Mysore
25
scattered clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಅಂಬೇಡ್ಕರ್‌ ದೃಷ್ಟಿಯ ಬೌದ್ಧ ಧಮ್ಮದ ಪ್ರಚಾರ ಅಗತ್ಯ: ಪ್ರೊ.ಸಿ ಗುರುಸಿದ್ದಯ್ಯ ಅಭಿಮತ

ಮೈಸೂರು: ಗೌತಮ ಬುದ್ಧನ ಪಂಚಶೀಲ ತತ್ತ್ವ ಹಾಗೂ ಅಂಬೇಡ್ಕರ್‌ ವಿಚಾರಧಾರೆ ತಳಹದಿ ಮೇಲೆ ಭಾರತದಲ್ಲಿ ಭೌದ್ಧ ಧರ್ಮದ ಪ್ರಚಾರ ಹೆಚ್ಚಾಗಬೇಕು ಎಂದು ಇತಿಹಾಸ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಸಿ.ಗುರುಸಿದ್ಧಯ್ಯ ಹೇಳಿದರು.

ಮೈಸೂರು ವಿ.ವಿ ಮಾನಸಗಂಗೋತ್ರಿಯ ಬುದ್ಧ ಪ್ರತಿಮೆ ಬಳಿ ಬುದ್ಧ ಬಳಗ ಆಯೋಜಿಸಿದ್ದ ” ೬೮ನೇ ಧಮ್ಮ ಸ್ವೀಕಾರ ದಿನ” ಕಾರ್ಯಕ್ರಮದಲ್ಲಿ ಬುದ್ಧ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.

ಭಾರತದಲ್ಲೇ ಜನ್ಮ ತಾಳಿದ ಬೌದ್ಧ ಧರ್ಮ ಶ್ರೀಲಂಕಾ, ಚೀನಾ,ಜಪಾನ್‌ ಸೇರಿದಂತೆ ದಕ್ಷಿಣ ಏಷ್ಯದ ಅನೇಕ ದೇಶಗಳಿಗೆ ವ್ಯಾಪಿಸಿದೆ. ಬೌದ್ಧ ಧರ್ಮದ ಆರಂಭದ ದಿನಗಳು ನೀರಿಕ್ಷೆಗಳನ್ನು ಹುಟ್ಟು ಹಾಕುವ ಜತೆಗೆ ಆಶಾಭಾವನೆ ಮೂಡಿಸಿತು. ನಂತರದ ದಿನಗಳಲ್ಲಿ ರಾಜಪ್ರಭುತ್ವದ ಆಶ್ರಯ ಸಿಗದ ಕಾರಣ ಧಮ್ಮ ವಿಸ್ತಾರಗೊಳ್ಳಲಿಲ್ಲ. 1956ರಲ್ಲಿ ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರು ನಾಗಪುರದಲ್ಲಿ 10ಲಕ್ಷ ಜನರೊಂದಿಗೆ ಬೌದ್ಧ ಧರ್ಮಕ್ಕೆ ಪರಿವರ್ತನೆಗೊಂಡ ಬಳಿಕ ಭಾರತದಲ್ಲಿ ಹೊಸ ಶಕೆ ಪ್ರಾರಂಭವಾಯಿತು ಎಂದು ತಿಳಿಸಿದರು.

ಬುದ್ಧನನ್ನು ಅವತಾರಗಳಿಂದ ಬಿಡಿಸಿಕೊಂಡು ಅಂಬೇಡ್ಕರ್ ಅವರ ಶ್ರೇಷ್ಠ ಮಾನವದೃಷ್ಟಿ ಹಾಗೂ ಜ್ಞಾನದಿಂದ ಅರ್ಥಮಾಡಿಕೊಳ್ಳಬೇಕು. ಧರ್ಮದ ಜೊತೆ ಮುಖ್ಯವಾಗಿ ದಲಿತ ಸಮುದಾಯದಲ್ಲಿರುವ ಬಡತನ, ಅನಕ್ಷರತೆಯನ್ನು ಹೋಗಲಾಡಿಸುವಂತ ಕೆಲಸವೂ ಆಗಬೇಕು ಎಂದರು.

ಬೌದ್ಧ ಧರ್ಮಗಳನ್ನು ಹೊರತು ಪಡಿಸಿ ಭಾರತದಲ್ಲಿರುವ ಎಲ್ಲಾ ಧರ್ಮಗಳಲ್ಲೂ ಪುರೋಹಿತ ಚಿಂತನೆಗಳಿದ್ದು, ಗುಲಾಮಗಿರಿಗೆ ತಳ್ಳುತ್ತಿವೆ‌ ಎಂದು ಅಂಬೇಡ್ಕರ್ ಹೇಳುತ್ತಾರೆ. ಬುದ್ಧನ ಧರ್ಮದಲ್ಲಿ ಇರುವಷ್ಟು ಸ್ವಾತಂತ್ರ್ಯ ಬೇರೆ ಧರ್ಮಗಳಲ್ಲಿ ಕಾಣವುದು ಕಷ್ಟ. ಹಾಗಾಗಿ ಅಂಬೇಡ್ಕರ್ ಅವರ ದಾರಿಯಲ್ಲಿ ಬುದ್ದನ ಜ್ಞಾನವನ್ನು ಮನೆಮನೆಗೆ ಪ್ರಚುರ ಪಡಿಸುವಲ್ಲಿ ಟೊಂಕಕಟ್ಟಿ ನಿಲ್ಲಬೇಕು ಎಂದು ನುಡಿದರು.

ಬುದ್ಧ ಬಳಗದ ಜಗದೀಶ್ ಮಹದೇವಯ್ಯ, ಸಂಶೋಧನಾ ವಿದ್ಯಾರ್ಥಿಗಳಾದ ಕೆ.ಆರ್.ರಂಗಸ್ವಾಮಿ, ಕಲ್ಲಹಳ್ಳಿ ಕುಮಾರ್, ಕುಶಾಲ್, ಮಲ್ಲೇಶ್.ಎಂ, ಗಣೇಶ್, ಲೋಕೇಶ್, ಸಿದ್ದಪ್ಪಾಜಿ, ಗೌತಮ್, ಪರಂ ಜ್ಯೋತಿ, ಪ್ರಜ್ವಲ್ ಇನ್ನಿತರರು ಹಾಜರಿದ್ದರು. ಕೆ.ಎಂ. ಶೇಷಣ್ಣಸ್ವಾಮಿ ಮತ್ತು ತಂಡದವರು ಬುದ್ಧ ಮತ್ತು ಭೀಮಗೀತೆ ಗಾಯನವನ್ನು ಹಾಡಿದರು.

Tags: