Mysore
26
broken clouds

Social Media

ಶನಿವಾರ, 08 ಆಗಸ್ಟ್ 2026
Light
Dark

‘ಜೂನಿಯರ್’ ಚಿತ್ರವನ್ನು ‘ಮಾಣಿಕ್ಯ’ಗೆ ಹೋಲಿಸಿದ ವಿ.ರವಿಚಂದ್ರನ್‍

junior

ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಮಗ ಕಿರೀಟಿ ಅಭಿನಯದ ಮೊದಲ ಚಿತ್ರ ‘ಜೂನಿಯರ್‌’ ಇದೇ ಜುಲೈ.18ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಅದಕ್ಕೂ ಮೊದಲು ಚಿತ್ರದ ಪ್ರೀ-ರಿಲೀಸ್‍ ಇವೆಂಟ್‍ ಕಾರ್ಯಕ್ರಮ ನಡೆದಿದ್ದು, ಅದರಲ್ಲಿ ಶಿವರಾಜಕುಮಾರ್‌ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಚಿತ್ರತಂಡಕ್ಕೆ ಶುಭ ಕೋರಿದರು.

ಕಿರೀಟಿಯ ನೃತ್ಯ ನೋಡಿದರೆ ಪುನೀತ್ ನೃತ್ಯ ನೋಡಿದಂತೆ ಆಗುತ್ತದೆ ಎಂದ ಶಿವರಾಜ್‌ ಕುಮಾರ್‌, ‘ನಾನು ಮಾಧುರಿ ದೀಕ್ಷಿತ್ ಅಭಿಮಾನಿ ಈಗ ಶ್ರೀಲೀಲಾ ಅಭಿಮಾನಿ ಆಗಿದ್ದೀನಿ. ಕಿರೀಟಿಯ ಡ್ಯಾನ್ಸ್ ನೋಡಿದರೆ ಅಪ್ಪು ಡ್ಯಾನ್ಸ್ ನೋಡಿದಂತೆ ಅನಿಸುತ್ತದೆ. ಅವರಿಗೆ ಒಳ್ಳೆಯದಾಗಲಿ. ಇದೊಂದು ಕುಟುಂಬ ಸಮೇತ ನೋಡುವ ಚಿತ್ರವಾಗಿದ್ದು, ನಾನು ಸಹ ಕುಟುಂಬ ಸಿನಿಮಾ ನೋಡುತ್ತೇನೆ’ ಎಂದು ಹೇಳಿದರು.

‘ಜೂನಿಯರ್‌’ ಚಿತ್ರದಲ್ಲಿ ಕಿರೀಟಿ ತಂದೆಯಾಗಿ ನಟಿಸಿರುವ ರವಿಚಂದ್ರನ್‍ ಮಾತನಾಡಿ, ‘ಈ ಸಿನಿಮಾ ಅಪ್ಪನ ಕನಸು. ತೆರೆಯ ಹಿಂದೆ ಮಗ ಈ ಚಿತ್ರದ ಮೂಲಕ ದೊಡ್ಡ ಹೆಸರು ಮಾಡಲಿ ಎಂದು ಜನಾರ್ಧನ ರೆಡ್ಡಿ ಬಯಸಿದರೆ, ತೆರೆಯ ಮೇಲೆ ನಾನು ನನ್ನ ಮಗ ದೊಡ್ಡ ಸಾಧನೆ ಮಾಡಲಿ ಎಂದು ಬಯಸುತ್ತೇನೆ. ಪ್ರತಿ ಕುಟುಂಬದಲ್ಲಿ ನಡೆದ ಎಮೋಷನ್‌, ನೋವು ಇದೆ. ಈ ಸಿನಿಮಾವನ್ನು ಮೊನ್ನೆ ಪತ್ನಿ ಜೊತೆ ನೋಡಿದೆ. ಈ ಚಿತ್ರ ನೋಡಿದಾಗ ‘ಮಾಣಿಕ್ಯ’ ನೆನಪಾಯ್ತು. ಇದು ಆಕಾಶದಲ್ಲಿ ಶುರುವಾದ ಚಿತ್ರ. ಏಕೆಂದರೆ, ನಿರ್ದೇಶಕ ರಾಧಾಕೃಷ್ಣ, ಜನಾರ್ಧನ ರೆಡ್ಡಿ ಮತ್ತು ಕಿರೀಟಿಯನ್ನು ನಾನು ಮೊದಲು ಭೇಟಿ ಮಾಡಿದ್ದು ಏರೋಪ್ಲೇನ್‍ನಲ್ಲಿ. ಈ ಚಿತ್ರ ಆಕಾಶದಷ್ಟು ಎತ್ತರಕ್ಕೆ ಬೆಳೆಯಲಿ. ಕಿರೀಟಿ, ಜನಾರ್ಧನ ರೆಡ್ಡಿ ಮಗನ ತರಹ ವರ್ತನೆ ಮಾಡಿಲ್ಲ. ಅವನು ತನ್ನ ಪಾತ್ರದಲ್ಲಿ ಜೀವಿಸಿದ್ದಾನೆ’ ಎಂದು ಹೇಳಿದರು.

