Mysore
16
scattered clouds

Social Media

ಶುಕ್ರವಾರ, 06 ಫೆಬ್ರವರಿ 2026
Light
Dark

ಈಗ ಡಿಕೆಶಿ ಸಿಎಂ ಆಗದಿದ್ದರೆ ಮುಂದೆ ಅವಕಾಶ ಸಿಗಲ್ಲ : ಜೆಡಿಎಸ್‌ ಶಾಸಕ ಎ.ಮಂಜು

A Manju

ಮೈಸೂರು : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಈಗ ಮುಖ್ಯಮಂತ್ರಿ ಆಗದಿದ್ದರೆ ಮುಂದೆ ಅವಕಾಶ ಸಿಗುವುದಿಲ್ಲ. ಡಿಕೆಶಿಗೆ ಮುಖ್ಯಮಂತ್ರಿ ಸ್ಥಾನ ಸಿಗುತ್ತದೆ ಎನ್ನುವ ಕಾರಣದಿಂದಲೇ ಹಳೆ ಮೈಸೂರು ಭಾಗದಲ್ಲಿ ಒಕ್ಕಲಿಗರು ಕಾಂಗ್ರೆಸ್ ಬೆಂಬಲಿಸಿದರು ಎಂದು ಮಾಜಿ ಸಚಿವರೂ ಆದ ಜಾ.ದಳ ಶಾಸಕ ಎ.ಮಂಜು ಹೇಳಿದರು.

ಚಾಮುಂಡೇಶ್ವರಿ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ರಾತ್ರಿ ೧೨ಗಂಟೆಗೆ ಹುಟ್ಟಿದ ಪಾರ್ಟಿ ಕಾಂಗ್ರೆಸ್. ರಾತ್ರೋ ರಾತ್ರಿ ಅಲ್ಲಿ ಏನು ಬೇಕಾದರೂ ಬದಲಾಗುತ್ತದೆ. ಡಿ.ಕೆ.ಶಿವಕುಮಾರ್ ಕಾರಣದಿಂದಲೇ ಹಳೆ ಮೈಸೂರು ಭಾಗದಲ್ಲಿ ಒಕ್ಕಲಿಗರು ಕಾಂಗ್ರೆಸ್‌ಗೆ ಮತ ಹಾಕಿದರು. ೩೦,೪೦ ಸೀಟುಗಳು ಕಾಂಗ್ರೆಸ್‌ಗೆ ಜಾಸ್ತಿ ಬಂದವು. ಈಗ ಜನರಿಗೆ ನಾವು ಮೋಸ ಹೋದೆವು ಎಂಬುದು ಅರ್ಥವಾಗುತ್ತಿದೆ. ೨೦೧೩ರಲ್ಲಿ ಇದ್ದಂತಹ ಸಿದ್ದರಾಮಯ್ಯ ಈಗ ಸಂಪೂರ್ಣವಾಗಿ ಬದಲಾಗಿದ್ದಾರೆ. ಡಿ.ಕೆ.ಶಿವಕುಮಾರ್ ಅವರಿಗೆ ಇದು ಕೊನೆಯ ಅವಕಾಶ. ಈಗ ಸಿಎಂ ಆದರೆ ಆಗಬೇಕು. ಇಲ್ಲದಿದ್ದರೆ ಮುಂದೆ ಅವಕಾಶ ಸಿಗಲ್ಲ. ಒಪ್ಪಂದವೇ ಆಗಿದ್ದರೆ ಸಿದ್ದರಾಮಯ್ಯ ಬಿಟ್ಟುಕೊಡಬೇಕು ಕಾಂಗ್ರೆಸ್‌ನಲ್ಲಿ ಶಾಸಕರಿಂದ ಏನು ತೀರ್ಮಾನ ಆಗುವುದಿಲ್ಲ. ಹೈಕಮಾಂಡ್ ಎಲ್ಲವನ್ನೂ ತೀರ್ಮಾನ ಮಾಡಲಿದೆ ಎಂದರು.

ಜಾ.ದಳ ಮತ್ತು ಬಿಜೆಪಿಯವರಿಗೆ ಸಿದ್ದರಾಮಯ್ಯ ಆಗಲಿ, ಡಿ.ಕೆ.ಶಿವಕುಮಾರ್ ಆಗಲಿ. ಯಾರೇ ಮುಖ್ಯಮಂತ್ರಿಯಾದರೂ ನಮಗೆ ಸಮಸ್ಯೆ ಇಲ್ಲ. ೨೦೨೮ಕ್ಕೆ ನಾವು ಅಧಿಕಾರಕ್ಕೆ ಬಂದೇ ಬರುತ್ತೇವೆ. ಸಿದ್ದರಾಮಯ್ಯ ಈಗ ರಾಜ್ಯದ ಮುಖ್ಯಮಂತ್ರಿ. ಪದೇ ಪದೆ ಯಾಕೆ ನಾನೇ ಮುಖ್ಯಮಂತ್ರಿ ಎಂದು ಅವರೇ ಹೇಳುತ್ತಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ ಎಂದು ಟೀಕಿಸಿದರು.

ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ದುಡ್ಡಿಲ್ಲ. ಇದನ್ನು ಮರೆಮಾಚಲು ಈ ರೀತಿಯ ಗೊಂದಲಗಳನ್ನು ಸೃಷ್ಟಿ ಮಾಡುತ್ತಿದ್ದಾರೆ. ಖಜಾನೆ ಖಾಲಿ ಆಗಿರುವುದರಿಂದ ಶಾಸಕರ ಕ್ಷೇತ್ರಗಳಿಗೂ ಅನುದಾನ ಇಲ್ಲದಂತಾಗಿದೆ ಎಂದರು.

ಜಿ.ಟಿ.ದೇವೇಗೌಡರು ನಮ್ಮ ಪಕ್ಷದಲ್ಲಿದ್ದಾರೆ. ಮನೆ ಅಂದ ಮೇಲೆ ಸಮಸ್ಯೆಗಳು ಇರುತ್ತವೆ. ನಂತರ ಎಲ್ಲವೂ ಬಗೆಹರಿಯುತ್ತದೆ. ಚುನಾವಣೆ ಬಂದಾಗ ನಾವೆಲ್ಲ ಒಟ್ಟಾಗಿ ಸೇರಿಕೊಳ್ಳುತ್ತೇವೆ. ಯಾವ ಸಮಸ್ಯೆಗಳೂ ಇಲ್ಲ. ಜಿ.ಟಿ.ದೇವೇಗೌಡರ ಜತೆ ಮಾತನಾಡುತ್ತೇವೆ. ನಮ್ಮ ನಾಯಕರಾಗಿರುವ ಕಾರಣ ಯಾವಾಗಬೇಕಾದರೂ ಸರಿ ಹೋಗುತ್ತಾರೆ ಎಂದರು.

Tags:
error: Content is protected !!