ಬೆಂಗಳೂರು: ನಟಿ ರಶ್ಮಿಕಾ ಸಿನಿಮಾಗಳ ಜೊತೆ ಜೊತೆ ವಿವಾದಾತ್ಮಕ ಹೇಳಿಕೆಗಳಿಂದಲೇ ಆಗಾಗ ಟೀಕೆಗೆ ಗುರಿಯಾಗುತ್ತಲೇ ಇದ್ದಾರೆ. ಈ ಬಾರಿ ತಮ್ಮದೇ ಕೊಡವ ಸಮುದಾಯದ ಇತಿಹಾಸದ ಬಗ್ಗೆ ಹೇಳಿಕೆಯೊಂದನ್ನು ನೀಡಿದ್ದಾರೆ. ಈ ಹೇಳಿಕೆ ವಿವಾದ ಹುಟ್ಟುಹಾಕಿದ್ದು, ಚಿತ್ರರಂಗದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
2017ರಲ್ಲಿ ರಕ್ಷಿತ್ ಶೆಟ್ಟಿ ಜೊತೆಗಿನ ನಿಶ್ಚಿತಾರ್ಥ ಮುರಿದುಬಿದ್ದ ಮೇಲೆ ತೆಲುಗು ಇಂಡಸ್ಟ್ರಿಗೆ ಹೋದ ಮೇಲೆ ಅಲ್ಲಿ ಹಿಟ್ ಚಿತ್ರಗಳನ್ನು ನೀಡುತ್ತಾ ಕನ್ನಡ ಬಗ್ಗೆ ನೀಡಿದ ಕೆಲವು ಹೇಳಿಕೆಗಳಿಂದ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಇಂದು ರಶ್ಮಿಕಾ ಮಂದಣ್ಣ ಭಾರತೀಯ ಚಿತ್ರರಂಗದ ನಟಿಯರಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಮಟ್ಟಿಗೆ ಬೆಳೆದಿದ್ದಾರೆ. ತೆಲುಗು, ತಮಿಳು, ಬಾಲಿವುಡ್ ನಲ್ಲಿ ನಟಿಸಿದ ಅನೇಕ ಚಿತ್ರಗಳು ಗೆದ್ದಿವೆ. ನ್ಯಾಶನಲ್ ಕ್ರಶ್ ಎಂದು ಅಭಿಮಾನಿಗಳು ಅವರನ್ನು ಪ್ರೀತಿಯಿಂದ ಕರೆಯುತ್ತಾರೆ.
ಸಂದರ್ಶನದಲ್ಲಿ ಮಾತನಾಡಿರುವ ರಶ್ಮಿಕಾ ಮಂದಣ್ಣ, `ನಮ್ಮ ಕೊಡವ ಸಮುದಾಯದಿಂದ ಯಾರೂ ಚಿತ್ರರಂಗಕ್ಕೆ ಬರಲಿಲ್ಲ. ಬಹುಶಃ ನಮ್ಮ ಸಮುದಾಯದಿಂದ ಚಿತ್ರರಂಗಕ್ಕೆ ಬಂದವಳು ನಾನೊಬ್ಬಳೇ. ನಮ್ಮ ಸಮುದಾಯದವರು ತುಂಬಾನೇ ಜಡ್ಜ್ ಮಾಡುತ್ತಾರೆ. ನಾನು ಆಡಿಷನ್ ಮಾಡುತ್ತೇನೆ ಎಂದು ನನ್ನ ಕುಟುಂಬದವರಿಗೆ ಹೇಳಿರಲಿಲ್ಲ. ಸಿನಿಮಾ ರಂಗಕ್ಕೆ ಹೋಗುತ್ತೇನೆ ಎಂದು ಕೂಡ ಅವರಿಗೆ ತಿಳಿಸಿರಲಿಲ್ಲ’ ಎಂದು ಹೇಳಿದ್ದಾರೆ.
ಸದ್ಯ ರಶ್ಮಿಕಾ ಹೇಳಿಕೆಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದೆ. ಭಾರತ ಚಿತ್ರರಂಗದಲ್ಲಿ ತುಂಬಾನೇ ಖ್ಯಾತಿ ಪಡೆದಿರೋ ಪ್ರೇಮಾ ಅವರು ಕೂಡ ಕೊಡವ ಸಮುದಾಯದವರೇ. ಅವರು ಗಳಿಸಿದ ಖ್ಯಾತಿ ತುಂಬಾನೇ ದೊಡ್ಡದು. ರಶ್ಮಿಕಾ ಹುಟ್ಟುವಾಗ ಪ್ರೇಮಾ ಅವರು ಚಿತ್ರರಂಗಕ್ಕೆ ಬಂದು ಒಂದು ವರ್ಷ ಕಳೆದಿತ್ತು. ಅವರ ಬಗ್ಗೆ ರಶ್ಮಿಕಾಗೆ ಗೊತ್ತಿಲ್ಲ ಅನ್ನೋದು ಹಾಸ್ಯಾಸ್ಪದ ಎಂದು ಅನೇಕರು ಅಭಿಪ್ರಾಯ ಹೊರಹಾಕಿದ್ದಾರೆ.





