Mysore
21
scattered clouds

Social Media

ಶುಕ್ರವಾರ, 27 ಫೆಬ್ರವರಿ 2026
Light
Dark

ರೇಣುಕಾಸ್ವಾಮಿ ಕೊಲೆ ಪ್ರಕರಣ: ಆರೋಪಿ ದರ್ಶನ್‌ಗೆ ಬಿಜಿಎಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್‌ಗೆ ಬೆಂಗಳೂರಿನ ಬಿಜಿಎಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಕೊಲೆ ಪ್ರಕರಣದಲ್ಲಿ ಮೂರು ತಿಂಗಳಿಗೂ ಹೆಚ್ಚು ಕಾಲ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದ ದಾಸನಿಗೆ ಆರು ವಾರಗಳ ಕಾಲ ಮಧ್ಯಂತರ ಜಾಮೀನು ಸಿಕ್ಕಿದೆ.

ಈ ಹಿನ್ನೆಲೆಯಲ್ಲಿ ಕಳೆದ ನಾಲ್ಕು ವಾರಗಳಿಂದ ದರ್ಶನ್‌ ಬಿಜಿಎಸ್‌ ಆಸ್ಪತ್ರೆಯಲ್ಲಿ ಪಿಸಿಯೋಥೆರಪಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆಸ್ಪತ್ರೆ ಮೂಲಗಳಿಂದ ತಿಳಿದುಬಂದಿದೆ.

ಮತ್ತೊಂದೆಡೆ ರೆಗ್ಯುಲರ್‌ ಬೇಲ್‌ಗೆ ನಟ ದರ್ಶನ್‌ ಅರ್ಜಿ ಸಲ್ಲಿಸಿದ್ದು, ಅದರ ವಿಚಾರಣೆಯೂ ಸಹ ಕೋರ್ಟ್‌ನಲ್ಲಿ ನಡೆಯುತ್ತಿದೆ.

ನಾಳೆ ವಿಚಾರಣೆ ನಡೆಯಲಿದ್ದು, ಈ ನಡುವೆ ದರ್ಶನ್‌ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಫೋಟೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ಫುಲ್‌ ವೈರಲ್‌ ಆಗಿದೆ.

ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ನಟ ದರ್ಶನ್‌ಗೆ ಚಿಕಿತ್ಸೆಗೆಂದು ಹೈಕೋರ್ಟ್‌ 6 ವಾರಗಳ ಕಾಲ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು.

ಈಗ ಚಿಕಿತ್ಸೆಗಾಗಿಯೇ ದರ್ಶನ್‌ ಬಳ್ಳಾರಿಯಿಂದ ಬೆಂಗಳೂರಿಗೆ ಬಂದು 32 ದಿನಗಳು ಮುಗಿದು ಹೋಗಿವೆ. ಇನ್ನು ಕೇವಲ 9 ದಿನಗಳು ಕಳೆದರೆ ಮತ್ತೆ ದರ್ಶನ್‌ ಜೈಲಿಗೆ ವಾಪಸ್ಸಾಗಬೇಕು. ಅಷ್ಟರಲ್ಲಿ ದರ್ಶನ್‌ಗೆ ರೆಗ್ಯುಲರ್‌ ಬೇಲ್‌ ಸಿಕ್ಕರೆ ಸೇಫ್‌ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇನ್ನು ಸದ್ಯಕ್ಕೆ ನಟ ದರ್ಶನ್‌ಗೆ ಸಂಪೂರ್ಣ ಶಸ್ತ್ರಚಿಕಿತ್ಸೆ ಆಗಿಲ್ಲ. ಕಾರಣ ಅವರು ರಕ್ತದೊತ್ತಡದಿಂದ ಬಳಲುತ್ತಿದ್ದು, ಬಿಪಿ ಇನ್ನೂ ಕಂಟ್ರೋಲ್‌ಗೆ ಬಂದಿಲ್ಲ ಎಂದು ಹೇಳಲಾಗುತ್ತಿದೆ. ಈಗ ಬಿಪಿ ನಾರ್ಮಲ್‌ ಇದ್ದು, ಈಗ ಸರ್ಜರಿ ಮಾಡಿಸಿಕೊಳ್ಳಲು ನಟ ದರ್ಶನ್‌ ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ.

Tags:
error: Content is protected !!