ನಾಯಕ ಕಿರೀಟಿ ಮಾತನಾಡಿ, ‘ಜೋಗಿ’ ಚಿತ್ರದ ‘ಹೊಡಿ ಮಗ …’ ಹಾಡಿಗೆ ನಾನು ಮೊದಲು ನೃತ್ಯ ಮಾಡಿದ್ದೆ. ನನಗೆ ಅಪ್ಪು ಅವರ ‘ಜಾಕಿ’ ಚಿತ್ರ ನಟನಾಗಲು ಸ್ಫೂರ್ತಿ ಕೊಟ್ಟಿತು. ಹೀರೋ ಆಗು ಎಂದು ಪುನೀತ್‍ ರಾಜಕುಮಾರ್‌ ನನ್ನನ್ನು ಪ್ರೇರೇಪಿಸಿದರು. ಅವರ ಜೊತೆಗೆ ಹಲವು ದಿನಗಳ ಕಾಲ ಕಳೆದಿದ್ದೇನೆ. ಅವರಿಂದ ತುಂಬಾ ಕಲಿತಿದ್ದೇನೆ’ ಎಂದರು.

‘ಜೂನಿಯರ್‌’ ಚಿತ್ರದಲ್ಲಿ ಕಿರೀಟಿಗೆ ನಾಯಕಿಯಾಗಿ ಶ್ರೀಲೀಲಾ ನಟಿಸಿದ್ದು, ಮಿಕ್ಕಂತೆ ರವಿಚಂದ್ರನ್, ಜೆನಿಲಿಯಾ ಡಿಸೋಜ, ಸುಧಾರಾಣಿ ಮುಂತಾದವರು ನಟಿಸಿದ್ದಾರೆ. ಪುನೀತ್ ರಾಜ್‌ಕುಮಾರ್ ನಿರ್ಮಿಸಿದ್ದ ‘ಮಾಯಾಬಜಾರ್’ ಸಿನಿಮಾದ ನಿರ್ದೇಶಕ ರಾಧಾಕೃಷ್ಣ ರೆಡ್ಡಿ ಈ ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ‘ಬಾಹುಬಲಿ’ ಖ್ಯಾತಿಯ ಕೆ.ಕೆ. ಸೆಂಥಿಲ್ ಕುಮಾರ್ ಛಾಯಾಗ್ರಹಣ ಮಾಡಿದ್ದು, ದೇವಿ ಶ್ರೀಪ್ರಸಾದ್‍ ಸಂಗೀತ ಸಂಯೋಜಿಸಿದ್ದಾರೆ.

Tags:
error: Content is protected !!