ಕೆ.ಆರ್.ಪೇಟೆ : ತಾಲ್ಲೂಕಿನ ಶೀಳನೆರೆ ಹೋಬಳಿಯ ಮುರುಕನಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಯ್ಯದ್ ಮುಜಾಕಿರ್ ಹಾಗೂ ಬಿಲ್ ಕಲೆಕ್ಟರ್ ನಾಗೇಶ್ ಅವರು ರೈತರೊಬ್ಬರಿಂದ ಮನೆಯ ಇಸ್ವತ್ತು ಖಾತೆ ಮಾಡಿಕೊಡಲು 20ಸಾವಿರ ರೂ ಲಂಚ ಪಡೆಯುವಾಗ ಲೋಕಾಯುಕ್ತ ಇನ್ಸ್ಪೆಕ್ಟರ್ ಬಿ.ಪಿ.ಬ್ಯಾಟರಾಯಿಗೌಡ ಅವರ ತಂಡದ ಬಲೆಗೆ ಬಿದ್ದಿದ್ದಾರೆ.
ಘಟನೆ ವಿವರ: ತಾಲ್ಲೂಕಿನ ಮುರುಕನಹಳ್ಳಿ ಗ್ರಾಮದ ಕಾಂತರಾಜು ಮತ್ತು ದೇವರಾಜು ಅವರು ತಮ್ಮ ತಂದೆಯಿಂದ ಬಂದ ಮನೆಯನ್ನು ವಿಭಾಗ ಪತ್ರ ಮಾಡಿಸಿಕೊಂಡು ಈ ವಿಭಾಗದ ಪತ್ರದಂತೆ ಖಾತೆ ಮಾಡಿಕೊಂಡುವಂತೆ ಕಾಂತರಾಜು ಜುಲೈ 30ರಂದು ಖಾತೆ ಮಾಡಿಕೊಡುವಂತೆ ಪಿಡಿಓ ಸಯ್ಯದ್ ಮುಜಾಕಿರ್ ಅವರಿಗೆ ಅರ್ಜಿ ಸಲ್ಲಿಸಿದ್ದಾರೆ.
ಆಗ ಇಸ್ವತ್ತು ಮತ್ತು ಖಾತೆಯನ್ನು ಬೇಗ ಮಾಡಿಕೊಡಲು 50ಸಾವಿರ ರೂ ನೀಡಬೇಕು ಎಂದು ಕೇಳಿದ್ದಾರೆ. ಆ.04ರಂದು ಮತ್ತೆ ಗ್ರಾಮ ಪಂಚಾಯಿತಿ ಕಚೇರಿಗೆ ಬಂದ ಕಾಂತರಾಜು 50ಸಾವಿರ ರೂ ಕೊಡಲು ನನ್ನಿಂದ ಸಾಧ್ಯವಿಲ್ಲ ಸಾರ್ ಕಡಿಮೆ ಮಾಡಿಕೊಳ್ಳಿ ಎಂದು ಪಿಡಿಓಗೆ ಕೇಳಿಕೊಂಡಿದ್ದಾರೆ. ಆಗ 40ಸಾವಿರಕ್ಕೆ ಒಪ್ಪಂದ ಮಾಡಿಕೊಂಡು ಬಂದು 20ಸಾವಿರ ರೂಗಳನ್ನು 10ದಿದೊಳಗೆ ಕೊಡುತ್ತೇನೆ ಎಂದು ಹೇಳಿದ್ದಾರೆ.
ಪಿಡಿಓ ಅವರು ಲಂಚಕ್ಕೆ ಬೇಡಿಕೆ ಇಡುವ ಸಂಭಾಷಣೆಯ ವಾಯ್ಸ್ ರೆಕಾರ್ಡ್ ಮಾಡಿಕೊಂಡು ಬಂದು ಮಂಡ್ಯದ ಲೋಕಾಯಕ್ತ ಎಸ್.ಪಿ ಸುರೇಶ್ಬಾಬು ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರು. ಈ ದೂರಿನ ಮೇರೆಗೆ ಸುರೇಶ್ ಬಾಬು ಅವರ ನಿರ್ದೇಶನದ ಮೇರೆಗೆ ಲೋಕಾಯುಕ್ತ ಇನ್ಸ್ಪೆಕ್ಟರ್ ಬಿ.ಪಿ.ಬ್ಯಾಟರಾಯಗೌಡ ನೇತೃತ್ವದ ಅಧಿಕಾರಿಗಳ ತಂಡವು ಬುಧವಾರ ಮಧ್ಯಾಹ್ನ ಸುಮಾರು 4ಗಂಟೆ ಸಮಯದಲ್ಲಿ ದಾಳಿ ನಡೆಸಿ ಹೊನ್ನೇನಹಳ್ಳಿ ಗ್ರಾಮದ ಕಾಂತರಾಜು ಎಂಬ ರೈತನಿಂದ 20ಸಾವಿರ ರೂ ಪಡೆಯುತ್ತಿದ್ದಾಗ ದಾಳಿ ನಡೆಸಿ ಪಿಡಿಓ ಸಯ್ಯದ್ ಮುಜಾಕಿರ್ ಮತ್ತು ಬಿಲ್ ಕಲೆಕ್ಟರ್ ನಾಗೇಶ್ ಅವರನ್ನು 20ಸಾವಿರ ರೂ ಲಂಚದ ಸಮೇತ ಬಂಧಿಸಿದ್ದಾರೆ.
ದಾಳಿಯಲ್ಲಿ ಲೋಕಾಯುಕ್ತ ಸಿಬ್ಬಂದಿಗಳಾದ ಶಂಕರ್, ಸಿದ್ದಲಿಂಗಸ್ವಾಮಿ, ದಿನೇಶ್, ಶರತ್, ಮಹದೇವ್, ನವೀನ್, ಇಫ್ರಾನ್ ಮತ್ತಿತರರು ಭಾಗವಹಿಸಿದ್ದರು.





