Mysore
15
scattered clouds

Social Media

ಬುಧವಾರ, 21 ಜನವರಿ 2026
Light
Dark

ಮಂಡ್ಯ ಜಿಲ್ಲೆಯಲ್ಲಿ 1.70 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಬಳಕೆ: ಅಶೋಕ್

ಮಂಡ್ಯ: ಜಿಲ್ಲೆಯಲ್ಲಿ 5 ಲಕ್ಷ ಹೆಕ್ಟೇರ್ ಪ್ರದೇಶಕ್ಕಿಂತ ಹೆಚ್ಚು ವಿಸ್ತೀರ್ಣದಲ್ಲಿ ವಿವಿಧ ಬೆಳೆಗಳನ್ನು ಬೆಳೆಯಲಾಗಿದೆ, ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ 1.70 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಬಳಕೆ ಮಾಡಲಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಅಶೋಕ್ ಹೇಳಿದರು.

ಇಂದು ಶ್ರೀರಂಗಪಟ್ಟಣ ದಸರಾ ಅಂಗವಾಗಿ ಕೃಷಿ ಇಲಾಖೆಯ ವತಿಯಿಂದ ಆಯೋಜಿಸಲಾಗಿದ್ದ ರೈತ ದಸರಾ ಕಾರ್ಯಕ್ರಮದ ಕುರಿತು ಮಾತನಾಡಿದ ಅವರು, ರಾಜ್ಯದಲ್ಲಿ ಅತಿ ಹೆಚ್ಚು ಯೂರಿಯಾ ಬಳಸುವ ಜಿಲ್ಲೆಗಳಲ್ಲಿ ಮಂಡ್ಯ ಸಹ ಒಂದಾಗಿದೆ. ಅತಿಯಾದ ಯೂರಿಯಾ ಬಳಕೆಯಿಂದ ಭೂಮಿಯ ಫಲವತ್ತತೆ ಹಾಗೂ ಬೆಳೆಯ ಗುಣಮಟ್ಟ ಕುಂದುತ್ತದೆ ಎಂದು ಹೇಳಿದರು.

ರಾಷ್ಟ್ರೀಯ ನೈಸರ್ಗಿಕ ಕೃಷಿ ಪದ್ದತಿಯನ್ನು ಸದರಿ ವರ್ಷ ಜಾರಿಗೊಳಿಸಲಾಗಿದೆ. ಯಾವುದೇ ರಾಸಾಯನಿಕ ಗೊಬ್ಬರ ಬಳಸದೆ ಸಾವಯವ ಗೊಬ್ಬರ ಉಪಯೋಗಿಸಿ ಎಂದರು.

ರೈತರು ರಾಸಾಯನಿಕ ಗೊಬ್ಬರ ಬಳಸಿ ಅಧಿಕ ಇಳುವರಿ ಪಡೆಯಬಹುದು ಆದರೆ ಉತ್ತಮ ಗುಣಮಟ್ಟದ ಬೆಳೆ ಬೆಳೆಯಲು ಸಾಧ್ಯವಿಲ್ಲ, ಸಾವಯವ ಗೊಬ್ಬರ ಬಳಸುವುದರಿಂದ ಉತ್ತಮ ಗುಣಮಟ್ಟದ ಬೆಳೆ ಹಾಗೂ ಬೆಲೆಯನ್ನು ಪಡೆಯಬಹುದು ಎಂದು ತಿಳಿಸಿದರು.

ಬೆಲ್ಲದ ನಾಡು ರೈತ ಉತ್ಪಾದಕ ಸಂಸ್ಥೆಯ ಅಧ್ಯಕ್ಷ ಕರಸವಾಡಿ ಮಹಾದೇವ ಅವರು ಮಾತನಾಡಿ, ಜಿಲ್ಲೆಯ ಬಸರಾಳು ರೈತ ಉತ್ಪಾದಕ ಕಂಪನಿ 6 ಕೋಟಿಗೂ ಅಧಿಕ ವಹಿವಾಟು ಮಾಡಿದೆ, ಪ್ರಗತಿ ಪರ ಕೃಷಿಕರಿಗೆ ಇದು ಒಂದು ಪ್ರೇರಣೆ, ರೈತರು ಸಾವಯವ ಕೃಷಿ ಪದ್ಧತಿ ಅನುಸರಿಸಿ ಬೆಳೆ ಬೆಳೆಯಿರಿ, ರಾಸಾಯನಿಕ ಮುಕ್ತ ಬೆಳೆಗಳಿಗೆ ದೇಶ ವಿದೇಶಗಳಲ್ಲಿ ಉತ್ತಮ ಬೆಲೆ ಇದೆ, ರೈತರು ಬೆಳೆದ ಬೆಳೆಯನ್ನು ಬ್ರ್ಯಾಂಡಿಂಗ್ ಮತ್ತು ಪ್ಯಾಕಿಂಗ್ ಮಾಡಲು ಕೃಷಿ ಇಲಾಖೆ ಸಹಾಯಧನ ನೀಡುತ್ತದೆ ಎಂದು ತಿಳಿಸಿದರು.

