ನಾಡಹಬ್ಬ ಮೈಸೂರು ದಸರಾಕ್ಕೆ ಸಿದ್ಧತೆಗಳು ಭರದಿಂದ ಸಾಗಿವೆ. ನಗರದ ಪ್ರಮುಖ ರಸ್ತೆಗಳಲ್ಲಿ ದೀಪಾಲಂಕಾರ, ಬಸ್ ತಂಗುದಾಣ ಗಳು, ಸರ್ಕಾರಿ ಕಚೇರಿಗಳು ಸೇರಿದಂತೆ ಪ್ರಮುಖ ಸ್ಥಳಗಳಿಗೆ ಸುಣ್ಣ, ಬಣ್ಣ ಬಳಿದು ಸಿಂಗರಿಸಲಾಗಿದೆ.
ಸಿಎಂ ಸೂಚನೆಯ ಮೇರೆಗೆ ನಗರದ ಪ್ರಮುಖ ರಸ್ತೆಗಳನ್ನು ದುರಸ್ತಿ ಮಾಡುವುದರೊಂದಿಗೆ ಡಾಂಬರೀಕರಣ ಮಾಡಲಾಗಿದೆ. ನಗರದಲ್ಲಿ ಎಲ್ಲೆಂದರಲ್ಲಿ ಬಿದ್ದಿದ್ದ ಕಸವನ್ನು ತೆರವುಗೊಳಿಸಲಾಗಿದ್ದು, ಫುಟ್ಪಾತ್ ಮೊದಲಾದ ಸ್ಥಳಗಳನ್ನು ದುರಸ್ತಿ ಪಡಿಸಲಾಗುತ್ತಿದ್ದು, ಇಡೀ ನಗರವೇ ನವ ವಧುವಿನಂತೆ ಸಿಂಗಾರಗೊಳ್ಳುತ್ತಿದೆ.
ಇದನ್ನೂ ಓದಿ: ‘ಯಾವ ನಿಲ್ದಾಣವೂ ಅಂತಿಮವಾಗಿರಬಾರದು ಎನ್ನುವ ನಿಲ್ದಾಣಕ್ಕೆ ಬಂದಿದ್ದೇನೆ!’
ಹೊರ ಜಿಲ್ಲೆ, ರಾಜ್ಯ ಹಾಗೂ ವಿದೇಶಗಳಿಂದ ಬರುವ ಪ್ರವಾಸಿಗರು ನಗರದ ಸೌಂದರ್ಯವನ್ನು ವರ್ಣಿಸುವಂತಾಗಿದೆ. ಆದರೆ ಇದು ದಸರಾ ಸಂಭ್ರಮ ಮುಗಿಯುವ ವರೆಗೆ ಮಾತ್ರ ಎಂಬುದು ವಿಪರ್ಯಾಸದ ಸಂಗತಿಯಾಗಿದೆ.
ಸಾಂಸ್ಕೃತಿಕ ನಗರಿ ಮೈಸೂರಿಗೆ ವರ್ಷವಿಡೀ ದೇಶ, ವಿದೇಶಗಳಿಂದ ಪ್ರವಾಸಿಗರು ಆಗಮಿಸುತ್ತಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮೈಸೂರು ನಗರದ ರಸ್ತೆಗಳನ್ನು ದುರಸ್ತಿ ಮಾಡಿಸುವುದರೊಂದಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳಬೇಕು. ಆಗ ಸಾಂಸ್ಕೃತಿಕ ರಾಜಧಾನಿ ಇನ್ನಷ್ಟು ಸುಂದರವಾಗುತ್ತದೆ.
-ಶರತ್, ಮೈಸೂರು





