪರ ಚಿಂತಕರಾದ ಸವಿತಾ ಪ.ಮಲ್ಲೇಶ್, ವಕೀಲ ಎಂ.ಶಿವಪ್ರಸಾದ್, ಕರಾಮುವಿ ವ್ಯವಸ್ಥಾಪನಾ ಮಂಡಳಿ ಸದಸ್ಯ ಡಾ.ಮಹೇಶ್ ಸೋಸಲೆ, ಸಮಾಜ ಸೇವಕ ಡಾ.ಎಸ್.ಮರಿದೇವಯ್ಯ, ಯುವ ವಿಜ್ಞಾನಿ ಡಾ.ನವೀನ್ ಮೌರ್ಯ, ಮೈಸೂರು ವಿ.ವಿ ಸಿಂಡಿಕೇಟ್ ಸದಸ್ಯ ಡಾ.ನಟರಾಜ್ ಶಿವಣ್ಣ, ಬೆಂಗಳೂರು ವಿ.ವಿ ಸಿಂಡಿಕೇಟ್ ಸದಸ್ಯ ಡಾ.ಎಚ್.ಬೀರಪ್ಪ, ಸಂಶೋಧಕರ ಸಂಘದ ಅಧ್ಯಕ್ಷ ವರಹಳ್ಳಿ ಆನಂದ್, ಉಪಾಧ್ಯಕ್ಷ ಕೆ.ಮಲ್ಲೇಶ್ ಮತ್ತಿತರರು ಉಪಸ್ಥಿತರಿದ್ದರು.

Tags:
error: Content is protected !!