ಮೈಸೂರಿನಲ್ಲಿ ಆಯುಧ ಪೂಜೆ ಮತ್ತು ದಸರಾ ಹಬ್ಬದ ಹಿನ್ನೆಲೆಯಲ್ಲಿ ಕುವೆಂಪುನಗರದ ಕಾಂಪ್ಲೆಕ್ಸ್ ಬಸ್ ನಿಲ್ದಾಣದ ಬಳಿ , ಜೆ.ಕೆ. ಮೈದಾನ ಇನ್ನೂ ಮುಂತಾದ ಕಡೆಗಳಲ್ಲಿ ಹೂವು, ಮಾವಿನ ಸೊಪ್ಪು, ಬಾಳೆಕಂದು, ಸೇವಂತಿಗೆ, ಚೆಂಡು ಹೂವು ಮಾರಾಟ ಮಾಡುವುದು ಕಂಡುಬಂತು. ಆದರೆ ಹಬ್ಬ ಮುಗಿಯುತ್ತಿದ್ದಂತೆ , ಮಾರಾಟವಾಗದ ಹೂವು, ಬಾಳೆ ಕಂದು, ಪ್ಲಾಸ್ಟಿಕ್ ಕವರ್ಗಳು ಹಾಗೂ ಚೀಲಗಳನ್ನು ರಸ್ತೆಯ ಅಕ್ಕ ಪಕ್ಕ ಹಾಗೂ ಫುಟ್ಪಾತ್ ಮೇಲೆ ಬಿಸಾಡಿ ಹೋಗುತ್ತಾರೆ.
ಇದನ್ನು ಸ್ವಚ್ಛ ಮಾಡಲು ಪೌರಕಾರ್ಮಿಕರು ಹರಸಾಹಸ ಪಡುವಂತಾಗಿದೆ. ಮುಂದಿನ ದಿನಗಳಲ್ಲಿ ದೀಪಾವಳಿ, ಸಂಕ್ರಾಂತಿ, ಶಿವರಾತ್ರಿ, ಯುಗಾದಿ ಹಬ್ಬಗಳಲ್ಲೂ ಇದೇ ಪುನರಾವರ್ತನೆಯಾಗುತ್ತದೆ. ಇದಕ್ಕೆ ಯಾರು ಹೊಣೆ? ಕೂಡಲೇ ನಗರ ಪಾಲಿಕೆ ಆಯುಕ್ತರು ಸಂಬಂಧಪಟ್ಟವರೊಡನೆ ಚರ್ಚಿಸಿ ರಸ್ತೆಬದಿಗಳಲ್ಲಿ ಹಬ್ಬದ ದಿನಗಳ ಪ್ರಯುಕ್ತ ವಿಶೇಷವಾಗಿ ವ್ಯಾಪಾರ ವಹಿವಾಟು ನಡೆಸುವವರಿಗೆ ಸ್ವಚ್ಛತೆ ಕಾಪಾಡಲು ಕೆಲವು ನಿಯಮಗಳೊಡನೆ ಷರತ್ತು ವಿಧಿಸುವುದರ ಜೊತೆಗೆ ವ್ಯಾಪಾರ ವಹಿವಾಟು ಮುಗಿದ ನಂತರ ಸಂಬಂಧಪಟ್ಟವರೇ ಎಲ್ಲಾ ವಸ್ತುಗಳನ್ನು ತೆರವುಗೊಳಿಸುವಂತೆ ಸೂಚಿಸಬೇಕಿದೆ.
-ನಾಗೇಶ್, ಮಾನಸಗಂಗೋತ್ರಿ, ಮೈಸೂರು





