Mysore
21
broken clouds

Social Media

ಭಾನುವಾರ, 09 ಆಗಸ್ಟ್ 2026
Light
Dark

ಮೋದಿ ಸರ್ಕಾರಕ್ಕೆ ಶೂನ್ಯ ಅಂಕ ಕೊಡುವವರು ಸರಿಯಾಗಿ ಓದಿ, ತಿಳಿದು ಮಾತನಾಡಲಿ: ಪ್ರಹ್ಲಾದ್‌ ಜೋಶಿ

ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಸಾಧನೆಗೆ ಶೂನ್ಯ ಅಂಕ ನೀಡುವವರಿಗೆ ಓದುವಂತಹ ಬುದ್ಧಿ ಇರಬೇಕು. ಇಲ್ಲವೇ ಕಡೆ ಪಕ್ಷ ಓದುವಂತವರನ್ನಾದರೂ ಜೊತೆಯಲ್ಲಿ ಇಟ್ಟುಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ತಿರುಗೇಟು ಕೊಟ್ಟಿದ್ದಾರೆ.

ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮುಂದಿನ ವರ್ಷಗಳಲ್ಲಿ ಭಾರತ 3ನೇ ಆರ್ಥಿಕ ಶಕ್ತಿಯಾಗಿ ರೂಪುಗೊಳ್ಳಲಿದೆ. 2047ಕ್ಕೆ ವಿಕಸಿತ ಭಾರತವಾಗಿ ರೂಪುಗೊಳ್ಳಲು ನಮ್ಮ ಎಲ್ಲಾ ರೋಡ್ ಮ್ಯಾಪ್‍ಗಳು ಸಿದ್ಧವಾಗಿವೆ ಎಂದು ಹೇಳಿದರು.

ಆಪರೇಷನ್ ಸಿಂಧೂರ ವಿಚಾರದಲ್ಲಿ ಪಾಕಿಸ್ತಾನದ ವರ್ಷನ್ ಮಾತನಾಡುವವರಿಗೆ ನಾನು ಉತ್ತರ ಕೊಡುವುದಿಲ್ಲ. ಅವರ ವಾಯುನೆಲೆ ನಾಶವಾಗಿವೆ ಎಂದು ಪಾಕಿಸ್ತಾನವೇ ಒಪ್ಪಿಕೊಂಡಿದೆ. ಇಂದು ಪ್ರಪಂಚದಾದ್ಯಂತ ಹೋಗಿ ಅವರು ಅಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷದವರು ಯಾಕೆ ಪಾಕಿಸ್ತಾನಕ್ಕೆ ಅನುಕೂಲ ಆಗುವ ರೀತಿ ಯಾಕೆ ಮಾತನಾಡುತ್ತಿದ್ದಾರೆ? ಅಕ್ರಮ ನುಸುಳುಕೋರರನ್ನು ತಡೆಯುವ ಕೆಲಸ ಆಗುತ್ತಿದೆ ಎಂದರು.

ಭಾರತ ಜಗತ್ತಿನ ನಾಲ್ಕನೇ ಅರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ. ಕಡು ಬಡತನ ಶೇ.21ರಿಂದ ಶೇ.5ಕ್ಕೆ ಇಳಿದಿದೆ. 26 ಕೋಟಿಯಷ್ಟು ಜನರು ಬಡತನ ರೇಖೆಯಿಂದ ಹೊರಗೆ ಬಂದಿದ್ದಾರೆ. ಇದು ಸಮರ್ಥ ನಾಯಕತ್ವ ಮತ್ತು ಸ್ಥಿರ ಸರ್ಕಾರದ ಪರಿಣಾಮ ಎಂದು ಹೇಳಿದರು.

ಕೋವಿಡ್ ಭಾರತಕ್ಕೆ ಬಂದರೆ ಕೋಟಿ ಕೋಟಿ ಜನ ಸಾಯ್ತಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ನಾವು ಯಾವ ರೀತಿ ಎದುರಿಸಿದ್ದೇವೆ ಅನ್ನೋದನ್ನು ಇಡೀ ಜಗತ್ತು ನೋಡಿದೆ. ನಮ್ಮ 137 ಕೋಟಿ ಜನರಿಗೆ ವ್ಯಾಕ್ಸಿನ್ ಕೊಟ್ಟು ಬೇರೆ ದೇಶಗಳಿಗೂ ಕಳಿಸಿಕೊಟ್ಟಿದ್ದೇವೆ ಎಂದರು.

Tags:
error: Content is protected !!