ನೇಸರ ಆಗ್ರಿ ಸಂಸ್ಥೆಯ ಸಂಸ್ಧಾಪಕಿ ರೇಷ್ಮಾ ರಾಣಿ ಅವರು ಮಾತನಾಡಿ, ಒಂದೇ ಬಾರಿ ಸಾವಯವ ಕೃಷಿ ಮಾಡಲು ಕಷ್ಟವಾಗಬಹುದು ನಿಮ್ಮ ಬಳಿ ಇರುವ ಜಾಗದಲ್ಲಿ ಅರ್ಧ ಭಾದಲ್ಲಿ ನಿತ್ಯದ ಕೃಷಿ ಪದ್ಧತಿ ಬಳಸಿ ಬೆಳೆ ಬೆಳೆಯಿರಿ, ಉಳಿದ ಅರ್ಧ ಜಾಗದಲ್ಲಿ ಸಾವಯಾವ ಕೃಷಿ ಪದ್ಧತಿ ಅಳವಡಿಸಿಕೊಳ್ಳಿ, ಸಾವಯಾವ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳುವುದರಿಂದ ನಮ್ಮ ಪರಿಸರ, ಆರೋಗ್ಯವನ್ನು ಕಾಪಾಡಿಕೊಳ್ಳಬಹುದು, ಮುಂದಿನ ಪೀಳಿಗೆಗೆ ಉತ್ತಮ ವಾತಾವರಣ ನಿರ್ಮಾಣ ಮಾಡಬಹುದು ಎಂದು ಅರ್ಥ ಮಾಡಿಕೊಂಡು ಮುಂದೆ ಸಾವಯವ ಕೃಷಿ ಅಳವಡಿಸಿಕೊಳ್ಳಬಹುದು ಎಂದರು.

ಭಾರತದಲ್ಲಿ 5 ಗ್ಲೋಬಲ್ ಗ್ಯಾಪ್ (Good agricultural practices) ಸಂಸ್ಥೆ ಕಾರ್ಯ ನಿರ್ವಹಿಸುತ್ತಿವೆ, ರೈತರು ಇವರ ಬಳಿ ಹೋಗಿ ಬೆಳೆಯನ್ನು ಪ್ರಮಾಣಿಕರಿಸದರೆ ಅವರು ಬೆಳೆಯುವ ಬೆಳೆಗೆ ಉತ್ತಮ ಬೆಲೆ ಸಿಗುತ್ತದೆ ಎಂದು ಹೇಳಿದರು.

ಪಶು ವೈದ್ಯಕೀಯ ವಿಶ್ವವಿದ್ಯಾನಿಲಯದ ಸಹ ಪ್ರಾಧ್ಯಾಪಕರಾದ ಡಾ. ಹೆಚ್.ಎಸ್ ಮಧುಸೂದನ್ ಅವರು ಮಾತನಾಡಿ, ರೈತರು ತಾವು ಬೆಳೆಯುವ ಬೆಳೆಗಳಿಂದ ಕೆಲವು ಬಾರಿ ಲಾಭ ಕಾಣದೇ ಇರಬಹುದು, ಆದರೆ ಪಶು ಸಂಗೋಪನೆಯಲ್ಲಿ ನೀವು ಲಾಭಗಳಿಸದಿರಲು ಸಾಧ್ಯವಿಲ್ಲ, ಹಸು ಹಾಲು ಉತ್ಪಾದನೆಯನ್ನು ಹೆಚ್ಚಿಸಲು ಶಕ್ತಿ ಹೆಚ್ಚಿಸಲು ಸಾರಜನಕ, ಕೊಬ್ಬು, ನಾರು ಮತ್ತು ಲವಣಾಂಶ ಪೋಷಕಾಂಶಗಳು ಅತ್ಯಗತ್ಯ, ಪಶು ಆಸ್ಪತ್ರೆಗಳಲ್ಲಿ ಕೊಕು ಮಾತ್ರೆ ದೊರೆಯುತ್ತದೆ. ಕೊಕು ಮಾತ್ರೆ ಜಿಂಕ್ ಅಂಶವನ್ನು ಹೊಂದಿರುತ್ತದೆ. ಜಿಂಕ್ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ, ಇದರ ಜೊತೆ ಹಸಿ ಹುಲ್ಲು, ಜೋಳ ದಂತಹ ಆಹಾರವನ್ನು ನೀಡುವುದರಿಂದ ಹಾಲಿನ ಗುಣಮಟ್ಟ ಹೆಚ್ಚುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಶ್ರೀರಂಗಪಟ್ಟಣ ತಹಶೀಲ್ದಾರ್ ಚೇತನ ಯಾದವ್, ಕೃಷಿ ತಜ್ಞರು ಹಾಗೂ ಜಿಲ್ಲೆಯ ವಿವಿಧ ರೈತ ಉತ್ಪಾದಕ ಕಂಪನಿಗಳ ಮಾಲೀಕ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

Tags:
error: Content is protected !!