Mysore
29
clear sky

Social Media

ಶನಿವಾರ, 31 ಜನವರಿ 2026
Light
Dark

ಪಶುಪಾಲನಾ ಇಲಾಖೆಗೆ 700 ʼಡಿʼ ಗ್ರೂಪ್‌ ನೌಕರರ ನೇಮಕ: ಸಚಿವ ವೆಂಕಟೇಶ್

ಮೈಸೂರು: ಪಶುಪಾಲನಾ ಇಲಾಖೆಯಲ್ಲಿನ 700 ಮಂದಿ ʻಡಿʼ ಗ್ರೂಪ್‌ ನೌಕರರ ನೇಮಕಕ್ಕೆ ಸಿಎಂ ಸಿದ್ದರಾಮಯ್ಯ ಒಪ್ಪಿಗೆ ಸೂಚಿಸಿ ಸಹಿ ಹಾಕಿದ್ದಾರೆ. ಶೀಘ್ರವೇ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಪಶುಸಂಗೋಪನ ಸಚಿವ ಕೆ.ವೆಂಕಟೇಶ್‌ ತಿಳಿಸಿದರು.

ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಮತ್ತು ಕರ್ನಾಟಕ ಪಶುವೈದ್ಯಕೀಯ ಸಂಘದ ವತಿಯಿಂದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಘಟಿಕೋತ್ಸವ ಭವನದಲ್ಲಿ ಶನಿವಾರ ಆಯೋಜಿಸಿದ್ದ “ಪಶುವೈದ್ಯರ ರಾಜ್ಯ ಮಟ್ಟದ ತಾಂತ್ರಿಕ ವಿಚಾರ ಸಂಕಿರಣ ಹಾಗೂ 6ನೇ ಸುತ್ತಿನ ಕಾಲುಬಾಯಿಜ್ವರ ಲಸಿಕಾ ಕಾರ್ಯಕ್ರಮ” ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಲಾಖೆಯಲ್ಲಿರುವ ಕೊರತೆಗಳನ್ನು ಸರಿಪಡಿಸಬೇಕೆಂಬ ನಿಟ್ಟಿನಲ್ಲಿ 400 ಮಂದಿ ಪಶುವೈದ್ಯರನ್ನು ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಿಕೊಂಡಿದ್ದೇವೆ. ಅಲ್ಲದೇ 400ಖಾಯಂ ವೈದ್ಯರ ನೇಮಕಾತಿಗೆ ಕೆಪಿಎಸ್‌ಸಿ ಮಟ್ಟದಲ್ಲಿ ಪ್ರಕಿಯೆ ನಡೆದಿದೆ. ಇಲಾಖೆಯಲ್ಲಿ ನ್ಯೂನ್ಯತೆ ಹಾಗೂ ಕೊರತೆಯನ್ನು ಸರಿಪಡಿಸಲು ಸರ್ಕಾರ ಬದ್ದವಿದೆ ಎಂದರು.

ಮನುಷ್ಯರಿಗೆ ಕಷ್ಟ ಬಂದರೆ ಹೇಳಿಕೊಳ್ಳುತ್ತಾರೆ. ಆದರೆ ಪ್ರಾಣಿಗಳಿಗೆ ಖಾಯಿಲೆ ಬಂದರೆ ನಾವೇ ಅರ್ಥಮಾಡಿಕೊಂಡು ಚಿಕಿತ್ಸೆ ನೀಡಬೇಕಾಗುತ್ತದೆ. ಈ ಕಾರಣದಿಂದ ಬಹಳ ಜವಾಬ್ದಾರಿ ಇರುವ ಇಲಾಖೆ ಇದಾಗಿದೆ ಎಂದು ಹೇಳಿದರು.

ಖಾಸಗಿ ಪಶುವೈದ್ಯ ಕಾಲೇಜು ಪ್ರಾರಂಭಿಸಲು ಮನವಿ ಬಂದಿತ್ತು. ಆದರೆ ಮುಖ್ಯಮಂತ್ರಿಗಳು ಖಾಸಗಿ ಕಾಲೇಜಿಗೆ ಒಪ್ಪಿಗೆ ಸೂಚಿಸಲಿಲ್ಲ. ಬೇಕೆದ್ದರೆ ಸರ್ಕಾರದಿಂದಲೇ ಕಾಲೇಜು ತೆರೆಯರಿ ಎಂದು ಸಲಹೆ ನೀಡಿದರು. ಅದರಂತೆ ಸರ್ಕಾರದಿಂದ ನೂತನವಾಗಿ ಎರಡು ಕಾಲೇಜು ಸ್ಥಾಪಿಸಲು ನಿರ್ಧಿರಿಸಲಾಗಿದೆ ಎಂದರು.

ಕಾಲುಬಾಯಿಜ್ವರದ ಲಸಿಕೆಯನ್ನು ತಿಂಗಳಳೊಳಗೆ ಎಲ್ಲಾ ರಾಸುಗಳಿಗೆ ನೀಡಬೇಕು. ರೈತರು ಲಭ್ಯವಿರುವ ಮುಂಜಾನೆ ಸಮಯದಲ್ಲಿ ತೆರಳಿ ಲಸಿಕೆ ಕಾರ್ಯ ಕೈಗೊಳ್ಳಬೇಕು. ರೈತರಿಂದ ಕೆಲವು ದೂರುಗಳು ಬರುತ್ತವೆ. ತಕ್ಷಣವೇ ಸ್ಪಂದಿಸುವ ಕೆಲಸವನ್ನು ವೈದ್ಯರು ಮಾಡಬೇಕು. ರೈತರಿಗೆ ಯಾವುದೇ ಕಾರಣಕ್ಕೂ ತೊಂದರೆ ಉಂಟಾಗಬಾರದು ಎಂದು ಸೂಚಿಸಿದರು.

ಕಾರ್ಯಕ್ರಮದಲ್ಲಿ ಶಾಸಕರಾದ ಹರೀಶ್ ಗೌಡ, ವಿಧಾನ ಪರಿಷತ್ ಸದಸ್ಯರಾದ ಸಿ.ಎನ್.ಮಂಜೇಗೌಡ, ಆಯುಕ್ತರಾದ ರೂಪ, ನಿರ್ದೇಶಕ ಮಂಜುನಾಥ್ ಪಾಳೇಗಾರ್, ಜಂಟಿ ನಿರ್ದೇಶಕ ಶಿವಣ್ಣ, ಉಪ ನಿರ್ದೇಶಕ ನಾಗರಾಜು ಹಾಗೂ ಡಾ.ವೈ.ಡಿ.ರಾಜಣ್ಣ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Tags:
error: Content is protected !!